Powered By Blogger

ಬುಧವಾರ, ಸೆಪ್ಟೆಂಬರ್ 15, 2010

ಕರಿಮಣಿಯ ಸರದೊಳ್ ಚೆಂಬವಳಮಂ ಕೋದಂತೆ

    ಸಂಸ್ಕೃತದಲ್ಲಿ ಪಂಚ ಮಹಾ ಕಾವ್ಯಗಳು ಎಂದು ಪ್ರಸಿದ್ಧವಾಗಿರುವವು ಕಾಳಿದಾಸ'ರಘುವಂಶ' ಮತ್ತು 'ಕುಮಾರಸಂಭವ', ಭಾರವಿ'ಕಿರಾತಾರ್ಜುನೀಯ' ಮಾಘ'ಶಿಶುಪಾಲ ವಧ' ಶ್ರೀಹರ್ಷ'ನೈಷಧೀಯ ಚರಿತ' ಕನ್ನಡದಲ್ಲಿಯೂ ಹೀಗೆ ಅಸಂಖ್ಯಾತ ಕಾವ್ಯಗಳು ಮಹಾಕಾವ್ಯಗಳು ಸೃಷ್ಟಿಯಾಗಿವೆ.
    ಕಾವ್ಯವೊಂದು ಮಹಾಕಾವ್ಯ ಎಂದೆನಿಸಬೇಕಾದರೆ ಅದು ಹತ್ತು ಹಲವು ಲಕ್ಷಣಗಳನ್ನು ಹೊಂದಿರಬೇಕು. ಲಕ್ಷಣ ಕಾವ್ಯಗಳು ಈ ಲಕ್ಷಣಗಳನ್ನು ವಿವರಿಸುತ್ತವೆ. ಅಷ್ಟಾದಶ ವರ್ಣನೆಗಳು ಸರ್ಗ ಪ್ರತಿಸರ್ಗಗಳು ಇರಬೇಕಂಬ ನಿಯಮಗಳನ್ನು ಅಳವಡಿಸಿಕೊಂಡ ಕಾವ್ಯವನ್ನು ಮಹಾಕಾವ್ಯ ಎಂದು ವಿದ್ವಾಂಸರು ಪರಿಗಣಿಸುತ್ತಾರೆ.ಒಂದು ಕಾವ್ಯ ಮಹಾಕಾವ್ಯ ಎಂದೆನಿಸಿಕೊಳ್ಳಬೇಕಾದರೆ- ಚಿನ್ನವನ್ನು ಅದರ ಶುದ್ಧತೆಯ ಕುರಿತು ಪರೀಕ್ಷಿಸಿದಂತೆ  ಹತ್ತು ಹಲವು ರೀತಿ ಪರಿಶೀಲಿಸುತ್ತಾರೆ.
    'ಲೋಕೋ ಭಿನ್ನ ರುಚಿ:' ಎಂಬ ಉಕ್ತಿಯಂತೆ ಜನರಿಗೆ ವಿವಿಧ ರೀತಿಯ ಹವ್ಯಾಸ ಆಸಕ್ತಿಗಳು ಇರುವುದು ಸಹಜ. ವಾಙ್ಮಯ ಜಗತ್ತಿನಲ್ಲಿ ಆಸಕ್ತರಾದವರಿಗೆ ವಿಹಾರ ಮಾಡಲಾಗದಷ್ಟು ಕಾವ್ಯರಾಶಿಯಿದೆ! ಅದರಲ್ಲಿ ಅಲ್ಪ ಮಾತ್ರ ರುಚಿ ತೋರಿಸುವ ಪ್ರಯತ್ನ ಇದು. ಒಬ್ಬ ವ್ಯಕ್ತಿ ಕ್ರೀಡೆಗಳಲ್ಲಿ ಆಸಕ್ತ, ಇನ್ನೊಬ್ಬ ಶಿಕ್ಷಣದಲ್ಲೇ ಆಸಕ್ತ, ಮತ್ತೊಬ್ಬ ಮತ್ತೊಂದರಲ್ಲಿ ಆಸಕ್ತ, ಹೀಗೆ ಆಸಕ್ತರಾದವರನ್ನು ತನ್ನೆಡೆಗೆ ಅತ್ಯಂತ ವಿಶಿಷ್ಟವಾಗಿ ಆಕರ್ಷಿಸುವುದು ಸಂಗೀತ ಮತ್ತು ಸಾಹಿತ್ಯ.
     ಮಹಾಕಾವ್ಯಗಳು ಕರಿಮಣಿಯ ಸರದಂತೆ ಆದರೆ ಅದರಲ್ಲಿ ಕೆಂಪು ಹವಳದಂತೆ ಕಾಣುವ ಒಂದು ಸುಂದರ ಶ್ಲೋಕ ಹಾಗು ಅದರ ಹಿನ್ನೆಲೆಯ ಕುರಿತು ಇಲ್ಲಿ ವಿವರಣೆ ಕೊಡಲ್ಪಟ್ಟಿದೆ.
    ಮಹಾಕವಿ ಭಾರವಿ 'ಶ್ರೇಷ್ಠ ಕವಿ' ಎಂದು ಊರಿಡೀ ಹೆಸರುವಾಸಿಯಾಗಿದ್ದ. ಅವನ ಕುರಿತು ಎಲ್ಲರೂ ಹೊಗಳುವವರೇ ಆಗಿದ್ದರು. ಭಾರವಿಗೆ ಅದೊಂದು ಹೆಮ್ಮೆ. ಆದರೆ ಅವನ ತಂದೆ ಒಮ್ಮೆಯೂ ಪ್ರಶಂಸಿಸದ ಕಾರಣ ತಂದೆಯೇ ತನ್ನ ಶತ್ರು ಎಂದು ಭಾವಿಸಿದ್ದ. ಒಂದು ಕೆಟ್ಟ ಗಳಿಗೆಯಲ್ಲಿ  ತಂದೆಯ ತಲೆಯ ಮೇಲೆ ಕಲ್ಲನ್ನು ಎತ್ತಿ ಹಾಕಿ ಸಾಯಿಸಿಬಿಡಬೇಕು ಎಂದು ಯೋಚಿಸಿಕೊಂಡ.
     ಆ ದಿನ ಕಲ್ಲನ್ನು  ಇಟ್ಟುಕೊಂಡು ಅಟ್ಟದ ಮೇಲೆ ಕುಳಿತಿದ್ದ. ಅದೇ ವೇಳೆ ಕೆಳಗಿನಿಂದ ಅವನ ತಂದೆ ತಾಯಿಯರ ಮಾತು ಕೇಳಿತು. ತಾಯಿ"ಊರವರೆಲ್ಲ ನಮ್ಮ ಮಗನನ್ನು ಹೊಗಳಿದರೂ ನೀವು ಮಾತ್ರ ಯಾಕೆ ನಮ್ಮ ಮಗನನ್ನು ಹೊಗಳುವುದಿಲ್ಲ?" ಎಂದು ಕೇಳಿದಳು. ಅದಕ್ಕೆ ಭಾರವಿಯ ತಂದೆ"ಯಾವತ್ತು ತಂದೆ ತಾಯಿಯರು ಮಕ್ಕಳನ್ನು ಹೊಗಳಬಾರದು ಅದರಿಂದ ಅವರಿಗೆ ಗರ್ವ ಬರುತ್ತದೆ. ಒಬ್ಬರ ದುರ್ಬಲತೆಯನ್ನು ಎದುರಿಗೆ ಹೇಳಬೇಕು, ಅವರ ಕುರಿತು ಹಿಂದಿನಿಂದ ಹೊಗಳಬೇಕು" ಎಂದು ಹೇಳಿದ. ಅದನ್ನು ಕೇಳಿ ಭಾರವಿಗೆ ಸಖೇದಾಶ್ಚರ್ಯವಾಯಿತು. ಅವನು ತಕ್ಷಣ ತನ್ನ ತಪ್ಪಿಗೆ ಪ್ರಾಯಶ್ಚಿತ್ತ ಏನು ಮಾಡಿಕೊಳ್ಳಬೇಕೆಂದು ತಂದೆಯ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ. ಆಗ ಅವನ ತಂದೆ " ಆರು ತಿಂಗಳುಗಳ ಕಾಲ ಮಾವನ ಮನೆಯಲ್ಲಿ ವಾಸ ಮಾಡಬೇಕು" ಎಂದು ಶಿಕ್ಷೆ ನೀಡಿದ. ಮಾವನ ಮನೆಯಲ್ಲಿ ವಾಸ ಮಾಡುವಾಗ ಬಹಳಷ್ಟು ವಿಷಯಗಳು ಅನುಭವಕ್ಕೆ ಬಂದವು. ಹೆಂಡತಿಗೆ ಹಣದ ಅವಶ್ಯಕತೆಯಾದಾಗ ಏನು ಮಾಡಲೂ ತೋಚದೇ ಒಂದು ಶ್ಲೋಕವನ್ನು ಬರೆದು ಕೊಟ್ಟ.
   "ಸಹಸಾ ವಿಧಧೀತ ನ ಕ್ರಿಯಾಮವಿವೇಕ: ಪರಮಾಪದಾಂ
    ವೃಣತೇ ಹಿ ವಿಮೃಶ್ಯಕಾರಿಣಂ ಗುಣಲುಬ್ಧಾ: ಸ್ವಯಮೇವಂ ಸಂಪದ:"
ಅವನ ಕುರಿತೇ ಬರೆದಂತಿರುವ ಶ್ಲೋಕ ೧೦೦ ಸುವರ್ಣಕ್ಕೆ ಮಾರಾಟವಾಯಿತು. ಅವನು ಮಾವನ ಮನೆಯಲ್ಲಿನ ಪರಿಸ್ಥಿತಿಯ ಕುರಿತು ವ್ಯಂಗ್ಯ ವಾಗಿ ಒಂದು ಶ್ಲೋಕವನ್ನು ಹೇಳುತ್ತಾನೆ.
ಶ್ವಶುರಗೃಹನಿವಾಸಃ ಸ್ವರ್ಗ ತುಲ್ಯೋ ನರಾಣಾಂ
 ಯದಿ ವಸತಿ ದಿನಾನಿ ತ್ರೀಣಿ ಪಂಚಾಥ ಸಪ್ತ !
ದಧಿಮಧುಘೃತಭಕ್ಷ್ಯಕ್ಷೀರಸಾರಪ್ರವಾಹಃ
ತದುಪರಿ ನಿವಸೇತ್ ಚೇತ್ ಪಾದರಕ್ಷಾ ಪ್ರಯೋಗಃ!"
"ಮಾವನ ಮನೆಯಲ್ಲಿ ವಾಸ ಮಾಡುವುದು ಸ್ವರ್ಗಕ್ಕೆ ಸಮಾನ ಒಂದು ವೇಳೆ ಅವನು ಮೂರು ಐದು ಅಥವಾ ಏಳುದಿನ ವಾಸ ಮಾಡಿದರೆ ಮೊಸರು ಜೇನುತುಪ್ಪ ತುಪ್ಪ ಭಕ್ಷ್ಯ ಕ್ಷೀರ ಸಾರಗಳ ಪ್ರವಾಹವೇ ಹರಿದು ಬರುತ್ತದೆ. ಅದಕ್ಕೂ ಹೆಚ್ಚು ದಿನವಿದ್ದರೆ ಪಾದರಕ್ಷೆ ಪ್ರಯೋಗವಾಗುತ್ತದೆ." ಎಂದು.
 ಅವನು ಮಾವನ ಮನೆಯಲ್ಲಿದ್ದಾಗ ನಿತ್ಯವೂ ಹೊಲ ಕಾಯಲು ಹೋಗುತ್ತಿದ್ದ.ಆ ವೇಳೆಯಲ್ಲೇ "ಕಿರಾತಾರ್ಜುನೀಯಂ" ಮಹಾಕಾವ್ಯವನ್ನು ಬರೆದನೆಂದು ಹೇಳುತ್ತಾರೆ. ಈ ಕಥೆಯ ಸತ್ಯಾಸತ್ಯತೆಗಳ ಬಗ್ಗೆ ವಿವಾದವಿದ್ದು,ಇದು ಕೇವಲ ದಂತಕಥೆಯಾದರೂ ತಿಳಿದುಕೊಳ್ಳಲು ಬಹಳಷ್ಟು ಅಂಶಗಳಿವೆ.
   ಕಿರಾತಾರ್ಜುನೀಯದಲ್ಲಿ ೧೮ ಸರ್ಗಗಳಿವೆ.ಅದರಲ್ಲಿ ಮೂರು ಅಧ್ಯಾಯಗಳನ್ನು 'ಪಾಷಾಣ ತ್ರಯೀ' ಎಂದಿದ್ದಾರೆ. ರಾಜನೀತಿ ಶಾಸ್ತ್ರಾದಿ ಹತ್ತು ಹಲವು ವಿಷಯಗಳು ಇದರಲ್ಲಿ ವಿವರಿಸಲ್ಪಟ್ಟಿವೆ. ಅದರಲ್ಲಿ ೧೫ನೆ ಅಧ್ಯಾಯದ ೧೪ನೆ ಶ್ಲೋಕವೇ ಆ ಹೇಳಲಿಚ್ಚಿಸಿರುವಂತಹ 'ಕೆಂಪು ಹವಳ'
    ನ ನೋ ನನುನ್ನೋ ನುನ್ನೋನೋ ನಾನಾನಾನಾನನಾ ನನು
    ನುನ್ನೋ ನುನ್ನೋ ನನುನ್ನೇನೋ ನಾನೇನಾ ನುನ್ನ ನುನ್ನ ನುತ್
ಕೊನೆಯ ಅಕ್ಷರ 'ತ್' ಆಗಿದ್ದರೂ "ನಾಂತ್ಯ ವರ್ಣಸ್ತು ಭೇಧಕ:" ಎಂದು ಲಾಕ್ಷಣಿಕರು ಹೇಳಿದ್ದಾರೆ. ಇದೊಂದು ಏಕಾಕ್ಷರಿ ಶ್ಲೋಕ. ಮೇಲ್ನೋಟಕ್ಕೆ ವಿಚಿತ್ರವಾಗಿ ಕಾಣುವ ಇದರ ಅರ್ಥ ಹೀಗಿದೆ (ಕಿರಾತ ರೂಪಿ ಶಿವನು ಅರ್ಜುನನ ಕುರಿತು ಹೇಳುವುದು)
"(ಎಲೈ) ವಿವಿಧ ಮುಖಗಳಿರುವ ಪ್ರಮಥಗಣಗಳೇ , ಈತನು ಕ್ಷುದ್ರ ವಿಚಾರಗಳಿರುವಂತಹ ವ್ಯಕ್ತಿ ಅಲ್ಲ. ಈತನು ನ್ಯೂನತೆಗಳನ್ನು ಸಮೂಲವಾಗಿ ನಾಶ ಗೈಯುವ ಪುರುಷನಿಗಿಂತ ವಿಶೇಷ ರೀತಿಯ ಯಾವನೋ ಒಬ್ಬ ದೇವತೆಯಿರಬೇಕು. ಈತನಿಗೆ ಒಬ್ಬ ಒಡೆಯನೂ ಇರುವನೆಂದು ತಿಳಿದುಬರುತ್ತದೆ. ಬಾಣಗಳ ಹೊಡೆತ ತಿಂದರೂ ಏಟನ್ನು ತಿನ್ನದವನಂತೆ ಕಾಣುತ್ತಾನೆ.ದುಃಖದಿಂದ ಇರುವ ವ್ಯಕ್ತಿಗೆ ಇನ್ನಷ್ಟು ತೊಂದರೆ ಕೊಡುವ  ದೋಷಪೂರ್ಣ ಎಂಬ ಆಪಾದನೆಯಿಂದಲೂ ವಿಮುಕ್ತನಾಗಿದ್ದಾನೆ.(ಆದ್ದರಿಂದ ನೀವು ಯುದ್ಧದಿಂದ ವಿಮುಖರಾಗಿ ಹೋಗುವುದು ಸರಿಯಲ್ಲ)"
    ಕೇವಲ ಒಂದೇ ಅಕ್ಷರದಿಂದ ಇರುವ ಶಬ್ದಗಳಿಂದಲೇ ಸಂಧಿಪದ ಸಮಸ್ತಪದಗಳನ್ನು ರಚಿಸಿ ಅರ್ಥಗರ್ಭಿತವಾದ ಶ್ಲೋಕ ರಚನೆ ಮಾಡಿರುವುದರಲ್ಲಿ ಕವಿಯ ಪಾಂಡಿತ್ಯ ಕೌಶಲ ಹಿರಿಮೆಗಳು ಕಂಡುಬರುತ್ತವೆ. ಹೀಗೆ ಇದೊಂದೇ ಅಲ್ಲದೇ ಇನ್ನೂ ಹತ್ತು ಹಲವು ಚಾಟು ಶ್ಲೋಕಗಳು ಇವನಿಂದ ರಚನೆಯಾಗಿವೆ.ಇತರ ಹಲವು ಕವಿಗಳೂ ಇಂತಹ ಶ್ಲೋಕ ರಚನೆಯಲ್ಲಿ ಪಾಂಡಿತ್ಯ ತೋರಿದ್ದಾರೆ.
   "ಇದು ಒಂದು ಕರಿಮಣಿಯ ಸಾರದಲ್ಲಿ ಕಂಡ ಒಂದು ಕೆಂಪು ಹವಳ!"
(ಶ್ಲೋಕದ ಅರ್ಥ ತಿಳಿಸಿದವರು:- ಡಾ.ಈ.ಮಹಾಬಲ ಭಟ್ಟ, ಸಂಸ್ಕೃತ ವಿಭಾಗ ಶ್ರೀ ಧ ಮಂ ಕಾಲೇಜು  ಉಜಿರೆ.
                                       ಶತಾವಧಾನಿ ಡಾ.ಆರ್.ಗಣೇಶ ಬೆಂಗಳೂರು.
ಶ್ಲೋಕ ನನಗೆ ಕಂಡ ಪುಸ್ತಕ:- ಸಂಸ್ಕೃತ ಭಾಷಾ ಶಾಸ್ತ್ರ ಮತ್ತು ಸಾಹಿತ್ಯ - ವಿದ್ವಾನ್.ಎನ್ ರಂಗನಾಥ ಶರ್ಮ ಮತ್ತು ಇತರರು.
'ವಿಕಿಪೀಡಿಯ' ದಲ್ಲಿ ಕಿರಾತಾರ್ಜುನೀಯ ದ ಕುರಿತ ವಿವರಕ್ಕೆ:
http://en.wikipedia.org/wiki/Kir%C4%81t%C4%81rjun%C4%ABya)
ಈ ಲೇಖನ ೪-೧೦-೨೦೦೯ರ ಸಂಯುಕ್ತ ಕರ್ನಾಟಕಸಾಪ್ತಾಹಿಕ ಸೌರಭದಲ್ಲಿ ಪ್ರಕಟವಾಗಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ