Powered By Blogger

ಶನಿವಾರ, ಡಿಸೆಂಬರ್ 10, 2011

ಅಯೋನಿಜಾ ಪರಿಣಯ ದ್ವಿಸಂಧಾನಕಾವ್ಯ- ಕಥಾಮುಖ

||ಕಥಾಮುಖಂ||
ಭಾಮಿನಿ ಷಟ್ಪದಿ||                  ಶ್ರೀತಮೋನುದ್ವಂಶಭವರಾ | ಮಾತಿರೋಹಿತ ವರ್ಣ ಸಾನುಜ|
ರಾ ತಪೋಧನ ವಿಪ್ರಜನ ಸಹಿತದಲಿ ಪುರದೊಳಕೆ||
ಪೂತ ಧರ್ಮಜ ಮಾರ್ಗ ದರ್ಶಿಸೆ | ನೀತಿಪರಜನಕಾಯತನದೆಡೆ|
ಮಾತನಾಡುತ ಗಮಿಸಿದರು ವಿಶ್ರಾಂತಿ ಪೊಂದಲಿಕೆ||1||
ಕಾರಣಾಂತರದಿಂದ ರಾಜಕು | ಮಾರರಟವೀಚರರು ತಾವಾ|
ಗಾರವಿಯ ತೇಜಸ್ವಿಗಳು ಸಂಚಾರ ಮಾಡುತ್ತ||
ವೀರರಾಯತನವಿಹ ನಗರಿಯ | ತಾರೆಗಳ ನಡುವಿರ್ಪ ರಜನೀ|
ಕಾರಕನವೋಲ್ ಪೊಕ್ಕಿದರ್ಗಡ ವಿಪ್ರ ವೇಷದಲಿ||2||
ದಿವಿಜರಲ್ಲಿಯ ರಾಜಕುವರಿಗೆ | ನವವಧುವು ವರನರಸಿ ಮಾಳ್ಪಾ |
ಭುವನಭೂಷಣದಾ ಸ್ವಯಂವರ ನೋಡಲೆಂತೆಂದು||
ಕವಿವಿರಿಂಚಿಯ ಸನ್ನಿಧಿಗಳ | ನ್ನ ವಿವಿಧ ಸುದೇಶದ ಸುರಾಷ್ಟ್ರದ |
ಭವನ ತೊರೆದಾಗಮಿಸಿದರು ಕಾಲದಲಿ ನಗರಕ್ಕೆ ||3||
ಹಲವು ಸೌಧಗಳಿಂದ ಶೋಭಿತ | ವಲರಿನಿಂ ದಾರಿಗಳು ರಾಜಿತ |
ವಲಕೆಯಂತೆಯೆ ಸಕಲ ಸಂಪತ್ತನ್ನ ಪೊಂದಿರುವಾ ||
ನೆಲವು ಶುಭ್ರವು ನಿಖಿಲ ವೀಥಿಗ | ಳಲಿಹವಾಪಣ ಸರ್ವಲಭ್ಯ ಬ|
ಹಳ ಸೊಬಗಿನಿಂದಿತ್ತು ಪಟ್ಟಣ ವಸುಧೆ ಮುಕುಟದೊಲು||4||
ಅರಳಿ ವೃಕ್ಷದ ಕೆಳಗೆ ಪಸರಿಪ | ನೆರಳಿನಲ್ಲಿಹ ವಿಪ್ರವೃಂದಗ|
ಳರಸನಂ ಪೊಗಳುತ್ತ ಕುಳಿತಿಹುದೊಂದು ಕಡೆಯಲ್ಲಿ||
ಮರಳಿ ಶಾಸ್ತ್ರ ವಿಚಾರ ಮಂಥನ | ತರಳರಿಗೆ ವಿದ್ಯೋಪದೇಶವ  |
ನರಳಿದುತ್ಸಾಹದಲಿ ಬೋಧಿಪರಿರ್ದರತ್ತಕಡೆ||5||
ಕಥಾಮುಖದ ಮೊದಲ ಪದ್ಯದಿಂದ ದ್ವಿಸಂಧಾನತೆ ಶುರುವಾಗುತ್ತದೆ. ಇದನ್ನು ನನಗೆ ತಿಳಿದಷ್ಟರ ಮಟ್ಟಿಗೆ ಯಾವುದೇ ದೋಷವಿಲ್ಲದಂತೆ ತಿದ್ದಿದ್ದೇನೆ. ಆದರೂ ಕೆಲವು ದೋಷಗಳೂ ಕಥೆಯ ಅಸ್ಪಷ್ಟತೆಯೂ ಇರಬಹುದು(ಇದೆ). ನನ್ನ ಬುದ್ಧಿಗೆ ತೋಚಿದಷ್ಟನ್ನು ನಾನು ಬರೆಯಲು ಸಮರ್ಥನಷ್ಟೆ!
ರಾಮಾಯಣ ಪರ- (ಶ್ರೀತಮೋನುದ್ವಂಶ) ಸೂರ್ಯವಂಶ ಸಂಭವರು ರಾಮ, ಅತಿರೋಹಿತವರ್ಣ(ಕೆಂಪಾದ ಬಣ್ಣದ)ದ ತಮ್ಮನ ಜೊತೆ(ಸಾನುಜರ್) ಆ ತಪೋಧನರಾದ ವಿಪ್ರಜನ(ವಿಶ್ವಾಮಿತ್ರ-ಹೆಸರು ಪ್ರಸ್ತಾಪಿಸಿಲ್ಲದ ಕಾರಣ ಅಸ್ಪಷ್ಟ!)ರು  ಪಾವನವಾದ (ಪೂತ)ರ್ಮದಿಂದ ಹುಟ್ಟಿದ ಮಾರ್ಗವನ್ನು ದರ್ಶಿಸಲು ನೀತಿ ಪರ ಜನಕನ ಮನೆಯೆಡೆಗೆ (ಜನಕ ಆಯತನ) ಮಾತನಾಡುತ್ತ ವಿಶ್ರಾಂತಿ ಹೊಂದಲಿಕ್ಕೆ ಗಮಿಸಿದರು.
ಮಹಾಭಾರತಪರ- (ಶ್ರೀತಮೋನುದ್ವಂಶ)ಚಂದ್ರವಂಶ ಸಂಭವರು ಆ ಮಾ(ಮಹಾ)ಕ್ಷತ್ರಿಯವರ್ಣವನ್ನು ಮರೆಮಾಚಿ (ವರ್ಣ ತಿರೋಹಿತ) ಸಾನುಜರು ಪೂತ ಧರ್ಮಜ(ಯುಧಿಷ್ಠಿರ) ಮಾರ್ಗದರ್ಶಿಸಲು ವಿಪ್ರಜನ ಸಹಿತರಾಗಿ ನೀತಿಪರ ಜನರಿಗೆ ಮನೆಯಾದ (ಜನಕೆ ಆಯತನ) ಪುರದೊಳಗೆ ಮಾತನಾಡುತ ವಿಶ್ರಾಂತಿ ಹೊಂದಲು ಹೋದರು..
ಉಳಿದ ಪದ್ಯಗಳು ಕೇವಲ ಒಂದೇ ಅರ್ಥ ಹೊಂದಿದ್ದರೂ ಎರಡೂ ಕಥೆಗಳಿಗೆ ಸಮಾನರೀತಿಯಲ್ಲಿ ಸಾಗುತ್ತವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ