Powered By Blogger

ಗುರುವಾರ, ಆಗಸ್ಟ್ 19, 2010

ತಬ್ಬಲಿಯು ನೀನಾದೆ ಮಗನೆ

       ಹೆಸರನ್ನು ಓದಿ ತಕ್ಷಣ ಭೈರಪ್ಪನವರ ಕಾದಂಬರಿಯ ಬಗ್ಗೆ ಬರೆಯುತ್ತಿದ್ದೇನೆ ಎಂದು ತಿಳಿದುಕೊಳ್ಳಬೇಡಿ. ಪುಣ್ಯಕೋಟಿಯ ಹಾಡಿನಲ್ಲಿ ಬರುವ ಈ ಸಾಲಿನಿಂದ ಭೈರಪ್ಪನವರು ಒಂದು ಕಾದಂಬರಿಯನ್ನು ಬರೆದದ್ದಂತೂ ಹೌದು. ಇತ್ತೀಚಿಗೆ ಸ್ವರ್ಣವಲ್ಲಿ ಮಠದಲ್ಲಿ ಅವರ 'ಕವಲು' ಕಾದಂಬರಿಯ ಕುರಿತು ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದಾಗ ಅದರಲ್ಲಿ "ಪುಣ್ಯಕೋಟಿಯಂತಹ ಮೌಲ್ಯಯುತ ಕಥೆಗಳು ಇಂದಿನ ಪಟ್ಯಪುಸ್ತಕಗಳಲ್ಲಿ  ಕಾಣುತ್ತಿಲ್ಲ.ಹಸು ಮಾತನಾಡುವುದೆಲ್ಲ unscientific ಎಂದು ಹೇಳಿಬಿಡುತ್ತಾರೆ. ಅದರ ಮೌಲ್ಯವನ್ನು ಅರಿತುಕೊಳ್ಳುತ್ತಿಲ್ಲ" ಎಂದು ವಿಷಾದ ವ್ಯಕ್ತಪಡಿಸಿದರು.
    'ಮೌಲ್ಯ ಶಿಕ್ಷಣ ಎಂಬುದು ಬೋಧಿಸಿ ಅದಕ್ಕೊಂದು ಪರೀಕ್ಷೆ ಇಟ್ಟು ಅದರಿಂದ ತಿಳಿದುಕೊಳ್ಳುವಂತಹದ್ದಲ್ಲ.' ಎಂದೂ ಹೇಳಿದರು.ಆಗ ನನಗೆ ಅನ್ನಿಸಿದ್ದು ಮೌಲ್ಯ ಶಿಕ್ಷಣದ ಮೌಲ್ಯವನ್ನು ಮಕ್ಕಳು ಚಿಕ್ಕವರಾಗಿದ್ದಾಗಿನಿಂದಲೇ ತಿಳಿಸಿ ಹೇಳಬೇಕು ಎಂದು.ಹಿರಿಯರು ತಂದೆತಾಯಿಯರು ನಡೆದಂತೆ ಮಕ್ಕಳು ಅನುಸರಿಸುತ್ತಾರೆ. 
ನಿತ್ಯವೂ ದೇವರಿಗೆ ಕೈಮುಗಿಯುವ ತಾಯಿಯೊಡನೆ ಮಗಳೂ ಕೈ ಮುಗಿಯುತ್ತಾಳೆ. ಅಪ್ಪ ಸಿಗರೇಟು ಸೇದುವುದನ್ನು  ನೋಡಿದ ಮಗ ಅದನ್ನೇ ಅನುಕರಿಸುತ್ತಾನೆ. ಹೀಗಾಗಿ ತಮ್ಮ ಮಕ್ಕಳ ಉನ್ನತಿಗೆ ಹಾಗು ಮೌಲ್ಯಯುತ ಜೀವನಕ್ಕೆ ತಂದೆತಾಯಿಯರೂ ಮೌಲ್ಯಯುತವಾಗಿ ಬದುಕುವುದು ಅವಶ್ಯಕ.
Domenico Ghirlandaio
          ಹಠಮಾರಿ ಮಗನೊಬ್ಬನ ತಾಯಿಗೆ ಏನು ಮಾಡಿದರೂ ಮಗನನ್ನು ತಿದ್ದಲಾಗಲಿಲ್ಲ. ಶಾಲೆಯಿಂದ ಸಣ್ಣ ಪುಟ್ಟ ವಸ್ತುಗಳನ್ನು ಕದ್ದು ತರುತ್ತಿದ್ದ. ಅವನು ದೊಡ್ಡವನಾದಾಗ ತಾಯಿ ಒಂದು ದಿನ ನಿಶ್ಚಯ ಮಾಡಿ ಹೇಳಿದಳು "ಮಗೂ ಕದಿಯುವುದು ಕೆಟ್ಟ ಕೆಲಸ ಎಂದು ನಿನಗೆ ಗೊತ್ತಿಲ್ಲವೇ? " ಎಂದು. ಆಗ ಮಗ "ನನಗೆ ಬೇಕಾದ್ದನ್ನು ನಾನೂ ಮಾಡುತ್ತೀನಿ" ಎಂದ. ಅದಕ್ಕೆ ತಾಯಿ "ಸರಿ ಹಾಗಾದರೆ ನೀನು ಒಂದೊಂದು ಕಳ್ಳತನ ಮಾಡಿದಾಗಲೂ ನಾನೂ ಒಂದೊಂದು ಮೊಳೆ ತಂದು ಈ ಗೋಡೆಗೆ ಹೊಡೆಯುತ್ತೇನೆ" ಎಂದಳು. ಅವನು ಅದರಿಂದ ತನ್ನ ಗಂಟೇನು ಹೋಗುವುದಿಲ್ಲ ಎಂದು ಸುಮ್ಮನಿದ್ದ. ಕೆಲವು ತಿಂಗಳು ಕಳೆದ ನಂತರ ಗೋಡೆಯ ಮೇಲೆಲ್ಲಾ ಮೊಳೆಗಳಿದ್ದವು. ಮತ್ತೂ ಕೆಲವು ಕಾಲ ಕಳೆದ ನಂತರ ಒಮ್ಮೆ ಮಗ ಆ ಗೋಡೆಯನ್ನು ನೋಡಿ "ಛೆ.. ಎಷ್ಟೊಂದು ಕಳ್ಳತನ ಮಾಡಿಬಿಟ್ಟೆ.ತಪ್ಪು ಮಾಡಿಬಿಟ್ಟೆ." ಎಂದು ಪಶ್ಚಾತ್ತಾಪ ಪಟ್ಟು ತಾಯಿಯ ಬಳಿ ಕ್ಷಮೆ ಯಾಚಿಸಿದ.ತನು ಕದ್ದದ್ದೆಲ್ಲವನ್ನು ಹಿಂತಿರುಗಿಸುವುದಾಗಿ ಹೇಳಿದ. ಅವನ ತಾಯಿ ಆಗ ಗೋಡೆಯ ಮೇಲಿದ್ದ ಮೊಳೆಗಳನ್ನೆಲ್ಲ ಕಿತ್ತು ಹಾಕಿದಳು. ಗೋಡೆಯ ಮೇಲಿದ್ದ ಕಲೆಗಳನ್ನು ತೋರಿಸಿ " ನೋಡಿದೆಯಾ? ಒಂದು ಬಾರಿ ಕೆಟ್ಟ ಕೆಲಸ ಮಾಡಿದರೂ ಅಳಿಸಲಾಗದ ಕಲೆ ಬಿದ್ದು ಹೋಗುತ್ತದೆ. ಈಗ ನೀನು ಸುಮ್ಮನಿದ್ದರೆ ಆ ಕಲೆಗಳು ಹಾಗೆ ಇರುತ್ತವೆ.ಅದನ್ನು ಹೋಗಲಾಡಿಸಲು ಒಳ್ಳೆ ಕೆಲಸಗಳನ್ನು ಮಾಡು. ಸುಣ್ಣ ತುಂಬಿಸಿ ಅದನ್ನು ಮುಚ್ಚು." ಎಂದಳು.  ಎಷ್ಟು ಅರ್ಥವತ್ತಾದ ಮಾತು. ಕೆಟ್ಟ ಕೆಲಸದಿಂದ ಕಳಂಕ ಬರುತ್ತದೆ ಅದನ್ನು ಹೋಗಲಾಡಿಸಲು ಒಳ್ಳೆ ಕೆಲಸಗಳನ್ನು ಮಾಡಬೇಕು. ಅದೇ ಒಳ್ಳೆ ಕೆಲಸಗಳಲ್ಲೇ ತೊಡಗಿಕೊಂಡಿದ್ದರೆ ಎಂತಹ ಸುಂದರವಾಗುತ್ತದೆ ಈ ಜೀವನ!
                 ಆದರೆ ಈಗಿನ ಪರಿಸ್ಥಿತಿ ಹೇಗಾಗುತ್ತಿದೆ ಎಂದರೆ ಅಪ್ಪ ಅಮ್ಮ ಇಬ್ಬರೂ ಕೆಲಸಕ್ಕೆ ಹೋಗುತ್ತಾರೆ, ಅಜ್ಜ ಅಜ್ಜಿ ಇಬ್ಬರೂ ವೃದ್ಧಾಶ್ರಮದಲ್ಲಿದ್ದಾರೆ.ಮಕ್ಕಳು ಭಾರವಾದ ಪುಸ್ತಕದ ಹೊರೆ ಹೊತ್ತು ಕಾನ್ವೆಂಟ್ ಗೆ ಹೋಗುತ್ತಾರೆ ಅಥವಾ ಇನ್ನು ಚಿಕ್ಕವರಾದರೆ ತಂದೆ ತಾಯಿಯರು ಮಕ್ಕಳನ್ನು ನೋಡಿಕೊಳ್ಳುವ ದಾದಿಯರಿಗೆ  ಸಾವಿರಾರು ರೂಪಾಯಿ ತೆತ್ತು ಅವರ ಬಳಿ ಬಿಟ್ಟು ಹೋಗುತ್ತಾರೆ. ಇಂತಹ ಮಕ್ಕಳಿಗೆ ಎಲ್ಲಿಂದ ಸಿಗಬೇಕು ನೈತಿಕ ಅಥವಾ ಮೌಲ್ಯ ಶಿಕ್ಷಣ? ಅಜ್ಜ ಅಜ್ಜಿಯರು ಮೊಮ್ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದರೆ ಅವರು ಅಲ್ಪ ಸ್ವಲ್ಪ ಮೌಲ್ಯಯುತ ಜ್ಞಾನವನ್ನು ಮಕ್ಕಳಿಗೆ ಉಣಿಸಬಹುದು. ಅನವರತ " ಓದು ಓದು ಓದು" ಎಂದು ಹೇಳುತ್ತಿದ್ದಾರೆ ಮಕ್ಕಳಲ್ಲಿರುವ ಉಳಿದ ಪ್ರತಿಭೆಗಳು ಬೆಳಕಿಗೆ ಬರುವುದಿಲ್ಲ, ಓದೂ ಅಷ್ಟು ಪರಿಣಾಮಕಾರಿಯಾಗಿರುವುದಿಲ್ಲ. ಮಕ್ಕಳು ಆಟವಾಡಿಕೊಂಡು ನಲಿದಾಡುತ್ತಾ ಕಲಿಯಬೇಕು.ಇಲ್ಲದಿದ್ದರೆ ಜೀವನ ಕೇವಲ ಯಾಂತ್ರಿಕವಾಗುತ್ತದೆ. ಹಿಂದೆ ಸಮಾಜದಲ್ಲಿದ್ದ ಎಲ್ಲ ಸಮಸ್ಯೆಗಳಿಗಿಂತ ಭೀಕರವಾಗಿ ಇಂದು ಈ ಸಮಸ್ಯೆ ನಮ್ಮೆಲ್ಲರ ಮುಂದೆ ನಿಂತಿದೆ. ಅದನ್ನು ಸಮರ್ಥವಾಗಿ ಎದುರಿಸುವ ಉಪಾಯವೂ ನಮ್ಮ ಬಳಿಯಲ್ಲೇ ಇದೆ.
             ತಂದೆ ತಾಯಿಯರಿದ್ದೂ ತಬ್ಬಲಿಗಳಂತಾಗಿರುವ ಇಂದಿನ ಮಕ್ಕಳನ್ನು 'ಕಿಡ್ಸ್ ಗಾರ್ಡಿಂಗ್ ಹೋಂ' ನಲ್ಲೋ ಅಥವಾ ಮತ್ತೆಲ್ಲೋ ಬಿಡುವಾಗಲಾದರೂ ತಾಯಂದಿರಿಗೆ ಎಂದೋ ಕೇಳಿದ "ತಬ್ಬಲಿಯು ನೀನಾದೆ ಮಗನೆ" ಹಾಡು ನೆನಪಿಗೆ ಬರಲಿ..
                                          ಸರ್ವೇ ಭವಂತು ಸುಖಿನಃ

ಮಂಗಳವಾರ, ಆಗಸ್ಟ್ 17, 2010

ಶ್ರೀ ಗಣೇಶಾಯ ನಮಃ

               ಪ್ರತಿಯೊಂದು ಕಾರ್ಯದ ಅಥವಾ ಕಾವ್ಯದ ಪ್ರಾರಂಭದಲ್ಲಿ ವಿಘ್ನ ನಿವಾರಕ ಗಣೇಶನ ಪೂಜೆ ಅಥವಾ ಪ್ರಾರ್ಥನೆ ಮಾಡುವುದು ಭಾರತೀಯರ ಸಂಪ್ರದಾಯವಾಗಿದೆ. ಯಕ್ಷಗಾನಗಳಲ್ಲಿ "ಗಣಪತಿ ಪೂಜೆ" ಎಂತಿದ್ದರೆ ನಾಟಕಗಳಲ್ಲಿ "ನಾಂದಿ" ಎಂದಿರುತ್ತಿತ್ತು. ಒಂದು ಒಳ್ಳೆಯ ಕಾರ್ಯಕ್ರಮ ಮದುವೆ,ಚೌಲ,ಉಪನಯನಗಳೆನಾದರೂ ನಡೆಯುವುದಿದ್ದರೆ ನಾಂದಿ ಮಾಡುವುದು ಇಂದಿಗೂ ನಡೆದು ಬಂದಿದೆ. ಒಂದು ಕೆಲಸದ ಪ್ರಾರಂಭದಲ್ಲಿ ದೇವರನ್ನು  ಬೇಡಿಕೊಂಡರೆ ಅದು ಯಶಸ್ವಿಯಾಗುತ್ತದೆ ಎಂಬ ನಂಬಿಕೆ ಪುರಾತನ ಕಾಲದಿಂದ ಇಂದಿನವರೆಗೂ ನಡೆದು ಬಂದದ್ದ್ದು. ವೈಜ್ಞಾನಿಕವಾಗಿ ಏನೇ ಸಾಧನೆ ಮಾಡುತ್ತ ಹೋದರೂ ಮನುಷ್ಯ ಪ್ರಕೃತಿಯ ಹಿಂದಿರುವ ಈ ದೈವೀ ಶಕ್ತಿಗೆ ತಲೆಬಾಗದೇ ಇರಲಾರ.
          ಒಂದು ಸಣ್ಣ ಉದಾಹರಣೆಯಲ್ಲಿ ಹೇಗೆ ವಿಜ್ಞಾನ ಮತ್ತು ಆಸ್ತಿಕ್ಯ ಭಾವನೆಗಳು ಭಿನ್ನವಾಗುತ್ತವೆ ಎಂದು ಹೇಳಿ ಮುಖ್ಯ ವಿಷಯಕ್ಕೆ ಬರುತ್ತೇನೆ. ಒಂದು ಭಯಂಕರ ಚಂಡಮಾರುತ ಬರುತ್ತಿದೆ ಎಂಬುದನ್ನು ಹವಾಮಾನ ವರದಿಕಾರರು ಎಷ್ಟೋ ಮೊದಲೇ ಕರಾರುವಕ್ಕಾಗಿ ತಿಳಿಸಿಬಿಡುತ್ತಾರೆ. ಆದರೆ ಆಸ್ತಿಕನಾದ ವ್ಯಕ್ತಿ ಪರಮ ಭಕ್ತಿಯಿಂದ ದೇವರಲ್ಲಿ ಬೇಡಿಕೊಂಡರೆ  ಆ ಚಂಡಮಾರುತ ತನ್ನ ದಿಕ್ಕನ್ನೇ ಬದಲಿಸಬಹುದು. ನಾಸ್ತಿಕರು ಇದನ್ನು ಒಪ್ಪದಿರಬಹುದು, ಆದರೆ ಆಸ್ತಿಕರೆಲ್ಲರು ಒಪ್ಪುತ್ತಾರೆ.
          ಪ್ರಸ್ತುತ ನಾನು ಹೇಳ ಹೊರಟಿರುವುದು ಒಂದು ಉದ್ಭವ ಗಣಪತಿಯ ವಿಚಾರ ಹಾಗು ಅವನನ್ನು ಪೂಜೆ ಮಾಡುತ್ತಿರುವವರ ಪೂರ್ವಿಕರ ವಿಚಾರಗಳು.
        ಉತ್ತರ ಕನ್ನಡದ ಕರಾವಳಿ ತೀರದ ಹೊನ್ನಾವರ ತಾಲ್ಲೂಕಿನ 'ಹಳದೀಪುರ'ದ 'ಕುದುಬೈಲು' ಎಂಬ ಊರಲ್ಲಿ ಹಿಂದೆ ಎರಡು ಜನ ಕೃಷ್ಣ ಭಟ್ಟರೆಂಬ ನಾಮದಿಂದ ಪ್ರಖ್ಯಾತರಾಗಿದ್ದರು. ಒಬ್ಬರು ಅಂಗಡಿ ಕೃಷ್ಣ ಭಟ್ಟರು, ಇನ್ನೊಬ್ಬರು ಸಾಹುಕಾರ ಕೃಷ್ಣ ಭಟ್ಟರು. ಈ ಸಾಹುಕಾರ ಭಟ್ಟರಿಗೆ ಒಬ್ಬ  ಪುತ್ರ ತಿರುಮಲೇಶ್ವರ ಭಟ್ಟ. ಇವರು ವೈದಿಕಾನುಷ್ಟಾನ ತತ್ಪರರಾಗಿದ್ದರು. ಇವರಿಗೆ ವೆಂಕಟರಮಣ ಭಟ್ಟ ಮತ್ತು ಕೃಷ್ಣ ಭಟ್ಟ ರೆಂಬ ಇಬ್ಬರು ಪುತ್ರರಿದ್ದರು.
        ವೆಂಕಟರಮಣ ಭಟ್ಟರು ಧಾರ್ಮಿಕ ಕಾರ್ಯಗಳಿಗೆ ಆಗಾಗ ಘಟ್ಟದ ಮೇಲೆ ಬರುತ್ತಿದ್ದರು. ಹಾಗೆ ಬಂದಾಗ ಸಿದ್ದಾಪುರ ತಾಲ್ಲೂಕು ಹೆಗ್ಗರಣಿ-ಹೊಸ್ತೋಟ ಗ್ರಾಮದ "ಕೋಡಖಂಡ"ದ ಮಾದೇವಿ ಮತ್ತು ಮಂಜುನಾಥ ಎಂಬ ದಂಪತಿಗಳ ಮನೆಯಲ್ಲಿ ತಂಗುತ್ತಿದ್ದರು. ಮಂಜುನಾಥ ಭಟ್ಟರಿಗೆ ಇಬ್ಬರು ಪುತ್ರಿಯರು ಮಾತ್ರ ಇದ್ದರು. ಅವರಿಬ್ಬರೂ ಅಕಾಲ ಮೃತ್ಯುವಿಗೆ ತುತ್ತಾದರು. ಮಂಜುನಾಥ ಭಟ್ಟರ ವೃದ್ಧಾಪ್ಯದಲ್ಲಿ ಹೊಟ್ಟೆ ಬೇನೆ ಬಂದು ಪ್ರಾಣೋತ್ಕ್ರಮಣ ಹಂತದಲ್ಲಿದ್ದಾಗ ತನ್ನ ಪತ್ನಿಗೆ " ಈ ಜಮೀನನ್ನು  ಮತ್ತು ಶಿಷ್ಯವರ್ಗವನ್ನು  ವೆಂಕಟರಮಣ ಭಟ್ಟರಿಗೆ ಕೊಟ್ಟು ದೀವಿಗೆ ನಡೆಸಿಕೊಂಡು ಬಾ" ಎಂದು ತಿಳಿಸಿದ್ದರು.ಅಂತೆಯೇ ವೆಂಕಟರಮಣ ಭಟ್ಟರು ಕರ್ಕಿ ಮಾಣಕೋಜಿ ಹರಿ ಭಟ್ಟರ ಸಹೋದರಿಯನ್ನು ಮದುವೆಯಾಗಿ ಇಲ್ಲಿ ನೆಲೆಸಿದರು. ಅವರಿಗೆ ಒಬ್ಬ ಗಂಡು ಮಗು ಜನಿಸಿದರೂ ಹೆಚ್ಚು ದಿನ ಬದುಕಲಿಲ್ಲ. ಇನ್ನೊಬ್ಬ ಗಂಡು ಮಗು ಆದರೆ ಬಾದ್ರಪದ ಶುಕ್ಲ ಚೌತಿಯಂದು ಗಣಪತಿ ಮೂರ್ತಿ ಮಾಡಿಸುವೆನೆಂದು  ಹರಕೆ ಹೊತ್ತರು. ಆಗ ಶ್ರೀ ಗಣೇಶನ ಅನುಗ್ರಹದಿಂದ ಮಹಾಬಲೇಶ್ವರ ಎಂಬ ಪುತ್ರನ ಜನನವಾಯಿತು. ಮಹಾಬಲೇಶ್ವರ ಭಟ್ಟರಿಗೆ ಸೂಕ್ತ ಶಿಕ್ಷಣ ಕೊಟ್ಟು ಹೊನ್ನಾವರ ಕರ್ಕಿ ಕೆಳಗಿನ ಕೇರಿಯ ಪಾರ್ವತೀ ರಾಮಯ್ಯ ಹೆಗಡೆಯವರ ಲಕ್ಷ್ಮಿ ಎಂಬ ಏಕೈಕ ಪುತ್ರಿಯನ್ನು ತಂದು ವಿವಾಹ ನೆರವೇರಿಸಿದರು. ಅವಳು ಓರ್ವ ಪುತ್ರನಿಗೆ ಜನ್ಮ ನೀಡಿ ಕೀರ್ತಿಶೇಷಳಾದಳು. ಅವ್ರಿಗೆ ವೆಂಕಟರಮಣ ಎಂಬ ಹೆಸರನ್ನಿಟ್ಟರು. ನಂತರ ಮಹಾಬಲೇಶ್ವರ ಭಟ್ಟರು  ಕರ್ಕಿಯ ಕಲ್ಲು ಪುಟ್ಟಿ ಮನೆಯ ಕಮಲಿ ಎಂಬುವವಳನ್ನು ವಿವಾಹವಾಗಿ ಐವರು ಪುತ್ರರನ್ನು ಮೂವರು ಪುತ್ರಿಯರನ್ನು ಪಡೆದರು. ಇವರು ತಮ್ಮ ಜೀವಿತದಲ್ಲಿ ಷಟ್ಕರ್ಮ ಅನುಷ್ಟಾನಗಳಲ್ಲಿ ತೊಡಗಿಕೊಂಡಿದ್ದರು.
    ಕ್ರಿ.ಶ.೧೯೮೦ ರ ಅಕ್ಟೋಬರ್ ನಲ್ಲಿ ಮಹಾಬಲೇಶ್ವರ ಭಟ್ಟರ ಪುತ್ರ ವೆಂಕಟರಮಣ ಭಟ್ಟರಿಗೆ ಕನಸಿನಲ್ಲಿ ಯಾರೋ ಒಬ್ಬರು " ನಾನು ನಿಮ್ಮ ಮನೆಗೆ ಬರುತ್ತೇನೆ" ಎಂದನ್ತಯಿತಂತೆ. ಅಡಗಿ ನಾಲ್ಕು ದಿನಗಳ ನಂತರ ಗಂಗಾಷ್ಟಮಿಯ ಶುಭ ದಿನದಂದು ಇದೇ ವೆಂಕಟರಮಣ ಭಟ್ಟರಿಗೆ ಅಡಿಕೆ ಗಿಡ ನೆಡಲು ಗುಂಡಿ  ತೆಗೆಯುತ್ತಿದ್ದಾಗ ಕಲ್ಲೊಂದು ಸಿಕ್ಕಿ ಅದನ್ನು ಕೆಲಸದವರ ಸಹಾಯದಿಂದ ಕಿತ್ತು ಮನೆಯ ಅಂಗಳದಲ್ಲಿದ್ದ ಎಕ್ಕದಗಿಡದ ಅಡಿಯಲ್ಲಿಟ್ಟರು. ಅಲ್ಲಿ ಮನೆಯ ಮಕ್ಕಳು  ಅದಕ್ಕೆ ಪೂಜೆ ಮಾಡುವ ಆಟದಲ್ಲಿ ತೊಡಗಿದ್ದರು. ಮಕ್ಕಳಿಂದ ಪೂಜಿಸಲ್ಪಟ್ಟ ಆ ಶಿಲೆ ಮುಂದೆ ತನ್ನಿಂದ ತಾನೇ ಪ್ರಚಾರ ಪಡೆದುಕೊಂಡು ನೋಡುವವರಿಗೆ ಮಹಾಗಣಪತಿಯೇ ಉದ್ಭವವಾದಂತೆ ಕಂಡು ಮಹಾಬಲೇಶ್ವರ ಭಟ್ಟರು ಹಾಗು ವೆಂಕಟರಮಣ ಭಟ್ಟರು ಅದನ್ನು ಪ್ರತಿಷ್ಟಾಪಿಸಿ ದೈನಿಕ ಪೂಜೆಯಲ್ಲಿ ತೊಡಗಿಕೊಂಡರು.
     ಮುಂದೆ ೧೯೯೦ರ ನಂತರ ಮಹಾಬಲೇಶ್ವರ ಭಟ್ಟರು ಇಹ ಲೋಕ ತ್ಯಜಿಸಿದ ನಂತರ ವೆಂಕಟರಮಣ ಭಟ್ಟರು ಹಾಗು ಅವರ ಪುತ್ರ ಭಾಲಚಂದ್ರ ಭಟ್ಟರು ಶ್ರೀ ಮಹಾಗಣಪತಿಯ ಪೂಜಾ ಕರ್ಮ ನಡೆಸುತ್ತಿದ್ದಾರೆ. ಮುಂದೆ ೨೦೦೩ರ ಜನವರಿ ೨೪ಕ್ಕೆ ರಜತ ಕವಚ ಸಮರ್ಪಿಸಲಾಗಿದೆ. ಅನೇಕಾನೇಕ ವೈದಿಕ ಕಾರ್ಯಗಳು ಪ್ರತಿವರ್ಷವೂ ದೇವಾಲಯದಲ್ಲಿ ನಡೆಯುತ್ತವೆ. ರಾಜ್ಯದ ಹಲವು ದಿಕ್ಕುಗಳಿಂದ ಭಕ್ತರು ಇಲ್ಲಿಗೆ ಆಗಮಿಸಿ ವರ ಪಡೆದು ಹೋಗುತ್ತಿದ್ದಾರೆ. ಕೇಳಿದ ವರವನ್ನು ಕ್ಷಿಪ್ರದಲ್ಲಿ ನೀಡುವ ಮಹಾಗಣಪತಿ "ಶ್ರೀ ಕ್ಷಿಪ್ರ ಪ್ರಸಾದ ವರದ ಗಣಪತಿ" ಎಂದು ಪ್ರಸಿದ್ಧನಾಗುತ್ತಿದ್ದಾನೆ. ಪ್ರಸ್ತುತ ವೆಂಕಟರಮಣ ಭಟ್ಟರ ಮಗಳು ನನ್ನ ತಾಯಿ.ಹೀಗೆ ನನ್ನ ಮೇಲೆ ಅವನ ಕೃಪೆ ಹರಿದು ನನಗೂ ಒಂದು ದಿನ ಈ ಗಣಪತಿಯ ಪೂಜೆ ಮಾಡುವ ಅವಕಾಶ ಸಿಕ್ಕಿತ್ತು ಎಂಬುದೇ ನನ್ನ ಅದೃಷ್ಟ.
      ಹೀಗೆ ಮಹಾಗಣಪತಿಯ ಪೂರ್ವ ಪ್ರಸಂಗವನ್ನು ಉಲ್ಲೇಖಿಸುತ್ತಾ ನನ್ನ "ಬ್ಲಾಗಿ"ಗೆ ಗಣಪತಿ ಪೂಜೆಯಿಂದ ನಾಂದಿ ಹಾಡುತ್ತಿದ್ದೇನೆ. ಯಶಸ್ಸು ಸಿಗಲಿ ಎಂದು ಅವನಲ್ಲಿ ಬೇಡಿಕೊಂಡು ಸಕಲ ಜೀವರಾಶಿಗಳಿಗೆ ಒಳಿತನ್ನು ಬೇಡಿಕೊಳ್ಳುತ್ತೇನೆ.
ಕಲ್ಲಿನ ಉದ್ಭವ ಮೂರ್ತಿ

                                                                                         
     
ಬೆಳ್ಳಿ ಕವಚ ಸಹಿತ
<><>
<>
<><>
ಮಹಾಬಲೇಶ್ವರ ಭಟ್ಟರು
ಪೂಜಾನಿರತ ವೆಂಕಟರಮಣ ಭಟ್ಟರು



ಕೋಡಖಂಡ ದ ಅಕ್ಷಾಂಶ ರೇಖಾಂಶ  14°25'38"N 74°44'46"E
ಲೋಕಾ: ಸಮಸ್ತಾ: ಸುಖಿನೋ ಭವಂತು  

ಮಂಗಳವಾರ, ಆಗಸ್ಟ್ 10, 2010

ನನಗೆ ತೋಚಿದ್ದು ನಾನು ಗೀಚಿದ್ದು

ಗೆಳೆಯರೇ
             ನಾನು ಈ ಮೂಲಕ ನನ್ನ ಅನುಭವಗಳನ್ನು ನಿಮಗೆಲ್ಲ ತಿಳಿಸುತ್ತೇನೆ. ದಯವಿಟ್ಟು ಓದಿ ಪ್ರತಿಕ್ರಿಯೆ ನೀಡಿ.
                                                                                                ನಿಮ್ಮ
                                                                                         ಗಣೇಶ ಭಟ್ಟ ಕೊಪ್ಪಲತೋಟ