Powered By Blogger

ಭಾನುವಾರ, ನವೆಂಬರ್ 2, 2014

ಸಹೃದಯಕಾಲ-೧೪ : ಮೊದಲ ಅವಧಾನದ ಪದ್ಯಗಳು

ಪ್ರಾರ್ಥನಾಪದ್ಯಗಳು:
ಸ್ರಗ್ಧರಾ||
ವಂದೇ ಕ್ಷಿಪ್ರಪ್ರಸಾದಂ ಕವಿಜನಹೃದಯಂ ಶೃಂಗಖಂಡೇ ನಿವಾಸಂ
ನಿತ್ಯಂ ಪುಷ್ಪೈಸ್ಸುಪೂಜ್ಯಂ ಪರಿಮಲಭರಿತೈರ್ವಾಸಿತಂ ಯಜ್ಞಧೂಪೈಃ
ಅಶ್ಮಪ್ರಾಪ್ತಸ್ವರೂಪಂ ಸಕೃದಪಿ ಚ ನಿಜಾಕಾರವದ್ರಾಜಮಾನಂ
ಕಾವ್ಯೋದ್ಯುಕ್ತಾಯ ರಕ್ತ್ಯಾ ದ್ವಿಪವದನ! ಸದಾ ದೀಯತಾಮಾಶುಧಾರಾ||
ಶಾರ್ದೂಲವಿಕ್ರೀಡಿತ||
ಮಾತೇ ಶಾರದೆ ಶುದ್ಧವರ್ಣಸಹಿತಂ ರಾಗಾನ್ವಿತಂ ಸಭ್ಯಸಂ-
ಪ್ರೀತಂ ತಾಂ ಸಗುಣಂ ಸದಾ ರಸಿಕರೀ ಸತ್ಸಂಗ ಸಂಪಾದಿತಂ
ಮಾತೇ ವೀಣೆಯೆನುತ್ತುಮೊಲ್ದು ನುಡಿಸೌ ನೀಂ ಪೊಣ್ಮಿಸುತ್ತಿರ್ದೊಡಂ
ಪೂತಂ ತಾನೆನಿಕುಂ ಮದೀಯವಚನಂ ಸಂಸ್ಕಾರಮಂ ಪೊಂದುಗುಂ||
ಉತ್ಪಲಮಾಲೆ||
ಕುಂದದೆ ಸೌರಭಂದಳೆದು ನಿಚ್ಚವುಮಿಚ್ಛಿಪರೆಂಬ ದುಂಬಿಯಂ
ಚಂದದೆ ಕರ್ಷಿಸುತ್ತೆ ರಸಮಂ ಮಿಗೆ ತಾನುಣಿಸುತ್ತೆ ರಾಗದಿಂ
ನಂದದ  ಸತ್ಪರಾಗನಿಭಕಾವ್ಯಕದಾಶ್ರಯಮಾದುದಂ ಸದಾ
ವಂದಿಪೆನೆಲ್ಲ ಪೂರ್ವಸುಕವೀಶ್ವರಹೃತ್ಸರಸೀರುಹಂಗಳಂ||

ನಿಷೇಧಾಕ್ಷರಿ-(ಪೃಚ್ಛಕರು-ಶ್ರೀ ಶ್ರೀಶ ಕಾರಂತ)
ವಸ್ತು: ಸರಸ್ವತಿಯ ಸ್ತುತಿ:-
ಕಂದಪದ್ಯ||(ಗೀಟು ಹಾಕಿದ ಅಕ್ಷರಗಳು ಪೃಚ್ಛಕರಿಂದ ನಿಷೇಧಿಸಲ್ಪಟ್ಟವು)
೧.  ಕ ಲೆ   ಗಂ -- ನಾಂ -- ನಿ   ಚ್ಚಂ -- ಕೇಳ್
ಕಲೆಗಂ ನಾಂ ನಿಚ್ಚಂ ಕೇಳ್
೨.   ತಳೆ  ವೆಂ -- ಸೊ   ಗ  ದೊಳ್ -- ಮ  ಹಾ  ಙ್ಘ್ರಿ  ಕ  ಞ್ಜ   ದ   ಸ  ಯ್ಪಂ|
ತಳೆವೆಂ ಸೊಗದೊಳ್ ಮಹಾಂಘ್ರಿಕಂಜದ ಸಯ್ಪಂ|
೩. --ನೆಲೆ   ನೀಂ   ಬಾ   ಣೀ -- ರ  ಸ  ಕಂ
ನೆಲೆ ನೀಂ ಬಾಣೀ ರಸಕಂ
೪.(ನಾಲ್ಕನೇ ಸುತ್ತಿನಲ್ಲಿ  ಯಾವುದೇ ನಿಷೇಧ ಮಾಡಲಿಲ್ಲ)
 ಗೆಲಮಕ್ಕೆಲ್ಲರ್ಗೆನಿನ್ನನೆನಪಿಂದೇಗಳ್|
ಒಟ್ಟೂ ಪದ್ಯ-
ಕಲೆಗಂ ನಾಂ ನಿಚ್ಚಂ ಕೇಳ್
ತಳೆವೆಂ ಸೊಗದೊಳ್ ಮಹಾಂಘ್ರಿಕಂಜದ ಸಯ್ಪಂ|
ನೆಲೆ ನೀಂ ಬಾಣೀ ರಸಕಂ
ಗೆಲಮಕ್ಕೆಲ್ಲರ್ಗೆನಿನ್ನನೆನಪಿಂದೇಗಳ್|
(ತಾತ್ಪರ್ಯ: ವಾಣೀ! ನೀನು, ರಸಕ್ಕೆ ನೆಲೆಯಾಗಿದ್ದೀಯಾ. ಕಲೆಗೋಸ್ಕರವಾಗಿ ನಾನು ನಿನ್ನ ಪಾದವೆಂಬ ಕಮಲದ ಒಳ್ಳಿತ್ತನ್ನು ತಳೆಯುತ್ತೇನೆ. ನಿನ್ನ ನೆನಪಿಂದ ಯಾವಾಗಳೂ ಎಲ್ಲರಿಗೂ ಜಯವಾಗಲಿ)

ಸಮಸ್ಯೆ-(ಪೃಚ್ಛಕರು-ಶ್ರೀ ಕೆ.ಬಿ.ಎಸ್.ರಾಮಚಂದ್ರ)
ಸಮಸ್ಯೆಯ ಸಾಲು: ಸಾಕಾಗಿರ್ದುದು ಗಂಡಸಂಗಮೆನುತುಂ ಸಾರಿರ್ದಳಾ ದೇವಿತಾಂ
ಶಾರ್ದೂಲವಿಕ್ರೀಡಿತ||
ನಾಕಕ್ಕಂ ಮಿಗಿಲೆಂಬರಲ್ತೆ ಕುರುರಾಜ್ಯಶ್ರೀಯನಾಂ ಕೇಳ್ದೊಡಂ
ಲೋಕಖ್ಯಾತಿಯುಮೊಪ್ಪಿರಲ್ ಕಲಿಯವಂ ಕೊಂಡಿಂತು ಪೋಗಿರ್ದೊಡಂ|
ಹಾ! ಕಷ್ಟಂ ಪತಿಯಲ್ತು ತಾನನುಜನಂ ಪೊಂದೆಂದೊಡಂಬೆ ಸ್ವಯಂ
ಸಾಕಾಗಿರ್ದುದು ಗಂಡಸಂಗಮೆನುತುಂ ಸಾರಿರ್ದಳಾ ದೇವಿತಾಂ|
(ತಾತ್ಪರ್ಯ: "ಕುರುರಾಜ್ಯದ ಸಂಪತ್ತನ್ನು ಕೇಳಿದರೆ ಸ್ವರ್ಗಕ್ಕೂ ಮಿಗಿಲು ಎಂದು ಹೇಳುತ್ತಾರೆ. ಲೋಕದಲ್ಲಿ ಖ್ಯಾತಿಯೂ ಇದೆ ಎಂದುಕೊಂಡಿರುವಾಗ, ವೀರನಾದ ಇವನು(ಭೀಷ್ಮ) ನನ್ನನ್ನು ಕರೆದುಕೊಂಡು ಹೋಗಿರಲು, ಹಾ! ಕಷ್ಟವಾಯಿತು. ಪತಿಯಾಗಿ ಅವನು ನನ್ನನ್ನು ವರಿಸಲಿಲ್ಲ, ತನ್ನ ತಮ್ಮನನ್ನು ಮದುವೆಯಾಗು ಎಂದ." ಆಗ ಅಂಬೆ ಸ್ವಯಂ "ಗಂಡಿನ ಸಂಗ ಸಾಕಾಗಿದೆ" ಎಂದು ಹೇಳಿದಳು.)

ದತ್ತಪದಿ-(ಪೃಚ್ಛಕರು- ಶ್ರೀ ಶ್ರೀಧರ)
ವಸ್ತು: ದ್ರೌಪದಿಯ ವಸ್ತ್ರಾಪಹರಣದ ಸಂಗತಿ
ಪದಗಳು-ಕಟ್,ಬಟ್,ಗಟ್,ನಟ್
ಚೌಪದಿ||
ಕಟ್ಟಿರ್ಪರಿವರಕ್ಷಿ ಪಾಶದಿಂ ನೀನೊಡಂ-
ಬಟ್ಟುಬಾರದೆ ಪೋದೆಯೇನೊ ಕೃಷ್ಣಾ|
ಗಟ್ಟಿಗರ್ ಪಾಂಡವರ್ ಸೋಲ್ತಿರ್ಪರಿಂತಿಲ್ಲಿ
ನಟ್ಟನಡು ನೀರಾಯ್ತೆ ಸಭೆಯದಿಂದು|
(ತಾತ್ಪರ್ಯ: ದ್ರೌಪದಿ ವಸ್ತ್ರಾಪಹರಣ ಸಂದರ್ಭದಲ್ಲಿ ಕೃಷ್ಣನನ್ನು ಕುರಿತು ಹೇಳುವುದು "ಇವರು ಅಕ್ಷಿಪಾಶ (ಕಣ್ಣುಗಳೆಂಬ ಹಗ್ಗದಿಂದ/ಜೂಜಿನ ಅಕ್ಷಿಗಳೆಂಬ ಹಗ್ಗದಿಂದ) ನನ್ನನ್ನು ಕಟ್ಟಿಹಾಕಿದ್ದಾರೆ. ನೀನು ಒಡಂಬಟ್ಟು(ನನ್ನನ್ನು ಕಾಪಾಡುವ ನಿಶ್ಚಯದಲ್ಲಿ) ಬಾರದೆ ಹೋದೆಯಾ ಕೃಷ್ಣಾ! ಗಟ್ಟಿಗರಾದ ಪಾಂಡವರು ಇಲ್ಲಿ ಸೋತಿದ್ದಾರೆ, ಈ ಸಭೆಯೇ ನನಗೆ ನಟ್ಟನಡು ನೀರಾಯಿತೇ!")

ಚಿತ್ರಕ್ಕೆ ಪದ್ಯ:(ಪೃಚ್ಛಕರು- ಶ್ರೀ ಜಿ.ಎಸ್ ರಾಘವೇಂದ್ರ)
ನವಿಲುಗಳ ಚಿತ್ರ
ತೇಟಗೀತಿ||
ನೀಲಕಂಠಂಗೆ ನೀಂ ಪೆರ್ಚೊ ನೋಳ್ಪೆನೆಂದು
ಸ್ಫಾಲಗೌರಾಂಗಪೂರ್ಣತ್ವದಿಂದೆ ಪಾರಲ್
ಮೇಲೆ ಕಂಡಿರ್ದುಮಾ ಪಕ್ಷಿ ಮೌನದಿಂದಂ
ನೀಲಕಂಠಂಗೆ ಪೋಲ್ತುದೇಂ ಧ್ಯಾನದಿಂದಂ।।
(ತಾತ್ಪರ್ಯ: "ನೀಲಕಂಠನಿಗೆ(ಶಿವನಿಗೆ/ನವಿಲಿಗೆ) ನೀನು ಹೆಚ್ಚೋ! ನೋಡುತ್ತೇನೆ" ಎಂದು ಬಿಳಿಮೆಯ್ಯ ನವಿಲು "ಪೂರ್ಣತ್ವದಿಂದ"(ಶಿವ ಬಿಳಿಯ ಬಣ್ಣದವನು, ತಾನೂ ಪೂರ್ಣಶರೀರ ಬಿಳಿ ಇರುವವನು ಎಂಬ ಕಾರಣದಿಂದ ಪೂರ್ಣ ಎಂದುಕೊಂಡು) ಹಾರಲು/ನೋಡಲು (ಪಾರ್=ಹಾರು/ನೋಡು), ಆ ಪಕ್ಷಿ (ನೀಲಿ ಬಣ್ಣದ್ದು) ಮೇಲೆ ಕಂಡರೂ ಕೂಡ ಮೌನದಿಂದ, ಸ್ವಯಂ ಧ್ಯಾನದಿಂದ ನೀಲಕಂಠ(ಶಿವ)ನಂತೆ ಇರುವುದೇ!")

ಉದ್ದಿಷ್ಟಾಕ್ಷರಿ:(ಪೃಚ್ಛಕರು- ಶ್ರೀ ವಾಸುಕಿ ಹೆಚ್.ಎ)
ವಸ್ತು - ಮರಳುಗಾಡು
ಅನುಷ್ಟುಪ್||
ಕುಂದದಾ ಬೆಂಕಿಗಾಡೆನ್ನಲ್
ಮಂದಮಾರುತದೂರನುಂ|
ನಂದಿಸಲ್ಕಾರ್ಪೆಯಾ ನಿಚ್ಚಂ
ಪೊಂದುವರ್ ನಿನ್ನನಾರ್ ಸಖಾ|
(ತಾತ್ಪರ್ಯ: ಕುಂದಿಲ್ಲದ ಬೆಂಕಿಯ ಕಾಡು/ಸುಡುಗಾಡು ಎನ್ನಲು, ತಂಪು ಗಾಳಿಯಿಂದಲೂ ದೂರವಿರುವುದು, ನಿತ್ಯವೂ (ನಿನ್ನ ಉರಿಯನ್ನು)ನಂದಿಸಲು ನೀನು ಶಕ್ತನೇ! ಸಖಾ! ನಿನ್ನನ್ನು ಹೊಂದುವವರು(ಬಯಸುವವರು) ಯಾರು? )

ಆಶುಕವಿತೆ:(ಪೃಚ್ಛಕರು-ಅಷ್ಟಾವಧಾನಿ ಡಾ|| ಶಂಕರ್ ರಾಜಾರಾಮನ್)
೧. ವಸ್ತು : ನರಸಿಂಹನ ಉಗುರು
ಕಂದಪದ್ಯ ||
ಕುರುಳಂ ಪಿಡಿಯದೆ ರಕ್ಕಸ-
ಗರುಳಂ ಬಗೆಯುತ್ತೆ ರಾಗಿಯಾದುದದಾಗಳ್|
ಪೊರೆಗೆ ಜನರ್ಕಳನಾವಗ-
ಮರರೇ ಸಲ್ಪೀ ವಿರಾಗಿ ನರಸಿಂಹನಖಂ||
(ತಾತ್ಪರ್ಯ: ಸ್ತ್ರೀಯರ ಮುಂಗುರುಳುಗಳನ್ನು ಹಿಡಿಯದೆಯೇ, ರಾಕ್ಷಸನ ಕರುಳನ್ನು ಬಗೆಯುತ್ತ ಆಗ ರಾಗಿಯಾದ (ಅನುರಾಗಿ;ಪ್ರಣಯನಿರತ/ಕೆಂಪುಬಣ್ಣದ್ದು) ಆ ವಿರಾಗಿ (ಸಾಂಸಾರಿಕ ರಾಗದ್ವೇಷಗಳಿಲ್ಲದ/ಕೆಂಪಿಲ್ಲದ) ನರಸಿಂಹನ ಉಗುರು ಜನರನ್ನು ಯಾವಾಗಳೂ ಕಾಪಾಡಲಿ)

೨. ವಸ್ತು: ಯಮುನೆಗೆ ಕೃಷ್ಣನ ಮೇಲಿನ ಪ್ರೀತಿ:
ಸಾಂಗತ್ಯ||
ಕಾಲಿಂದಿಯಾನಿರ್ಪೆ ಕಾಲಾಂಗ ನೀನಿರ್ಪೆ
ವೇಲೆಯೊಳಾಡುತ್ತೆ ಬೆಳೆದೆ
ಕಾಲಿಯನಂ ಕಟ್ಟಿ ದೂರಕೆ ಪೋದಪೆ
ಲೀಲೆಯೆ ನಿನಗೆಂತು ವಿರಹ||
(ತಾತ್ಪರ್ಯ:ನಾನು ಕಾಲಿಂದಿ,ಕಪ್ಪು ಬಣ್ಣವುಳ್ಳವಳು, ನೀನು ಕೃಷ್ಣ, ಕಪ್ಪು ಬಣ್ಣದವನು, ನನ್ನ ತೀರದಲ್ಲೇ ಆಡುತ್ತ ಬೆಳೆದವನು, ಕಾಲಿಯನನ್ನು (ಕಾಳಿಂಗ) ಕಟ್ಟಿಹಾಕಿ ಇಲ್ಲಿದ್ದ ವಿಷವನ್ನೆಲ್ಲಾ ತೆಗೆದು ಆ ಬಳಿಕ ದೂರಕ್ಕೆ ಹೋಗಿಬಿಟ್ಟೆ! ಕೃಷ್ಣಾ! ಈ ವಿರಹವೂ ನಿನಗೊಂದು ಲೀಲೆಯಾಯಿತೇ!)

೩. ವಸ್ತು: ಬೆಳಗಿನಜಾವದ ವರ್ಣನೆ (ಉಷೋ ವರ್ಣನೆ):
ಚತುರ್ಮಾತ್ರಾ ಚೌಪದಿ||
ಅನುರಾಗದೊಳುಷೆ  ವೆಣ್ಣಿವಳಾಣ್ಮ ನ
ದಿನಪನ ನೆನಪಿಂದಂಗಳಕೆ|
ತನಿನೀರ್ಚಿಮ್ಮಿಸೆ ಬಾನೊಳಗದರಿಂ
ದನಿತುಂ ಕೆಂಪದು ಪೊಣ್ಮಿರ್ತು||
(ತಾತ್ಪರ್ಯ : ಅನುರಾಗದಿಂದ ಮುಂಜಾವು ಎನ್ನುವಂತಹ ಹೆಣ್ಣು ತನ್ನ ಪ್ರಿಯಕರನಾದ ಸೂರ್ಯನ ನೆನಪಿಂದ ಅಂಗಳಕ್ಕೆ ತನಿ ನೀರನ್ನು ಚಿಮ್ಮಿಸಿದಳು. (ಮುಂಜಾವಿನಲ್ಲಿ ಅಂಗಳಕ್ಕೆ ನೀರು ಹಾಕುವಂತೆ) ಬಾನಿನಲ್ಲಿ ಅದರಿಂದ ಅಷ್ಟು ಕೆಂಪು ಹೊಮ್ಮಿತ್ತು. (ಅವಳ ಮುಖದಲ್ಲಿದ್ದ ಅನುರಾಗವನ್ನೇ ಬಿಂಬಿಸಿತ್ತು))

೪. ವಸ್ತು: ನಕ್ಷತ್ರ
ರಥೋದ್ಧತಾ||
ದೂರದೂರದೊಳೆ ನೋಂತು ನಿಂತಿರಲ್
ದಾರಿಹೋಕರೆನುವುಲ್ಕೆಯೈದಿರಲ್
ತಾರೆಗಳ್ ರಜತಕಾಮದಿಂದಿದೇಂ
ಚಾರುಚಂದ್ರನನೆ ಪೊಂದುತಿರ್ಪರೈ||
(ತಾತ್ಪರ್ಯ :ದೂರದೂರದಲ್ಲಿ ತಾವು ವ್ರತತೊಟ್ಟವರಂತೆ ನಿಂತಿದ್ದರೂ, ದಾರಿಹೋಕರಂತೆ ಉಲ್ಕೆಗಳು ಸಾಗುತ್ತಿದ್ದರೂ, ಬೆಳ್ಳಿಯ ಆಸೆಯಿಂದ ನಕ್ಷತ್ರಗಳು ಚಂದ್ರನನ್ನೇ ಹೊಂದುತ್ತಿವೆ. (ನಕ್ಷತ್ರಗಳ ಪತಿ ಚಂದ್ರ ಎಂಬ ಕಾರಣದಂದ. ಇಲ್ಲಿ "ರಜತದ ಹಾಗಿರುವ ಚಾರುಚಂದ್ರ ದಾರಿಹೋಕರಿಗಾರಿಗೂ ಸಿಗದೇ ಅವನಿಗಾಗೇ ವ್ರತತೊಟ್ಟು ನಿಂತ ನಕ್ಷತ್ರಗಳಿಗೇ ಸಿಕ್ಕ" ಎಂಬ ಭಾವ) )

ಕಾವ್ಯವಾಚನ:(ಪೃಚ್ಛಕರು-ಶತಾವಧಾನೀ ಡಾ| ಆರ್ ಗಣೇಶ್)
೧. "ಬ್ರಹ್ಮ ಮಾನಸಮಹದ್ಗರ್ಭಸಂಭವೆ...."

ಕುವೆಂಪು ಅವರ "ಚಿತ್ರಾಂಗದಾ" ಕಾವ್ಯಖಂಡದ ಆರಂಭದ ಸರಸ್ವತೀಸ್ತವನ
೨. "ಫಲಿತ ಚೂತದ ಬಿಣ್ಪು ನೆರೆ
ತಳಿತಶೋಕೆಯ ಕೆಂಪು...."
 ಕುಮಾರವ್ಯಾಸನ "ಕರ್ಣಾಟಭಾರತಕಥಾಮಂಜರಿ"ಯ ಆದಿಪರ್ವ; ಶತಶೃಂಗ ಪರ್ವತಪ್ರದೇಶದಲ್ಲಿ ಪಾಂಡು ಸತಿಯರ ಜೊತೆ ಇರುವಾಗಳಿನ ಸಂದರ್ಭದಲ್ಲಿ ವಸಂತ ಋತು ಬಂದದ್ದರ ವರ್ಣನೆ.
೩."ಚಳಮತಿಯಾದೆ ನೀಂ ಜಡಧಿಸಂಭವೆಯಪ್ಪುದಱಿಂ........ "
ರನ್ನನ "ಸಾಹಸಭೀಮವಿಜಯಂ" ಕೃತಿಯಲ್ಲಿ ದುರ್ಯೋಧನನ ಊರುಭಂಗವಾದ ಸಂದರ್ಭದಲ್ಲಿ ರಾಜ್ಯಲಕ್ಷ್ಮಿ ಅವನನ್ನು ಬಿಟ್ಟು ಹೊರಟಿರುತ್ತಾಳೆ. ಆಗ ಅವಳನ್ನು ಕಂಡು ಅಶ್ವತ್ಥಾಮ ನಿಂದಿಸಿ ಅವಳನ್ನು ಪುನಃ ಸುರ್ಯೋಧನನಲ್ಲಿಗೆ ಕರೆದುಕೊಂಡು ಹೋಗುವ ಸಂದರ್ಭ
೪. ಮೊದಲ ಮೊಳಗಿಗೇ ಬಂಜುಗೆಟ್ಟಿತೋ ಭೂಮಿಯಣಬೆ ತಾಳಿ....
ಬೇಂದ್ರೆಯವರ ಕಾಳಿದಾಸನ ಮೇಘಸಂದೇಶವನ್ನು ಆಶ್ರಯಿಸಿ ಬರೆದ "ಕನ್ನಡ ಮೇಘದೂತ"ದ ಪದ್ಯ
ಅಪ್ರಸ್ತುತಪ್ರಸಂಗ: (ಪೃಚ್ಛಕರು-ಶ್ರೀ ಸೋಮಶೇಖರ ಶರ್ಮ)







ಬುಧವಾರ, ಮೇ 28, 2014

ಸಹೃದಯಕಾಲ-೧೩: ಮತ್ತೆ ಸಾಗರ

ಕುವೆಂಪು ಅವರ "ಚಿತ್ರಾಂಗದಾ" ಖಂಡಕಾವ್ಯ ಅವರ 'ಶ್ರೀರಾಮಾಯಣದರ್ಶನಂ' ಮಹಾಕಾವ್ಯದ ಛಂದಸ್ಸಿನಲ್ಲಿಯೇ ಇರುವ ಇನ್ನೊಂದು ಕಾವ್ಯವಾಗಿದೆ. ಇಲ್ಲಿನ ಕಥೆ ಜೈಮಿನಿ ಭಾರತದಲ್ಲಿ ಬರುವ ಬಭ್ರುವಾಹನನ ಕಥೆಯ ಆಶ್ರಯವನ್ನೇ ಪಡೆದಿದ್ದರೂ  ಅಲ್ಲಿರುವ ಅತಿಮಾನುಷಘಟನೆಗಳಾವುವೂ ಇಲ್ಲಿಲ್ಲ. ಕೊನೆಯಲ್ಲಿ ಅರ್ಜುನ ಸತ್ತು ಬದುಕುವ ಬದಲು ನಾಟಕೀಯವಾಗಿ ಚಿತ್ರಾಂಗದೆಯೇ ತನ್ನ ಪ್ರಾಣವನ್ನು ಅರ್ಪಿಸುತ್ತಾಳೆ.
ಇಲ್ಲಿನ ಛಂದಸ್ಸಿನಲ್ಲಿ ಕೂಡ ಐದು ಮಾತ್ರಗಳ ಸಹಜವಾದ ಗತಿಯಿದ್ದರೂ ಎಲ್ಲೋ ಒಂದೆರಡು ಕಡೆ ಅದಕ್ಕೆ ಹೊಂದಿಕೊಳ್ಳದಂತೆ ಏಳು ಮಾತ್ರಗಳಾಗಿ ಹೆಚ್ಚಾಗುವುದೂ ಅಲ್ಲದೇ ಗಣಮಧ್ಯದಲ್ಲಿ ಪಾದ ಮುಗಿದು ಬೇರೆಯ ಪಾದ ಪ್ರಾರಂಭವಾಗಿ ಆ ಗಣವನ್ನೂ ಪಾದದ ಮಾತ್ರೆಗಳ ಲೆಕ್ಕವನ್ನೂ ಪೂರ್ಣಗೊಳಿಸಿಕೊಂಡು ಹೋಗುತ್ತದೆ. ಆದಿಪ್ರಾಸದ ನಿಯಮವನ್ನೇನೂ ಇಟ್ಟುಕೊಳ್ಳದ  ಲಲಿತರಗಳೆಯ ಮತ್ತೊಂದು ರೂಪವೇ ಇದು ಎಂದರೆ ತಪ್ಪೇನೂ ಆಗಲಾರದು. ಇಲ್ಲದಿದ್ದರೆ ಸರಳರಗಳೆ (-ಕವಿನಿರ್ದೇಶಿತ ಹೆಸರು) ಎನ್ನಬಹುದು. ಮಹಾಛಂದಸ್ಸೆಂಬುದೂ ಅಷ್ಟೇ. (ಚಿತ್ರಾಂಗದಾ ಕಾವ್ಯವನ್ನೂ ಮಹಾಛಂದಸ್ಸಿಗೆ ತಿದ್ದಿದ್ದಾಗಿ ಹೇಳಿದ್ದಾರೆ. ಎರಡೂ ಒಂದೇ ; ಆದರೂ 'ಅಳಿಯ ಅಲ್ಲ ಮಗಳ ಗಂಡ' ಎಂಬಂತೆ ಎನ್ನಬಹುದು.) ಅದರಲ್ಲಿ ಕೂಡ ಮತ್ತೆ ಯಾವ ಮಹತ್ತೂ ಇಲ್ಲ.
ಕುವೆಂಪು ಅವರ ಕಾವ್ಯದ ಭಾಷೆ; ಅರ್ಥವಾಗದಂತಹ ಪಂಪನ ಕಠಿನ ಹಳೆಗನ್ನಡವೂ ಅಲ್ಲ!! ಅರ್ಥವಿಲ್ಲದಂತಹ ಇತ್ತೀಚಿನ ಕುಕವಿಗಳ (ಸ್ವಯಂಘೋಷಿತ ಸತ್ಕವಿಗಳ) ಹೊಸಗನ್ನಡದ ಭಾಷೆಯೂ ಅಲ್ಲ!!! ಕೆಲವೊಂದು ಕಡೆಗಳಲ್ಲಿ ಕೋಶಗತವಾದ ಶಬ್ದಗಳೇ ಹೆಚ್ಚು ಬಳಸಲ್ಪಟ್ಟರೂ ನಿರಂತರ ಕೋಶದ ಮೊರೆಹೋಗುವಂತಹ ಪೀಡನೆಯೂ ಇಲ್ಲ. ಅಲ್ಲದೇ ಅಲ್ಲಲ್ಲಿ ಹಳಗನ್ನಡವ್ಯಾಕರಣರೂಪಕ್ಕೆ ವಿರುದ್ಧವಾಗ ಪದಪ್ರಯೋಗಗಳೂ,  ವಿಸಂಧಿ ದೋಷಗಳೂ ಬೇಕಾದಷ್ಟು ಸಿಗುತ್ತವೆ.
ಈ ಚಿತ್ರಾಂಗದ ಕಾವ್ಯದಲ್ಲಿ ಆರು ಪರ್ವಗಳಿವೆ. ಅದರಲ್ಲಿ ಅಲ್ಲಲ್ಲಿ ದೃಷ್ಟಾಂತ ಉಪಮಾ ಇತ್ಯಾದಿ ಅಲಂಕಾರಗಳನ್ನು  ಯಥೇಷ್ಟವಾಗಿ ಸವಿಯಬಹುದು. ಅಲ್ಲದೇ ಅನುಪ್ರಾಸಾದಿ ಶಬ್ದ ಚಮತ್ಕಾರವೂ ಇದೆ.
 
ಅಲ್ಲಿ ಕಾಣುವ ಒಂದು ಸಾಗರದ ವರ್ಣನೆಯನ್ನು ಅವಲೋಕಿಸುವುದಾದರೆ-
ಉರುಳುರುಳು ಸಾಗರವೆ ಮುನ್ನೀರಿನಾಗರವೆ
ತೆರೆತೋಳ್ಗಳಿಂದೆಯಾಲಂಗಿಸಿ ಧರಿತ್ರಿಯಂ
ವರುಷಶತಗತವಾದರಳಿಯದನುರಾಗದಲಿ         ೧೭೬೦
ಹರುಷ ಭೋಗದಲಿ! ಸುರನೀಲ ಸುಂದರಮೂರ್ತಿ
ಗಂಭೀರವಿಸ್ತಾರ ಸುಗಭೀರನೀರನಿಧಿ
ನೇಸರಿಂ ಕೆಲಸಿಡಿದು ನಮ್ಮೀ ಧರಾದೇವಿ
ಬೆಂಕಿ ಮೀಹದೊಳಂದು ಮಿಂದೆದ್ದ ಮೊದಲಲ್ಲಿ
ಹೆತ್ತ ಬಾಳ್ಗಿಂಬಿತ್ತ ದಾತೃವೆ ನಮೋ ನಮಃ!
ಗಡಿಮೀರಿ ನಿಡುಬೆಳೆದ ನಿನ್ನ ತಡಿಗುಂಟೆ ಗುಡಿ?
ಅಲ್ಲಿಯಾತ್ಮದ ಬಯಕೆವಳ್ಳಿ ದಾಂಗುಡಿ ದಾಂಟಿ
ಕಾಲದೇಶಾಂಡವನೊಡೆದು ಮೀಂಟಿ ಬ್ರಹ್ಮಮಂ
ತಬ್ಬುವುದಂತತೆಯನೀಂಟಿ! ಮಾನವನೆದೆಗೆ 
ಧೀರತೆಯ ಕಿಡಿಗರೆದು ಸಾಹಸಕ್ಕೆಳದೊಯ್ವ
ಕರೆ ನಿನ್ನ ಮೊರೆ, ನಿರಂತರ ಚೇತಸ ಜಲಧಿ!
ನರನ ನಾಗರಿಕತೆಯ ತೀರ್ಥಯಾತ್ರೆಯ ಮಹಾ
ವಿಸ್ತೃತ ಸಲಿಲ ಪಥವೆ ಮೊರೆದುರುಳು ರತ್ನಧಿಯೆ
ಉಲ್ಲೋಲಕಲ್ಲೋಲ ರುದ್ರಾಟ್ಟಹಾಸದಿಂ
ಶಂಕರಭಯಂಕರದ ಮೋಹವನೆರಚಿ ಬೀಸಿ 

ಸಮುದ್ರಕ್ಕೆ ತೆರೆಗಳೇ ತೋಳುಗಳು. ಆ ತೋಳ್ಗಳಿಂದ ಧರೆಯನ್ನು ಆಲಂಗಿಸುತ್ತಿರುವುದೆಂಬ ಕಲ್ಪನೆ ಸೊಗಸಾಗಿದೆಯಷ್ಟೆ! 
"ಸೂರ್ಯನಿಂದ ಸಿಡಿದ ಈ ಧರಾದೇವಿ ಬೆಂಕಿಯ ಸ್ನಾನದಲ್ಲಿ ಮಿಂದೆದ್ದ ಮೊದಲಲ್ಲಿ ತಣ್ಪನ್ನು ಕೊಟ್ಟು ಹೆತ್ತ ಬಾಳ್ಗೆ ಒಳ್ಳೆಯದನ್ನು ಮಾಡಿದ ದಾತೃವೇ  ನಿನಗೆ ನಮಸ್ಕಾರ" ಎಂಬುದೂ ಅಷ್ಟೆ.
"ಗಡಿಮೀರಿ ಬೆಳೆದು ನಿಂತ ನಿನ್ನ ತಡಿಗೆ ಗುಡಿಯುಂಟೇ? ಅಲ್ಲಿ ಬಯಕೆಯ ಬಳ್ಳಿ ದಾಟುತ್ತಾ ಕಾಲದೇಶಗಳ ಗರ್ಭವನ್ನು ಬೇಧಿಸಿ ಬ್ರಹ್ಮವನ್ನು ತಬ್ಬಿ ಅನಂತತೆಯನ್ನು ಸವಿಯುವುದು.. ಮಾನವನ ಮನಸಿನಲ್ಲಿ ಧೀರತೆಯ ಕಿಚ್ಚನ್ನು ಹಚ್ಚುವುದು, ಸಾಹಸವನ್ನು ಮಾಡಲು ಎಳೆದೊಯ್ಯುವುದು ಅದೇ ನಿನ್ನ ಕರೆ ನಿನ್ನ ಮೊರೆ(>ಮೊರೆತ=ಧ್ವನಿ) ನಿರಂತರ ಚೇತಸ ಜಲಧಿಯೇ! ನರನ ನಾಗರಿಕತೆಯೆಂಬ ತೀರ್ಥಯಾತ್ರೆಯ ನೀರಿನ ಹೆದ್ದಾರಿ.. ಧ್ವನಿಗಯ್ಯುತ್ತಾ ಉರುಳು.. ರತ್ನಗಳಿಗಾಗರವಾದ ಸಮುದ್ರವೇ ಉಲ್ಲೋಲಕಲ್ಲೋಲದ ರುದ್ರಾಟ್ಟಹಾಸ್ಸದಿಂದ ಭಯಂಕರವಾದರೂ ಶಂಕರ(ಒಳ್ಳೆಯದನ್ನು ಮಾಡುವ)ಮೋಹವನ್ನು ಬೀಸು!" ಎಂದು ಸಾಗರವನ್ನು ಸಂಬೋಧಿಸುತ್ತಾರೆ. ಇಲ್ಲಿ ಹಿಂದೆ ಷಡಕ್ಷರಿಯ ವರ್ಣನೆಗಳಲ್ಲಿ ಬರುವಂತೆ ಶ್ಲೇಷಾದಿ ಚಮತ್ಕಾರಗಳಿಲ್ಲದಿದ್ದರೂ ಸಾಗರದ ಗಂಭೀರತೆಯೂ ನಿರಂತರ ಮೊರೆತವೂ ವಿಸ್ತಾರವೂ ಅಲ್ಲದೇ ಅದರ ರುದ್ರಾಟ್ಟಹಾಸವೂ ಚಿತ್ರಿತವಾಗಿದೆ.ಅಲ್ಲದೇ ಮಾನವನ ಮನಸ್ಸಿಗೆ ಧೀರತೆ ಹುಟ್ಟೂವುದು, ಸಾಹಸವನ್ನು ಮಾಡುವ ಪ್ರವೃತ್ತಿ ಬೆಳೆಯುವುದು ಇವುಗಳನ್ನೆಲ್ಲ ಸಾಗರದ ಗುಣಗಾತ್ರಗಳ ಜೊತೆಗೆ ತಂದಿರುವುದು ಇಲ್ಲಿ ಒಂದು ವಿಶೇಷ. 

ಗುರುವಾರ, ಮೇ 15, 2014

ಸಹೃದಯಕಾಲ-೧೨: ಕರ್ಣಾಟಕ ಕಾದಂಬರಿ


ಬಾಣನ ಕಾದಂಬರಿಯ ಬಗ್ಗೆ "ಕಾದಂಬರೀರಸಜ್ಞಾನಾಂ ಆಹಾರೋಪಿ ನ ರೋಚತೇ" ಎಂದು ಹೇಳಿದ್ದನ್ನು ಕೇಳಿದರೇ ಅದರ ಸ್ವಾದ ಗೊತ್ತಾಗುತ್ತದೆ. ಬಾಣನ ಶೈಲಿಯಂತೆ ಈ ಮಾತಿನಲ್ಲಿಯೂ ಶ್ಲೇಷವಿರುವುದೂ ಒಂದು ಸ್ವಾರಸ್ಯ. ಕಾದಂಬರಿ ಎಂದರೆ ಬಾಣನ ಕೃತಿಯಾದ ಕಾದಂಬರಿಯಷ್ಟೇ ಅಲ್ಲದೇ 'ಸಾರಾಯಿ' ಎಂಬ ಅರ್ಥದಲ್ಲಿಯೂ ಬಳಕೆಯಲ್ಲಿದೆ. ಹಾಗಾಗಿ ಯಾವ ಕಾದಂಬರಿಯ ರಸವನ್ನು ಅರಿತರೂ ಆಹಾರ ರುಚಿಸುವುದಿಲ್ಲ ಎಂಬುದಂತೂ ಸತ್ಯ. ಅಲ್ಲದೇ ಬಾಣಭಟ್ಟನ ಕಾದಂಬರಿ ಓದುಗನಲ್ಲಿ ಹುಟ್ಟಿಸುವ ಕುತುಕ ಅದರ ಶೈಲಿಯ ಸ್ವಾರಸ್ಯ ಇವುಗಳೆಲ್ಲದರಿಂದ ಸಂಸ್ಕೃತದ ಇತಿಹಾಸದಲ್ಲೇ ಅದೊಂದು ಅಪೂರ್ವಕೃತಿಯಾಗಿದೆ. ಹಾಗಾಗಿಯೇ "ಗದ್ಯಂ ಕವೀನಾಂ ನಿಕಷಂ ವದಂತಿ" ಎಂಬ ಮಾತೂ ಹುಟ್ಟಿಕೊಂಡಿತು. ಏಕೆಂದರೆ ಪದ್ಯವೊಂದನ್ನು ಯಾರು ಬೇಕಾದರೂ ಬರೆದುಬಿಡಬಹುದು.(ಆಧುನಿಕ ಕವಿತೆಗಳನ್ನೂ ಸೇರಿಸಿಕೊಂಡು!! ನಾ.ಕಸ್ತೂರಿಯವರ ಅನರ್ಥಕೋಶದ ಮಾತನ್ನೂ ಸೇರಿಸಬಹುದು: "ಗದ್ಯ ಬರೆಯಲಾರದವ ಪದ್ಯ ಬರೆದು ಸೇಡು ತೀರಿಸಿಕೊಂಡ" ಎಂದು) ಅದು ನೀರಸವಾಗಿದ್ದರೂ ಅದರ ಛಂದೋಬಂಧವೇ(ನವ್ಯಕವಿತೆಗಳನ್ನು ಬಿಟ್ಟು) ಅದಕ್ಕೊಂದು ಗಟ್ಟಿತನವನ್ನು ಕೊಟ್ಟುಬಿಡುತ್ತದೆ. ಆದರೆ ಗದ್ಯವೆಂದಾದ ಮೇಲೆ ಅದರಲ್ಲಿ ತನ್ನದೇ ಆದ ಬಿಗಿ ಸಾರ್ಥಕಪದಬಂಧಗಳ ಮಧುರವಾಗುವ ಶೈಲಿ ಓದುಗರಿಗೆ ಬೇಸರ ತರಿಸದಿರುವಂತಹ ಕಥಾ ವಿಸ್ತಾರ ಇತ್ಯಾದಿಗಳೆಲ್ಲವೂ ಇರಬೇಕಲ್ಲದೇ ಸೂಕ್ತರೀತಿಯಲ್ಲಿ ಹೆಣೆದುಕೊಂಡಿರಬೇಕು. ಅದಕ್ಕೇ ಅನೇಕ ಕವಿಗಳು ಗದ್ಯದಲ್ಲಿಯೂ ಚಂಪುವಿನಲ್ಲಿಯೂ ಕಾವ್ಯವನ್ನು ರಚಿಸಲು ಹಿಂಜರಿದರಿರಬೇಕು.
PC:Internet
  

ಇಂತಹ ಬಾಣನ ಕಾದಂಬರಿಯನ್ನು ನಾಗವರ್ಮ ಕನ್ನಡಕ್ಕೆ ಅನುವಾದಿಸುವಾಗ ಒಂದು ಉತ್ತಮ ಬದಲಾವಣೇ ಮಾಡಿಕೊಂಡಿದ್ದೇನೆಂದರೆ ಅದನ್ನು ಚಂಪುವಿನಲ್ಲಿ ಅನುವಾದಿಸಲು ಹೊರಟಿದ್ದು. ಅಲ್ಲದೇ ಬೇಕಾದಷ್ಟು ಸ್ವಾತಂತ್ರ್ಯವನ್ನು ತೆಗೆದುಕೊಂಡು ಕೆಲವಷ್ಟು ಸ್ವಾರಸ್ಯಗಳನ್ನು ಮಾತ್ರವೇ ಉಳಿಸಿಕೊಂಡು ಹಲವಾರು ವರ್ಣನೆಗಳ ಗದ್ಯಭಾಗವನ್ನು ಬಿಟ್ಟು ಅನುವಾದ ಮಾಡಿರುವುದು ಇವುಗಳಿಂದ ಸಂಸ್ಕೃತಕಾದಂಬರಿಯ ಕನ್ನಡರೂಪದ ಸಾರಸಂಗ್ರಹವಿದೆಂದರೆ ತಪ್ಪಾಗಲಾರದೇನೋ!
ಬಾಣಭಟ್ಟನ ಸಂಸ್ಕೃತ ಕಾದಂಬರಿಯನ್ನು ಸಶಕ್ತವಾಗಿ ಸಾಲಂಕಾರವಾಗಿ ಕನ್ನಡದಲ್ಲಿ ಅನುವಾದ ಮಾಡಿದ ನಾಗವರ್ಮನ ಪದ್ಯಶೈಲಿ  ಹಾಗೆಯೇ ಸುಲಭವೇದ್ಯವಾಗುವ ಪದಪ್ರಯೋಗಗಳು ಉಳಿದ ಹಳಗನ್ನಡಕವಿಗಳಂತೆ ಅರ್ಥಮಾಡಿಕೊಳ್ಳಲು ಕ್ಲೇಶವಾಗುವುದಿಲ್ಲ.  ಏಕೆಂದರೆ ಅವನ ಪದ್ಯಗಳಲ್ಲಿ ಕನ್ನಡಪದಗಳ ಜೊತೆ ರೂಢಿಯ ಸರ್ವಜನವೇದ್ಯವಾಗುವ ಸಮಸಂಸ್ಕೃತಪದಗಳೇ ಹೆಚ್ಚಾಗಿ ಬಳಸಲ್ಪಟ್ಟಿರುವುದು. ಅವನ ಕಾವ್ಯದ ಮೋಡಿಗೆ ಭೋಜರಾಜನು ಅನೇಕ ಜಾತ್ಯಶ್ವಗಳನ್ನು ನೀಡಿ ಗೌರವಿಸಿದ್ದನೆಂದು ಅವನ ಪದ್ಯಗಳಲ್ಲಿಯೇ ತಿಳಿಯುತ್ತದೆ.

ನಾಗವರ್ಮನ ಪದ್ಯಗಳ ಶೈಲಿಯನ್ನು ಅವಲೋಕಿಸಲು ಒಂದೆರಡು ಪದ್ಯಗಳನ್ನು ನೋಡಬಹುದು:-
ಶಾರ್ದೂಲವಿಕ್ರೀಡಿತ||
ಬಾಣಂ ವಲ್ಲಭನಕ್ಕುಮೆಂದು ಪಡೆದಾ ವಾಗ್ದೇವಿಗಬ್ಜೋಧ್ಭವಂ
ಜಾಣಿಂ ಬಾಣಿಯೆನಿಪ್ಪದೊಂದು ಪೆಸರಂ ಮುನ್ನಿತ್ತನೆಂದಂದು ಪೋ
ಮಾಣಿನ್ನನ್ಯ ಕವಿಸ್ತುತಿವ್ಯಸನಮಂ ವಾಗ್ಜಾತಚಾತುರ್ಯಗೀ
ರ್ವಾಣಂ ತಾನೆನೆ ಸಂದ ಬಾಣನೆ ವಲಂ ವಂದ್ಯಂ ಪೆರರ್ವಂದ್ಯರೇ||

("ಬಾಣನು ಮುಂದೆ ಇವಳ ವಲ್ಲಭನಾಗುತ್ತಾನೆ" ಎಂದು ವಾಗ್ದೇವಿಯನ್ನು ಹುಟ್ಟಿಸಿದಾಗ ಬ್ರಹ್ಮನು ಅವಳಿಗೆ 'ಬಾಣಿ'(ವಾಣಿ) ಎಂಬ ಹೆಸರನ್ನು ಇಟ್ಟ. ಹೀಗಿರಲು ಬೇರೆ ಕವಿಗಳ ಸ್ತುತಿಯನ್ನು ಮಾಡುವ ವ್ಯಸನ ನಮಗೇತಕ್ಕೆ! ಹೋ.. ಬೇಡ!  ಬ್ರಹ್ಮನ ಚಾತುರ್ಯದ ಗೀರ್ವಾಣನೇ ತಾನೆನುವಂತೆ ಸಲ್ಲುತ್ತಿರುವ ಬಾಣನೇ ವಂದ್ಯ. ಬೇರೆಯ ಕವಿಗಳು ವಂದ್ಯರೇ!? )

ಅಷ್ಟಾದ ಬಳಿಕ ಕಥಾಮುಖದಲ್ಲಿ ಶೂದ್ರಕನೆಂಬ ರಾಜನಿದ್ದನೆಂಬುದನ್ನು ಹೇಳಲು ಪ್ರಾರಂಭಿಸುತ್ತಾ ಬಾಣನ "ಆಸೀದಶೇಷ ನರಪತಿಶಿರಸಮಭ್ಯರ್ಚಿತ ಶಾಸನಃ ಪಾಕಶಾಸನ ಇವಾಪರಃ ಚತುರುಧಧಿ ಮಾಲಾಮೇಖಲಾ ಭುವೋ ಭರ್ತಾ, ಪ್ರತಾಪಾನುರಾಗಾವನತ ಸಮಸ್ತಸಾಮಂತಚಕ್ರಃ ಚಕ್ರವರ್ತಿ ಲಕ್ಷಣೋಪೇತಃ......" ಇತ್ಯಾದಿ ಪುಂಖಾನುಪುಂಖವಾಗಿ ಸಾಗುವ ಉಲ್ಲೇಖ ಪರಿಸಂಖ್ಯಾಶ್ಲೇಷಾದ್ಯಂಕಾರಯುತವಾದ ಮಾತನ್ನು ಒಂದು ಚಂಪಕಮಾಲೆಯಲ್ಲಿ ಹೀಗೆ ಸೆರೆಹಿಡಿಯುತ್ತಾನೆ

ಇಳೆಯೊಳದೊರ್ವನಿಂದ್ರನೆನೆ ಸಂದ ಸಮೃದ್ಧಿಯೊಳೊಂದಿ ಕೂಡಿ ತ
ನ್ನೊಳೆ ನೃಪಲಕ್ಷಣಂ ನೆಗೞೆ ದೋರ್ವಲದಿಂ ಚತುರಬ್ಧಿ ಮೇಖಲಾ
ವಳಯಿತ ಭೂಮಿಗಾದನೆಱೆಯಂ ನೃಪತಿಪ್ರಭುಲೋಕಮಂ ನಿಜೋ
ಜ್ವಳತರಕೀರ್ತಿಯಿಂ ನೆಱೆಯೆ ಮುದ್ರಿಸಿ ಶೂದ್ರಕನೆಂಬ ಭೂಭುಜಂ||
(ಭೂಮಿಯಲ್ಲಿ ಒಬ್ಬ ಇಂದ್ರನೆನುವಂತೆ ಸಮೃದ್ಧಿಯಲ್ಲಿ ಒಂದುಕೂಡಿ, ತನ್ನಲ್ಲಿ ನೃಪಲಕ್ಷಣಗಳೆಲ್ಲ ಕೂಡಿರಲು ತೋಳಬಲದಿಂದ ನಾಲ್ಕು ಸಮುದ್ರಗಳಿಂದಾದ ಭೂಮಿಗೆ ಪತಿಯಾಗಿ ರಾಜರಸಮೂಹವನ್ನು ಆವರಿಸಿದ ತನ್ನ ಉಜ್ಜ್ವಲವಾದ ಕೀರ್ತಿಯಿಂದ ಮುದ್ರಿಸಿ ಶೂದ್ರಕನೆಂಬ ರಾಜನಿದ್ದನು)
ಇಲ್ಲಿ 'ಮುದ್ರಿಸಿ ಶೂದ್ರಕ' ಎಂಬಲ್ಲಿ ಅನುಪ್ರಾಸವನ್ನೂ ಮಾಡಿ ಹೆಚ್ಚು ಸಮಾಸಭೂಯಿಷ್ಟ ಪದಪ್ರಯೋಗಗಳಿಲ್ಲದೇ ಸುಲಭವೇದ್ಯವಾಗುವಂತಹ ಸುಲಲಿತ ಪದ್ಯಸೃಷ್ಟಿಯನ್ನು ಮಾಡಿರುವುದು ನಾಗವರ್ಮನ ಶೈಲಿಗೆ ಕರಮುಕುರದಂತೆ ಕಾಣುತ್ತದೆ. ಅವನು ಆಯ್ದುಕೊಂಡ ಚಂಪಕಮಾಲೆಯೂ ಸಂದರ್ಭಕ್ಕೆ ತಕ್ಕಂತೆ ರಸಪೋಷಕವಾದ ಲಲಿತವಾದ ಇಂತಹ ಕೋಮಲಭಾವನೆಗಳಿಗೇ ಯುಕ್ತವಾದ ಛಂದಸ್ಸೂ ಆದಕಾರಣ ಛಂದಸ್ಸಿನಲ್ಲೂ ಸೊಗಸನ್ನೂ ಔಚಿತ್ಯವನ್ನೂ ಇಟ್ಟುಕೊಂಡಿರುವುದೂ ಸ್ವಾರಸ್ಯವಾಗಿದೆ. 

ಗುರುವಾರ, ಮೇ 8, 2014

ಸಹೃದಯಕಾಲ-೧೧:ದ್ರೌಪದಿಯ ವರ್ಣನೆ

PC:Internet

















ಕುಮಾರವ್ಯಾಸನ ಬಗ್ಗೆ ಕೇಳದವರಾರು? ಅವನ ಪದ್ಯವನ್ನು ಮೆಚ್ಚದಿರುವರಾರು? "ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು! ಭಾರತ ಕಣ್ಣಲಿ ಕುಣಿವುದು! ಮೆಯ್ಯಲಿ ಮಿಂಚಿನ ಹೊಳೆ ತುಳುಕಾಡುವುದು!" ಎಂದು ಕುವೆಂಪು ಅವರೇ ತೋರಣನಾಂದಿಯಲ್ಲಿ ಹೇಳುತ್ತಾರೆ.(ಪ್ರಕಾಶನ:ಪ್ರಸಾರಾಂಗ ಮೈಸೂರು ವಿ.ವಿ) 

ಕುಮಾರವ್ಯಾಸ ತನ್ನಕಾವ್ಯ ತೊಳಸಿಯವುದಕ(ಬರಿಯ ತುಳಸಿ ನೀರು)ಎಂದು ಹೇಳಿಕೊಂಡರೂ ಅದೊಂದು ರಸಾಮೃತಸರಸ್ಸೇ ಸರಿ! ಹಿಂದೆ ಪಂಪನ ಭಾರತದಲ್ಲಾದ ಅನೇಕ ಲೋಪದೋಷಗಳನ್ನು ತೊಡೆದು ತನ್ನದೇ ಆದ ಅದ್ಭುತವಾದ ಕಾವ್ಯಪ್ರಪಂಚವೊಂದನ್ನು ಸೃಷ್ಟಿಸಿದ್ದಾನೆ ಕುಮಾರವ್ಯಾಸ. ಅವನ ಕುರಿತು ಅದೆಷ್ಟು ದಂತಕಥೆಗಳೋ! ಅದೆಷ್ಟು ಸತ್ಯ ಕಥೆಗಳೋ! ಕುಮಾರವ್ಯಾಸನ ಭಾರತವೊಂದನ್ನೇ ಕುರಿತು ಅದೆಷ್ಟು ಲೇಖನಗಳು, ಸಂಶೋಧನಪ್ರಬಂಧಗಳೂ ಅಲ್ಲದೇ ವ್ಯಾಖ್ಯಾನಗಳೂ ಬಂದಿವೆಯೋ ದೇವರಿಗೇ ಗೊತ್ತು! ಇಂತಹ ಅಪೂರ್ವವಾದ ಕಾವ್ಯಸೃಷ್ಟಿಯಲ್ಲಿ ಕುಮಾರವ್ಯಾಸ ತನ್ನ ಕವಿಪ್ರತಿಭೆಯನ್ನು ತೋರಿಸುತ್ತಾ ಅದೆಷ್ಟೋ ರಸಮಯ ಪದ್ಯಗಳನ್ನು ಕಟ್ಟಿದ್ದಾನೆ. ಹಿಂದ್ದೆ ವಸಂತದ ವರ್ಣನೆಯನ್ನು ನೋಡಿಯಾಗಿದೆ ಕೂಡ. ಇಂತಹ ಅನೇಕ ಕಡೆಗಳಲ್ಲಿ ಅವನ ವರ್ಣನೆಗೆ ಅವನೇ ಸಾಟಿ.
(ರಸಭರಿತ ಪದ್ಯಗಳ ಗದ್ಯಾನುವಾದ ಮಾಡುವಲ್ಲಿ ನನ್ನಿಂದ ಆದ ಪ್ರಮಾದಗಳನ್ನು ಸಹೃದಯರು ತಿದ್ದಬೇಕು)
ಕುಮಾರವ್ಯಾಸನ ಕರ್ಣಾಟಭಾರತಕಥಾಮಂಜರಿಯ ಆದಿಪರ್ವದ ಹದಿಮೂರನೆಯ ಸಂಧಿಯಲ್ಲಿ ಪರಿಪರಿಯಾಗಿ ದ್ರೌಪದಿಯ ವರ್ಣನೆ ಮಾಡುತ್ತಾನೆ. ಸೂಚನೆಯ ಪದ್ಯವನ್ನೇ -"ಕಮಲಮುಖಿ ನಡೆತಂದಳಂದಿನ ಕಮಲೆಯೆನೆ ಪಾಂಚಾಲಸುತೆ ನಿಜರಮಣರನು ನೋಡಿದಳು ಪೃಥ್ವೀಪಾಲ ಪಂಕ್ತಿಯಲಿ" ಎಂದು ಪ್ರಾರಂಭಿಸುತ್ತಾನೆ.ಇಲ್ಲಿ ಬರುವ ದ್ರೌಪದಿಯ ಅನೇಕಾನೇಕ ವರ್ಣನೆಗಳ ಪದ್ಯಗಳಲ್ಲಿ ಒಂದೊಂದೂ ಮುಕ್ತಕಗಳೇ ಸರಿ. ದ್ರೌಪದಿಯ ಸ್ವಯಂವರಕ್ಕೆಂದು ಅನೇಕಾನೇಕ ರಾಜರು ನೆರೆದಿದ್ದಾರೆ. ಪಾಂಡವರೂ ತಮ್ಮ ಬ್ರಾಹ್ಮಣವೇಷದಲ್ಲಿ ಅಲ್ಲಿಗೆ ಬಂದಿದ್ದಾರೆ. ದ್ರುಪದರಾಜ ದೃಷ್ಟದ್ಯುಮ್ನನಿಗೆ ಹೇಳಿ ಮತ್ಸ್ಯಯಂತ್ರವನ್ನು ತರಿಸಿ ಅದರೊಡನೆಯೇ ಬಾಣ ಬಿಲ್ಲುಗಳನ್ನು ತರಿಸಿ ನೆರೆದವರಿದಿರು ನಿಯಮವನ್ನು ಘೋಷಿಸಿದ್ದಾನೆ. ಅವನ ಆಜ್ಞೆಯ ಮೇರೆಗೆ  ಕೋಮಲಾಂಗಿಯಾದ ದ್ರೌಪದಿ ಒಳ್ಳೆಯ ರೇಶಿಮೆಯ ಉಡುಗೆಯನ್ನುಟ್ಟು ತನ್ನ ಸಖಿಯರ ಜೊತೆಯಲ್ಲಿ ಬರುತ್ತಿದ್ದಾಳೆ. ಆಗ-

ಹೊರೆಯ ಸಖಿಯರ ನೋಟ ಮೈಯಲಿ
ಹರಿದು ಬಳಲದು ಚಿತ್ತವೀಕೆಯ 
ಧರಿಸಿ ಕುಸಿಯದು ಕಿವಿಗಳಿಗೆ ಮೆಲ್ನುಡಿಯ ಸವಿ ಸವಿದು
ಅರುಚಿಯಾಗದು ನಾಸಿಕವು ಮೈ 
ಪರಿಮಳದ ಪೂರದಲಿ ಗಂಧಾಂ
ತರಕೆ ನೆರೆಯದು ರೂಪನೇನೆಂಬೆನು ನಿತಂಬಿನಿಯ||೧೦||
(ಅವಳ ಹೊರೆಯ ಸಖಿಯರ ನೋಟ ಮೈಯಲ್ಲಿ ಹರಿದು ಬಳಲುತ್ತಿರಲಿಲ್ಲ. ಇವಳನ್ನು ಧರಿಸಿ ಮನಸ್ಸು ಕುಸಿಯುತ್ತಿರಲಿಲ್ಲ.ಅವಳ ಮೆಲ್ನುಡಿಗಳನ್ನು ಕೇಳಿ ಕಿವಿಗಳಿಗೆ ಬೇಸರವಾಗುವುದಿಲ್ಲ. ಅವಳ ಮೈ ಪರಿಮಳದ ಪೂರದಲ್ಲಿ ಬೇರೆಯ ಗಂಧಕ್ಕೆ ನಾಸಿಕವು ನೆರೆಯುತ್ತಿರಲಿಲ್ಲ. ಅಂತಹ ಸುಂದರಿಯ ರೂಪವನ್ನು ಏನೆನ್ನುವುದು.)

ಮುಂದೆ-
ಪರಿಮಳದ ಪರಮಾಣುಗಳ ಸಂ
ವರಿಸಿ ಮುಕ್ತಾಫಲದ ಕೆಂದಾ
ವರೆಯ ಮರಿದುಂಬಿಗಳ ವರ್ಣಾಂತರವನಳವಡಿಸಿ
ಸರಸ ವೀಣಾ ಧ್ವನಿಯ ಹಂಸೆಯ 
ಗರುವಗತಿಗಳನಾಯ್ದು ಮನ್ಮಥ
ವರವಿರಿಂಚಿಯೆ ಸೃಜಿಸಿದನು ಪಾಂಚಾಲನಂದನೆಯ||೧೭||
(ದ್ರೌಪದಿಯನ್ನು ಪರಿಮಳದ ಪರಮಾಣುಗಳನ್ನು ಸೇರಿಸಿ, ಮುತ್ತುಗಳ, ಕೆಂಪಾದ ತಾವರೆಗಳ ಮತ್ತು ಮರಿದುಂಬಿಗಳ ವರ್ಣಗಳನ್ನು ಸೇರಿಸಿ ಸರಸವಾದ ವೀಣೆಯ ಧ್ವನಿಯನ್ನೂ ಹಂಸದ ಗರ್ವದ ನಡಿಗೆಯನ್ನೂ ಆಯ್ದು ಮನ್ಮಥ ಎಂಬ ಬ್ರಹ್ಮನೇ ಸೃಷ್ಟಿಸಿದನು.)

ಇವಲ್ಲದೇ ಈ ಸಂಧಿಯಲ್ಲಿ ದ್ರೌಪದಿಯ ತನುವಿನ ಸೌಂದರ್ಯ ಬಿಂಕ ಬಿನ್ನಾಣಗಳನ್ನು ವರ್ಣಿಸುವ ಅನೇಕಾನೇಕ ಪದ್ಯಗಳ ರಸಾಸ್ವಾದ ಮಾಡಬಹುದು.
ಅದೆಲ್ಲದರ ಬಳಿಕ ಅವಳಿಗೆ ಅವಳಣ್ಣ ಬಂದ ನೃಪಾಲರ ಪರಿಚಯವನ್ನು ಮಾಡಿಕೊಟ್ಟು ಇವನು ಇಂತಹ ದೇಶದ ರಾಜ. ಇವನು ಇಂತಹವನು ಎಂದೆಲ್ಲ ಹೇಳುತ್ತಾನೆ.ಆ ನಂತರ ಅವಳ ಸೌಂದರ್ಯಾತಿಶಯವನ್ನು ನೊಡಿದ ನೃಪರ ಪರಿಸ್ಥಿತಿ ಹೇಗಿತ್ತೆಂಬುದನ್ನೂ ಹೇಳುತ್ತಾನೆ.

ಕೆಲರು ಮಧುರಾಪಾಂಗದಲಿ  ಕಂ
ಗಳ ಮರೀಚಿಯ ಬೆಳಗಿನಲಿ  ಕೆಲ
ರೆಳೆನಗೆಯ ಮಿಂಚಿನಲಿ ಸಖಿಯರ ಮೇಳವಾತಿನಲಿ
ಲಲನೆ ನೋಡಿದಳೆಂದು ಸೊಗಸಿನ
ಲೊಲಿವ ಸಖಿಯರಿಗೆಂದಳೆಂದೊಳ
ಗೊಳಗೆ ಬೆರೆತರು ಬಯಲು ಮಧುವಿನ ಬಾಯ ಸವಿಗಳಲಿ||೬೫||
(ರಾಜರು ಕೆಲವರು ಮಧುರವಾದ ಕಣ್ಣ ನೋಟದಲ್ಲಿ, ಕೆಲವರು ಕಣ್ಣಿನ ಬೆಳಕಿನ ಕಿರಣಗಳಲ್ಲಿ, ಕೆಲವರು ಎಳನಗೆಯ ಮಿಂಚಿನಲ್ಲಿ, ಕೆಲವರು ಸಖಿಯರ ಮೇಳದ ಮಾತಿನಲ್ಲಿ, ದ್ರೌಪದಿ 'ನನ್ನನ್ನು ನೋಡಿದಳು' ಎಂದು ಕೆಲವರು , ಸೊಗಸಿನಲ್ಲಿ ಒಲಿವ ಸಖಿಯರ ಬಳಿ 'ತನ್ನ ಬಗ್ಗೆ ಹೇಳಿದಳೆಂದು' ಕೆಲವರು ಹೀಗೆ ಆ ರಾಜರುಗಳೆಲ್ಲ ಸಂತಸ ಪಡುತ್ತಿದ್ದರು. )

ಮಡಿಸಿದೆಲೆ ಬೆರಳೊಳಗೆ ಬಾಯೊಳ
ಗಡಿಸಿದೆಲೆ ಬಾಯೊಳಗೆ ಸಚಿವರ 
ನುಡಿಯ ಕೇಳರು ಸುಳಿಯ ಕಾಣರು ಲೋಚನಾಗ್ರದಲಿ
ಕಡುಮುಳಿದ ಕಂದರ್ಪ ಶರವವ
ಘಡಿಸಿ ಕೈಗಳ ನೋಡಿ ನೃಪರೆವೆ
ಮಿಡುಕದಿರ್ದರು ಬೆರಳ ಮೂಗಿನ ಹೊತ್ತ ದುಗುಡದಲಿ||೬೭||
(ದ್ರೌಪದಿಯ ರೂಪು ಲಾವಣ್ಯಗಳು ರಾಜರ ಮೇಲೆ ಹೇಗೆ ಪರಿಣಾಮ ಬೀರಿತ್ತೆಂದರೆ ಮಡಿಸಿದ ವೀಳ್ಯದೆಲೆ ಬೆರಳಲ್ಲಿಯೇ ಇತ್ತು, ಬಾಯೊಳಗೆ ಇಟ್ಟುಕೊಂಡ ಎಲೆ ಬಾಯೊಳಗೇ ಇತ್ತು. ಸಚಿವರ ಮಾತುಗಳು ಕೇಳುತ್ತಲೇ ಇರಲಿಲ್ಲ. ಕಣ್ಣಿನ ತುದಿಯಲ್ಲಿ ಸುಳಿಯ ಕಾಣದಾದರು. ಬಹಳ ಸಿಟ್ಟಾದ ಮನ್ಮಥನ ಬಾಣದಂತಿರುವ ಕೈಗಳ ನೋಡಿ ಆ ರಾಜರು ಕಣ್ಣೆವೆ ಮಿಡುಕದೆ ಮೂಗಿನ ಮೇಲೆ ಬೆರಳಿಟ್ಟುಕೊಂಡು ದುಗುಡವನ್ನು ಹೊತ್ತಂತೆ ಇದ್ದರು.)

ಗುರುವಾರ, ಮೇ 1, 2014

ಸಹೃದಯಕಾಲ-೧೦:ನಾಂದೀಪದ್ಯದ ಮುಕ್ತಕ


















ಅವಧಾನ ಪದ್ಯಗಳೆಲ್ಲವೂ ಮುಕ್ತಕಗಳೇ. ಮುಕ್ತಕವೆಂದರೆ ಮುಕ್ತವಾಗಿರುವುವು ಎಂಬುದೂ ಹೌದು. ಹಾಗೆಯೇ ಮುತ್ತುಗಳೆಂದೂ ಹೌದು,  ನಿಜಾರ್ಥದಲ್ಲಿ ಕೂಡ ಈ ಪದ್ಯಗಳೆಲ್ಲ ಮುತ್ತುಗಳೆಂಬುದೇ ನಿಜ. ಅಲ್ಲಿನ ಸ್ವಾರಸ್ಯವೆಂದರೆ ಪೃಚ್ಛಕರು ಕೇಳಿದ ವಸ್ತುವನ್ನಾಧರಿಸಿ ಅವಧಾನಿಗಳು ಆಶುವಾಗಿ ಪದ್ಯ ರಚನೆ ಮಾಡುತ್ತಾರೆಂಬುದು. ಬಹಳಷ್ಟು ಜನರಿಗೆ ಅವಧಾನದ ಸ್ವರೂಪ ಹಾಗೂ ವೈಶಿಷ್ಟ್ಯಗಳು ಗೊತ್ತಿರುವ ವಿಷಯವೇ ಆದ ಕಾರಣ ಅದನ್ನು ಹೆಚ್ಚು ವಿಸ್ತರಿಸಲು ಹೋಗುವುದಿಲ್ಲ. ಅಲ್ಲದೇ ಅದಾಗಲೇ ಅವಧಾನದ ಬಗ್ಗೆ ಹಿಂದೊಮ್ಮೆ ಲೇಖನವನ್ನೂ ಬರೆದಿದ್ದೆ. ಹಿಂದೆ ನಡೆದ ಅವಧಾನದ ಪದ್ಯಗಳಲ್ಲಿ ಕೆಲವನ್ನು ಇದೇ ಕಥಾಕಾಲದಲ್ಲಿ ಪ್ರಸ್ತುತಪಡಿಸಿದ್ದೆ ಕೂಡ. (ಶತಾವಧಾನಿ ಆರ್ ಗಣೇಶ ಅವರ 968ನೇ ಅಷ್ಟಾವಧಾನ)
ಇಂದು ಕೂಡ ಶತಾವಧಾನಿ ಡಾ||ಗಣೇಶ್ ಅವರ ಮೊತ್ತಮೊದಲ ತುಂಬುಗನ್ನಡದ ಶತಾವಧಾನದ ಒಂದು ಪದ್ಯವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಅದರ ಸ್ವಾರಸ್ಯವನ್ನು ಹೇಳುವ ಮೊದಲು, ಮೊತ್ತಮೊದಲ ತುಂಬುಗನ್ನಡದ ಶತಾವಧಾನದ ಸ್ವಾರಸ್ಯವನ್ನು ಹೇಳುವುದು ಯುಕ್ತವೆನ್ನಿಸುತ್ತದೆ. ಸಂಪೂರ್ಣವಾಗಿ ಕನ್ನಡದಲ್ಲೇ ಶತಾವಧಾನ ನಡೆದ ದಾಖಲೆ ಹಿಂದಾಗಿರಲಿಲ್ಲ. ಹಾಗಾಗಿ ಪದ್ಯಪಾನ ಸಂಸ್ಥೆಯವರು ಆಯೋಜಿಸಿದ್ದ ಮೊತ್ತಮೊದಲ ತುಂಬುಗನ್ನಡದ ಶತಾವಧಾನ ಕಳೆದ ೨೦೧೨ನೇ ಇಸವಿಯ ನವೆಂಬರ್ ೩೦ರ ಅಪರಾಹ್ಣದಿಂದ ಪ್ರಾರಂಭವಾಗಿ ಡಿಸೆಂಬರ್ ೨ರ ರಾತ್ರಿಯವರೆಗೆ ಮೂರುದಿನಗಳ ಕಾಲ ಬೆಂಗಳೂರಿನ ಜಯನಗರದ ಎನ್.ಎಂ.ಕೆ.ಆರ್.ವಿ ಕಾಲೇಜಿನ ಮಂಗಳಮಂಟಪದಲ್ಲಿ ನಡೆದದ್ದು ಸಹೃದಯರೆಲ್ಲರಿಗೂ ಅವಧಾನರಸಿಕರೆಲ್ಲರಿಗೂ ತಿಳಿದ ವಿಷಯವೇ ಆಗಿದೆ. ಈ ಅವಧಾನದಲ್ಲಿ ಪೃಚ್ಛಕನಾಗಿ ಪಾಲ್ಗೊಳ್ಳುವ ಸುಯೋಗವೂ ನನ್ನ ಪಾಲಿಗೆ ಒದಗಿತ್ತು. ಅಲ್ಲದೇ  ಶತಾವಧಾನಿ ಗಣೇಶ್ ಅವರನ್ನು ನಾನು ಮುಖತಃ ನೋಡಿದ್ದೂ ಇಲ್ಲೇ ಮೊತ್ತಮೊದಲಬಾರಿಗೆ !! ಅಲ್ಲದೇ ಅವಧಾನವನ್ನು ನೇರವಾಗಿ ಪೂರ್ಣಸ್ವರೂಪದಲ್ಲಿ ಮೊದಲಬಾರಿಗೆ ನೋಡಿದ್ದೂ ಇದೇ ವೇದಿಕೆಯಲ್ಲಿ ಅದೂ ಪೃಚ್ಛಕನಾಗಿ !!
"ಶತಾವಧಾನ ಶಾಶ್ವತೀ"  ಮುಖಪುಟ 
































ಇನ್ನು ಅವಧಾನದ ಆದ್ಯಂತ ನಡೆದ ವಾಗ್ದೇವಿಯ ವಿಲಾಸದಲ್ಲಿ ಅದೆಷ್ಟು ರಸಮಯ ಪ್ರಸಂಗಗಳು ನಡೆದವೋ ಅವನ್ನೆಲ್ಲ ಇಲ್ಲಿ ಬರೆಯುವುದಂತೂ ಅಸಾಧ್ಯವೇ ಸರಿ!!! ಆದರೆ ಅವಧಾನ ಪದ್ಯಗಳಲ್ಲಿ ಕೆಲವನ್ನಾದರೂ ಆಗಾಗ ಹಂಚಿಕೊಳ್ಳುತ್ತೇನೆಂದು ಆಶ್ವಾಸನೆ ನೀಡಬಲ್ಲೆ.
ಈ ಅವಧಾನದ ಪದ್ಯಗಳೆಲ್ಲವೂ "ಶತಾವಧಾನಶಾಶ್ವತೀ" ಎಂಬ ಪುಸ್ತಕ ರೂಪದಲ್ಲಿ ಅದಾಗಲೇ ಪ್ರಕಟವಾಗಿವೆ. ಅಲ್ಲದೇ ಸಾಂದ್ರಮುದ್ರಿಕೆಗಳ(DVD) ರೂಪದಲ್ಲಿಯೂ ಲಭ್ಯವಿದೆ.(ಆಸಕ್ತರು ಪ್ರತಿಗಳಿಗೆ "ಪದ್ಯಪಾನ" ಇಲ್ಲಿ ಕ್ಲಿಕ್ಕಿಸಿ)

ಈ ಶತಾವಧಾನದ ಮೊದಲನೆಯ ನಾಂದಿ ಪದ್ಯ "ಖಚರಪ್ಲುತ" ಎಂಬ ವಿಭಿನ್ನವಾದ ವಿರಳಪ್ರಚುರವಾದ ಛಂದಸ್ಸಿನಲ್ಲಿದೆ. ಆ ಪದ್ಯವನ್ನೇ ಈ ಸಂಚಿಕೆಯ ಸಹೃದಯಕಾಲಕ್ಕೆ ಆರಿಸಿಕೊಂಡಿದ್ದು-

ರಕ್ತಚಂಚುಪದಂ ಚಿರನೀರಕ್ಷೀರವಿವೇಕವಿದಾಂವರಂ 
ಯುಕ್ತಸದ್ದ್ವಿಜಪಕ್ಷಮಲಾ ಕೀಲಾಲನಿವಾಸಮತಿದ್ರುತಂ
ಸಕ್ತಮಾನಸಮಾನಮೆನಲ್ ಮಜ್ಜಿಹ್ವೆ ನಿರಾಳಮರಾಳಮೆಂ-
ದುಕ್ತಿಶಕ್ತಿಶಿವೇ! ಇದನೇರುತ್ತೀ ಅವಧಾನಮನೋವುದೌ||


 ಶ್ಲೇಷದಲ್ಲಿ ಅವಧಾನಿಗಳು ತಮ್ಮ ನಾಲಗೆ ಹಾಗೂ ಹಂಸವನ್ನು ಸಮೀಕರಿಸುತ್ತಾರೆ. 
ಅನ್ವಯಾರ್ಥ: ರಕ್ತಚಂಚುಪದಂ= ರಕ್ತವರ್ಣದ ಚಂಚು ಹಾಗೂ ಪಾದವುಳ್ಳದ್ದು (ಹಂಸ)/ ಕೆಂಪಾದ ತುದಿಯನ್ನು ಹಾಗೂ ಕೆಂಪಾದ ಪದ/ಸ್ಥಾನವನ್ನು ಹೊಂದಿರುವುದು(ನಾಲಗೆ). ಚಿರನೀರಕ್ಷೀರವಿವೇಕವಿದಾಂ ವರಂ= ಯಾವತ್ತೂ ನೀರು ಹಾಗೂ ಹಾಲಿನ ವ್ಯತ್ಯಾಸವನ್ನು ಅರಿಯುವ ವಿವೇಕವುಳ್ಳವರಲ್ಲಿ ಉತ್ತಮವಾದದ್ದು.(ರಾಜಹಂಸ ಹಾಲು ಮತ್ತು ನೀರನ್ನು ಮಿಶ್ರಮಾಡಿ ಕೊಟ್ಟಾಗ ಹಾಲನ್ನು ಮಾತ್ರ ಸ್ವೀಕರಿಸಿ ನೀರನ್ನು ಬಿಡುತ್ತದೆ ಎಂದು ಕವಿಸಮಯ. ಹಾಗಾಗಿ 'ನೀರಕ್ಷೀರವಿವೇಕ'ಹೊಂದಿರುವುದಾಗಿದೆ.ನಾಲಿಗೆಗೂ ನೀರು ಹಾಗೂ ಹಾಲಿನ ವ್ಯತ್ಯಾಸ ತಿಳಿಯುವುದರಿಂದ ಅದೂ ನೀರಕ್ಷೀರವಿವೇಕ ಹೊಂದಿದೆ.)ಯುಕ್ತಸದ್ದ್ವಿಜಪಕ್ಷಮಲಾ= ಯುಕ್ತವಾದ ಸದ್ದ್ವಿಜಪಕ್ಷ ಅಂದರೆ ಒಳ್ಳೆಯ ಹಕ್ಕಿಗಳ ಜೊತೆಯಲ್ಲಿರುವುದು(ಹಂಸ), ಒಳ್ಳೆಯ ಹಲ್ಲು(ದ್ವಿಜ)ಗಳ ಪಕ್ಕದಲ್ಲಿರುವುದು(ನಾಲಗೆ), ಕೀಲಾಲನಿವಾಸಂ= ನೀರಿನಲ್ಲಿ ವಾಸಮಾಡುವುದು(ಹಂಸ), ಜೊಲ್ಲಿನಲ್ಲಿ ಇರುವುದು (ನಾಲಗೆ), ಅತಿದ್ರುತಂ=ವೇಗವಾಗಿ ಸಂಚರಿಸುವುದು, ಸಕ್ತಮಾನಸಮಾನ= ಮಾನಸ ಸರೋವರದಲ್ಲಿ ಸಕ್ತವಾಗಿರುವುದು(ಹಂಸ), ಮನಸ್ಸಿನ ಹಿಡಿತದಲ್ಲಿರುವುದು (ನಾಲಗೆ), ಮಜ್ಜಿಹ್ವೆ=ನನ್ನ ನಾಳಗೆ ನಿರಾಳಮರಾಳಮೆಂದು= ನಿರಾಳವಾದ ಹಂಸವೆಂದು ಉಕ್ತಿಶಕ್ತಿಶಿವೇ= ಸರಸ್ವತಿಯೇ, ಇದನೇರುತ್ತೀ=ಇದನ್ನು ಏರುತ್ತಾ ಈ ಅವಧಾನಮನೋವುದೌ= ಅವಧಾನವನ್ನು ನೀನು ಮೆಚ್ಚುವಂತಾಗಲಿ.

ಇಲ್ಲಿ ಅವಧಾನದ ಪ್ರಾರಂಭದಲ್ಲಿ ಸರಸ್ವತಿಯ ಸ್ತುತಿ ಮಾಡುತ್ತಾ "ಸರಸ್ವತಿಯೇ, ನೀನು ಹಂಸವನ್ನೇರಿ ಸಂಚರಿಸುವವಳು,  ರಕ್ತಚಂಚುಪದವಾದ, ನೀರಕ್ಷೀರವಿವೇಕವಿದಾಂ ವರಮಾದ, ಯುಕ್ತಸದ್ದ್ವಿಜಪಕ್ಷವಾದ, ಕೀಲಾಲನಿವಾಸನವಾದ, ಅತಿದ್ರುತವಾದ, ಸಕ್ತಮಾನಸಮಾನವಾದ ನನ್ನ ನಾಲಗೆಯನ್ನೇ ನೀನು ಹಂಸವೆಂದು ತಿಳಿದು ಇದನ್ನೇ ಏರು. ನನ್ನ ಜಿಹ್ವೆಯಲ್ಲಿ ನಲಿ" ಎಂಬ ಅರ್ಥವನ್ನು ಹೊಮ್ಮಿಸಿ ಉತ್ತಮ ರಸಮಯ ಪದ್ಯವನ್ನು ಆ ವೇದಿಕೆಯಲ್ಲಿ ಆಶುವಾಗಿ ಹೊಮ್ಮಿಸಿದ್ದಾರೆ ಶತಾವಧಾನಿಗಳು.ಇಲ್ಲಿ ಸಭಂಗ ಅಭಂಗಶ್ಲೇಶಗಳೆರಡೂ ಇವೆ. ಅಲ್ಲದೇ ಜಿಹ್ವೆಯನ್ನು ಹಂಸವೆಂದು ತಿಳಿದು ಸರಸ್ವತಿ ಏರಲಿ ಎಂಬಲ್ಲಿ ಭ್ರಮಾಲಂಕಾರದ ಛಾಯೆ ಕೂಡ ಬರುತ್ತದೆ. ಹಾಗೆಯೇ  ಛಂದಸ್ಸು "ಖಚರ ಪ್ಲುತ" ಅಂದರೆ "ಹಕ್ಕಿಯ ನೆಗೆತ". ಪದ್ಯದಲ್ಲಿ ಕೂಡ ಹಂಸದ ಕುರಿತಾಗಿರುವುದೂ ಅಲ್ಲದೇ ಸರಸ್ವತಿ ಅದನ್ನೇರುವ ಉಲ್ಲೇಖವಿರುವುದು ಇವೆಲ್ಲ ಛಂದಸ್ಸಿನ ಹೆಸರಿನ ಜೊತೆಗೆ ಬಹುವಿಧವಾಗಿ ಹೊಂದಿರುವುದೂ ಒಂದು ವಿಶೇಷ. ಅಷ್ಟೇ ಸ್ವಾರಸ್ಯ!!

ಇಂತಹ ರಸಾಸ್ವಾದವನ್ನು ಮಾಡುವ ಅವಕಾಶ ಸಿಕ್ಕಿದ್ದು ನಮ್ಮ ಅದೃಷ್ಟವಲ್ಲದೇ ಇನ್ನೇನು.?

ಭಾನುವಾರ, ಏಪ್ರಿಲ್ 27, 2014

ಸಹೃದಯಕಾಲ-೯: ಸಮುದ್ರ ವರ್ಣನೆ

PC:Internet

ಕಾವ್ಯವೊಂದನ್ನು ಮಹಾಕಾವ್ಯ ಎನ್ನಬೇಕಾದರೆ ಅದರ ಲಕ್ಷಣಗಳು ಹೀಗೆ ಹೀಗೆಯೇ ಇರಬೇಕು ಎಂದು ಆಲಂಕಾರಿಕರು ನಿರ್ದೇಶಿಸಿದ್ದಾರೆ. ಅಂತಹ ಲಕ್ಷಣಗಳಲ್ಲಿ ನಗರಾರ್ಣವಾದಿ ಅಷ್ಟಾದಶ ವರ್ಣನೆಗಳಿರಬೇಕೆಂಬುದೂ ಒಂದು. ಕೆಲವು ಆಲಂಕಾರಿಕರ ಪ್ರಕಾರ ಹದಿನೆಂಟೂ ವರ್ಣನೆಗಳಿರಬೇಕೆಂದೇನೂ ಇಲ್ಲದಿದ್ದರೂ ಕಥಾಪ್ರಸಂಗಕ್ಕೆ ಪೂರಕವಾಗಿ ಈ ವರ್ಣನೆಗಳಿರಬೇಕೆಂಬುದು ಒಪ್ಪಬಹುದಾದ ನಿಯಮ. ಹಲಕೆಲವು ಕಾವ್ಯಗಳಲ್ಲಿ ರಸಕ್ಕೆ ತೀರವಿರುದ್ಧವಾಗಿ ವರ್ಣನೆಗಳು ಬಂದಿರುವುವೂ ಇವೆ. ಆದರೆ ಕಾವ್ಯದಲ್ಲಿ ಮುಖ್ಯವಾಗಿರಬೇಕಾದದ್ದು ರಸ ಎಂಬುದು ಎಲ್ಲರಿಗೂ ತಿಳಿದಿರುವುದೇ ಆಗಿದೆ. ಇಂತಹ ರಸಕ್ಕೆ ವಿರುದ್ಧವಲ್ಲದ ವರ್ಣನೆಗಳಾದರೋ ಆಸ್ವಾದಿಸಿಯೇ ಅನುಭವಿಸಬೇಕಷ್ಟೆ! 

ಅಂತೆಯೇ ಷಡಕ್ಷರದೇವ ಕವಿಯ ಶಬರಶಂಕರವಿಳಾಸದಲ್ಲಿ ಆರಂಭದಲ್ಲಿಯೇ ಬರುವ ಸಮುದ್ರದ ವರ್ಣನೆಯ ಪದ್ಯಗಳ ಸ್ವಾರಸ್ಯವನ್ನು ಈ ಸಂಚಿಕೆಯಲ್ಲಿ ನೋಡೋಣ.

ಷಡಕ್ಷರಿ ಕ‍ವಿಯ ಶೈಲಿಯಲ್ಲಿ ಅವನ ವೈದುಷ್ಯವಷ್ಟೇ ಅಲ್ಲದೇ ಸಮಾಸಭೂಯಿಷ್ಠ ಪದಪ್ರಯೋಗಗಳೂ, ಒಳ್ಳೆಯ ಶಬ್ದಾರ್ಥಾಲಂಕಾರಭರಿತವಾದ ಪದ್ಯಗಳೂ ಹಾಗೇಯೇ ವಿಶೇಷವಾದ ಕಲ್ಪನೆಗಳೂ ನಮ್ಮನ್ನು ಸೆಳೆಯುತ್ತವೆ.
ಈ  ಪದ್ಯದ ಚಮತ್ಕಾರ ನೋಡಿ-
ಚಂಪಕಮಾಲೆ||
ಅವಿಕಳಶಕ್ತಿಯುಕ್ತರಕಳಂಕಚರಿತ್ರರನಂತಸದ್ಗುಣಾ-
ರ್ಣವರಭವಸ್ವರೂಪರಖಿಳಾಗಮವೇದಿಗಳರ್ದಿತಾನ್ಯವಾ-
ದಿವರರಮಂದಕೀರ್ತಿಯುತರರ್ಥಿಸುರೋರ್ವಿಜರಪ್ರತರ್ಕ್ಯಗೌ-
ರವರಭಿವಂದ್ಯರಕ್ಕೆಮಗಶೇಷಪುರಾತನರೀಶ್ವರಾರ್ಚಕರ್ ||  (೧-೫)
ತನ್ನ ಶೈವಂಪ್ರದಾಯದ ೬೩ ಮಂದಿ ಪುರಾತನರೂ ನಮಗೆ ಅಭಿವಂದ್ಯರು ಎಂದು ಹೇಳುವ ಪದ್ಯದಲ್ಲಿ ಅವರ ಕುರಿತ (ಅವಿಕಳಶಕ್ತಿಯುತರು, ಅಕಲಂಕಚರಿತ್ರರು, ಅನಂತ ಸದ್ಗುಣಗಳ ಸಾಗರ ಶಿವಸ್ವರೂಪ ಇತ್ಯಾದಿ) ವಿಶೇಷಣಗಳಿಂದಲೇ ತುಂಬಿ ಹೆಚ್ಚೇನೂ ಸ್ವಾರಸ್ಯವಿಲ್ಲದಿದ್ದರೂ ಮೊದಲಿನಿಂದ ಕಡೆಯವರೆಗೆ ಸಂಧಿಗಳಲ್ಲಿ ಹಾಗೂ ಸಮಾಸಗಳಲ್ಲಿ ಆ ವಿಶೇಷಣಗಳನ್ನು ಜೋಡಿಸಿ ಇಡೀ ಪದ್ಯವನ್ನು ಒಂದೇ ಶಬ್ದವನ್ನಾಗಿ ಮಾರ್ಪಡಿಸಿದ ಕವಿಯ ಪ್ರತಿಭೆ ನಿಜಕ್ಕೂ ಶ್ಲಾಘ್ಯ.

ಹಾಗೆ ದೇವಸ್ತುತಿ ಪೂರ್ವಕವಿಸ್ತುತಿ ಕುಕವಿನಿಂದೆ ಸಹೃದಯಸ್ತುತಿ ಇತ್ಯಾದಿ ಹಲವು ಗತಾನುಗತಿಕಪದ್ಯಗಳ ಹಾವಳಿಯಲ್ಲಿಯೂ ಅಲಂಕಾರಮಯ ಪದ್ಯಗಳನ್ನು ತಂದಿರುವುದಲ್ಲದೇ ಮುಂದೆ ಕಥಾರಂಭಕ್ಕೆ ಪೀಠಿಕೆಯಾಗಿ ಸಮುದ್ರವರ್ಣನೆಯಿಂದ ಪ್ರಾರಂಭಿಸುತ್ತಾನೆ-

ಮಹಾಸ್ರಗ್ಧರಾ||
ಜ್ವಲದೌರ್ವಜ್ವಾಲೆ ಫಾಲಾಂಬಕಶಿಖಿಯಹಿಭೂಷಾಹಿ ಡಿಂಡೀರಮಾ ಪಾಂ
ಡುಲಸದ್ಭಸ್ಮಂ ಪ್ರವಾಳೋತ್ಕರಮರುಣಜಟಾಮಂಡಲಂ ವಿದ್ಯುದುದ್ಯ
ಜ್ಜಲದಂ ವ್ಯಾಘ್ರಾಜಿನಂ ರಾಜಿಸೆ ಭೃತಭುವನಂ ಭೂರಿಸತ್ತ್ವಾಶ್ರಯಂ ನಿ
ಸ್ತುಲಗಾಂಭೀರ್ಯಂ ಕರಂ ಕಣ್ಗೊಳಿಸಿದನಭವಾಕಾರಮುದ್ರಂ ಸಮುದ್ರಂ|| ೩೦|| 
(ಪ್ರಜ್ವಲಿಸುವ ಲಾವಾರಸವೇ ಹಣೆಯಲ್ಲಿರುವ ಉರಿಗಣ್ಣಿನ ಬೆಂಕಿ, ಅಲ್ಲಿರುವ ಹಾವುಗಳೇ ಆಭರಣಗಳಾದ ಸರ್ಪಗಳು, ಉಕ್ಕುವ ನೀರಿನ ಬಿಳಿಯ ನೊರೆಯೇ ಭಸ್ಮ, ಹವಳದ ಸಾಲುಗಳೇ ಅರುಣ ಜಟೆ, ಮಿಂಚಿನಿಂದ ಕೂಡಿದ ಮೋಡಗಳೇ ಉಟ್ಟ ಹುಲಿಯ ಚರ್ಮವಾಗಿ ಇರುವಾಗ ಹೋಲಿಸಲಾರದ ಗಾಂಭೀರ್ಯವುಳ್ಳ ಜಲರಾಶಿಯಿಂದ ಕೂಡಿದ ಸಮುದ್ರನು ಅಭವನಾದ ಶಿವನಂತೆಯೇ ಕಣ್ಗೊಳಿಸಿದನು
ಇಲ್ಲಿ ಸಾವಯವವಾಗಿ ಶಿವನ ರೂಪಿನೊಂದಿಗೆ ಸಮುದ್ರದ ರೂಪನ್ನು ಸಮೀಕರಿಸಿ ಸಮುದ್ರ ಶಿವನಂತೆ ಇತ್ತು ಎಂಬುದೇ ಸ್ವಾರಸ್ಯ.)

ಮತ್ತೇಭವಿಕ್ರೀಡಿತ||
ಕುಡಿದಂ ಕುಂಭಜನೆನ್ನನಾತ್ಮವಧುವೊಳ್ ಕೂಡಿರ್ದನೆಂದಿಂದಿರಂ
ಕಡೆದಂ ತನ್ನಹಿತಾದ್ರಿಗಾಂ ಶರಣಮೆಂದಾ ರಾಘವಂ ಕಟ್ಟಿ ಮೇಣ್
ತಡೆದಂ ಕಾದೊಳಕೆಯ್ದನೆಂದು ಪಗೆಯಂ ಹಾಲಾಹಲಂಗೊಟ್ಟೊಡಂ
ಮೃಡನೊರ್ವಂ ಮುಳಿಯಂ ಗಡೆಂದುಲಿವವೋಲುದ್ಘೋಷಿಕುಂ ಸಾಗರಂ||೩೧||
((ಗೋದಾವರಿ ನದಿಯನ್ನು ಪತ್ನಿಯಾಗಿ ಹೊಂದಿದ್ದ) ಅಗಸ್ತ್ಯರು ಅವರ ಪತ್ನಿಯಲ್ಲಿ ಕೂಡಿದೆ ಎಂದು ನನ್ನನ್ನು ಕುಡಿದುಬಿಟ್ಟರು. ಇಂದ್ರ, ಅವನ ಶತ್ರುವಾದ ಪರ್ವತ(ಮೈನಾಕ)ಕ್ಕೆ ನಾನು ಆಶ್ರಯವನ್ನು ಕೊಟ್ಟೆ ಎಂದು ನನ್ನನ್ನು ಕಡೆದ. ರಾಮ, ತನ್ನ ಶತ್ರುವನ್ನು ಕಾಪಾಡಿದೆ ಎಂದು ಸೇತುವೆ ಕಟ್ಟಿ ತಡೆದ, ಆದರೆ ಹಾಲಾಹಲವನ್ನು ಕೊಟ್ಟರೂ ಮೃಡನು(ಶಿವ) ಮಾತ್ರ ಸಿಟ್ಟಾಗಲಿಲ್ಲ ಎಂದು ಈ ಸಾಗರ ಘೋಷಿಸುತ್ತಿದೆ.)

ಮಹಾಸ್ರಗ್ಧರೆ||
ಮಗನೊರ್ವಂ ಪುಟ್ಟಿ ದೋಷಾಕರನೆನಿಸಿದನೆನ್ನೊಳ್ಮಗಳ್ ಪಾಱುಗೆಯ್ತಂ
ಮಿಗೆ ನಿಚ್ಚಂ ಪಂಕಜಾತಾಶ್ರಿತೆಯೆನಿಸಿ ಕುಭೃದ್ವರ್ಗದೊಳ್ ಕ್ರೀಡಿಪಳ್ ನಾ
ಕಿಗಣಂ ಸರ್ವಸ್ವಮಂ ಮೇಣ್ ಕಮರ್ದುದಕಟ ಭಂಗಕ್ಕೆ ಪಕ್ಕಾದೆನೆಂದಾ
ತ್ಮಗತೌರ್ವಾಗ್ನಿಚ್ಛಲಂಬೆತ್ತೞಲುರಿಯೊಳಕೊಂಡಂತೆ ತೋರ್ಕುಂ ಸಮುದ್ರಂ||೩೨||
("ಒಬ್ಬ ಮಗ ಹುಟ್ಟಿದ(ಚಂದ್ರ), ಅವನೂ ದೋಷಾಕರ ಎನಿಸಿಕೊಂಡ. ನನ್ನ ಮಗಳು (ಲಕ್ಷ್ಮಿ) ಪಂಕಜಾತಾಶ್ರಿತೆ (ಕಮಲದಲ್ಲಿರುವವಳು)ಯಾಗಿ  ಯಾವಾಗಳೂ ಪಾಱುಗೆಯ್ತ (ಹಾದರ) ಹೆಚ್ಚಿ ರಾಜರ ಜೊತೆಯಲ್ಲಿ ಕ್ರೀಡಿಸುತ್ತಿದ್ದಾಳೆ. ಸ್ವರ್ಗದ ದೇವತೆಗಳು ನನ್ನ ಎಲ್ಲ ಸಂಪತ್ತನ್ನೂ (ಸಮುದ್ರಮಥನದಲ್ಲಿ) ದೋಚಿಕೊಂಡು ಹೋದರು. ಅಯ್ಯೋ ನಾನು ಭಂಗಕ್ಕೆ ಪಕ್ಕಾದೆ" ಎಂದು ತನ್ನಲ್ಲಿರುವ ಔರ್ವಾಗ್ನಿ ಜ್ವಾಲೆಯನ್ನು ಹೊರಹಾಕುತ್ತಾ ಅಳಲೆಂಬ ಉರಿಯನ್ನು ಒಳಕೊಂಡಿರುವಂತೆ ಸಮುದ್ರವು ಕಾಣುತ್ತಿತ್ತು )

ಚಂಪಕಮಾಲೆ||
ಪ್ರತಿಗಜಮೆಂದು ಕಾರ್ಮುಗಿಲನೀಡಿಱಿವಾನೆಗಳಿಂ ಪಯೋದಗ
ರ್ಜಿತಕಗಿದೋಡುವಂಚೆಗಳ ಬಾಯ್ಗಳಿನೊಕ್ಕುವಮೃತಂಗಳಂ ತುಡಂ
ಕುತೆ ಮಿಗೆ ನುಂಗುವಂಬುಚರದಿಂ ಬಡಬಾನಲನೆಂದು ವಿದ್ರುಮ
ಪ್ರತತಿಯನಿರ್ಕೆಲಕ್ಕೊಲೆವ ನಕ್ರದಿನದ್ಭುತಮಾಯ್ತು ಸಾಗರಂ||೩೩||
(ತನ್ನ ಶತ್ರು ಆನೆಯೆಂದು ಮೋಡಗಳನ್ನು ಇರಿಯುತ್ತಿರುವ ಆನೆಗಳಿಂದ ಮೋಡಗಳ ಘರ್ಜನೆಗೆ ಹೆದರಿ ಓಡುವ ಹಂಸಗಳ ಬಾಯಿಗಳಿಂದ ಉಕ್ಕಿ ಬರುವ ಅಮೃತವನ್ನು ತುಡುಕುತ್ತ ನುಂಗುವ ಮೀನುಗಳಿಂದ,ಜ್ವಾಲಾಮುಖಿಯೆಂದು ಹವಳದ ಸಾಲನ್ನು ಇರ್ಕೆಲಕ್ಕೆ ಒಲೆವ ಮೊಸಳೆಗಳಿಂದ ಸಾಗರವು ಅದ್ಭುತವಾಯ್ತು
ಇಲ್ಲಿ ಪ್ರತಿಯೊಂದೂ ಪ್ರಣಿ ಪಕ್ಷಿಗಳು ಭ್ರಾಂತಿಗೊಳಗಾಗುವ ವರ್ಣನೆಯಿದೆ. (ಬಹುಶಃ) ಇದು ಭ್ರಮಾಲಂಕಾರ (?) )

ಚಂಪಕಮಾಲೆ||
ಪರಿವ ಪಡಂಗು ಬಲ್ದೆರೆಯ ಸಾಲ ಬೆಡಂಗು ನವಿನವಿದ್ರುಮೋ
ತ್ಕರದ ಪೊದೞ್ಕೆ ಶುಕ್ತಿಜದಳುರ್ಕೆ ಸರೋಜದ ಗುಣ್ಪು ತೀರ ಭಾ
ಸುರತರ ತಾಳನಂದನದಲಂಪು ಪುೞಿಲ್ಗಳಡರ್ಪು ಚೆಲ್ವ ಬಿ
ತ್ತರಿಸೆ ಪೊಡರ್ಪುವೆತ್ತು ಬಗೆಗೊಂಡುದು ಪೂರ್ಣಗುಣಂ ಮಹಾರ್ಣವಂ||೩೪||
(ಹರಿಯುತ್ತಿರುವ ಹಡಗು ದೊಡ್ಡ ತೆರೆಗಳ ಬೆಡಗು ಹೊಸ ಹವಳಗಳ ಸಾಲಿನ ಕಾಂತಿ ಮುತ್ತುಗಳ ರಾಶಿ ಕಮಲಗಳ ಗುಂಪು ತೀರದಲ್ಲಿರುವ ತಾಳೆಯ ಮರಗಳ ತೋಟದ ಅಲಂಪು ಮರಳ ರಾಶಿಯ ಚೆಲುವು ಇವೆಲ್ಲವೂ ಕೂಡಿ  ಪೂರ್ಣಗುಣವಾದ ಮಹಾರ್ಣವ ಶೋಭಿಸುತ್ತಿತ್ತು.
(ಬಹುಶಃ) ಇದು ಉಲ್ಲೇಖಾಲಂಕಾರ (?))

ಇಲ್ಲಿನ ರಸಮಯ ಪದ್ಯಗಳಿಗೆ ನನ್ನ ಅನುವಾದವಾಗಲೀ ಅಥವಾ ವ್ಯಾಖ್ಯಾನವಾಗಲೀ ಅಷ್ಟೇನೂ ಸ್ವಾರಸ್ಯವಿಲ್ಲದಿದ್ದರು ಮೂಲ ಪದ್ಯಗಳ ಸ್ವಾರಸ್ಯ ಅದಕ್ಕೆ ಇದ್ದೇ ಇದೆ. ಆದರೂ  ಬೇಸಿಗೆಯ ದಿನಗಳ ಈ ಸೆಖೆಯಲ್ಲಿ ಸಮುದ್ರದ ವರ್ಣನೆಯಾದರೂ ನಮ್ಮ ಮನಸ್ಸಿಗೆ ಅಷ್ಟು ತಂಪನ್ನು ತಂದರೆ ಅದೊಂದು ರೀತಿಯ ಸಂತೋಷವಷ್ಟೇ !!

ಭಾನುವಾರ, ಏಪ್ರಿಲ್ 20, 2014

ಸಹೃದಯಕಾಲ-೮: ಗದಾಯುದ್ಧಾಂತ್ಯದಲ್ಲಿ ಅಶ್ವತ್ಥಾಮನ ಪುನರಾಗಮನ




ರನ್ನನ ಗದಾಯುದ್ಧದ ಒಂಬತ್ತನೇ ಆಶ್ವಾಸದಲ್ಲಿ ಬರುವ ರಸಮಯವಾದ ಸಂದರ್ಭವೊಂದನ್ನು ಈ ಸಂಚಿಕೆಗೆ ಆಯ್ದುಕೊಂಡಿದ್ದೇನೆ. ಯುದ್ಧದಲ್ಲಿ ದುರ್ಯೋಧನನ ತೊಡೆಮುರಿದು ಅವನ ತಲೆಯನ್ನು ಕಾಲಿನಿಂದ ತುಳಿದು ತನ್ನ ಪ್ರತಿಜ್ಞೆಯನ್ನು ಪೂರೈಸಿ ಭೀಮ ಕೃಷ್ಣ ಕೃಷ್ಣೆ ಹಾಗೂ ತನ್ನ ಸಹೋದರರೊಡನೆ ತನ್ನ ಶಿಬಿರಕ್ಕೆ ಹಿಂದಿರುಗಿದ್ದಾನೆ. ಇತ್ತ ಕುರುಕ್ಷೇತ್ರದಲ್ಲಿ ಅಶ್ವತ್ಥಾಮ, ಕೃಪ ಕೃತವರ್ಮರೊಡನೆ ದುರ್ಯೋಧನ ಇರುವ ಜಾಗವನ್ನು ಭೀಷ್ಮನಿಂದ ತಿಳಿದುಕೊಂಡು ಬರುತ್ತಿರುವಾಗ ಒಬ್ಬಳು ಸುಂದರವಾದ ಸ್ತ್ರೀ ಕಾಣುತ್ತಾಳೆ. ಆಕೆ ಯ ರೂಪು ಹೇಗಿತ್ತೆಂದರೆ
ಪೃಥ್ವಿ||
ಕನತ್ಕನಕ ಚಾಮರಂ ಧವಳಚಾಮರಂ ಕಯ್ಗಳೊಳ್
ಮನಂ ಚಲಿಸೆ ಮಾಸಿ ತಾಱಿದ ಕುರುಳ್ಗಳುಂ ತನ್ನ ಬಿ
ನ್ನನಿರ್ದ ಮೊಗದಿಂ ತವಿಲ್ದಿರೆ ವಿಲಾಸಮುಂ ಮುಂದೆ ಕಂ
ಡನಲ್ಲಿ ಕಮಳಾಕ್ಷಿಯಂ ವೃಷಭಲಕ್ಷಣಂ ಲಕ್ಷ್ಮಿಯಂ||

(ಹೊಳೆಯುತ್ತಿರುವ ಚಿನ್ನದ ಚಾಮರ ಹಾಗೂ ಬಿಳಿಯ ಚಾಮರವನ್ನು ಕಯ್ಯಲ್ಲಿ ಹಿಡಿದು, ಚಂಚಲ ಚಿತ್ತಳಾಗಿ, ಕೆದರಿದ ಮುಂಗುರುಳುಗಳನ್ನುಳ್ಳವಳಾಗಿ, ಖೇದದಿಂದ ವಿಲಾಸವನ್ನೆಲ್ಲ ಕಳೆದುಕೊಂಡ ಕಮಲಾಕ್ಷಿಯಾದ ಲಕ್ಷ್ಮಿಯನ್ನು ವೃಷಭಲಕ್ಷಣನಾದ ಅಶ್ವತ್ಥಾಮ ಕಂಡ)

ವಚನ|| ಅಂತು ಕುಂಭಸಂಭವಸಂಭವಂ ಕಮಲನಾಭನ ಹೃದಯಭವನಾಮೃತಾಬ್ಢಿಸಂಭವೆಯಂ ಕಂಡು -ನೀನಾರ್ಗೆ ಎತ್ತಣಿಂ ಬಂದೆ ಎಲ್ಲಿಗೆ ಪೋದಪೆ ಎಂದು ಬೆಸಗೊಳೆ

(ಹಾಗೆ ಕುಂಭಸಂಭವನಾದ ದ್ರೋಣನ ಮಗ ಅಶ್ವತ್ಥಾಮನು ಕಮಲನಾಭನ ಹೃದಯವನ್ನೇ ಭವನವನ್ನಾಗಿ ಮಾಡಿಕೊಂಡ ಅಮೃತಸಾಗರಸಂಭವೆ ಲಕ್ಶ್ಮಿಯನ್ನು ಕಂಡು - 'ನೀನು ಯಾರವಳು? ಎಲ್ಲಿಂದ ಬಂದೆ? ಎಲ್ಲಿಗೆ ಹೊರಟೆ? ಎಂದು ಕೇಳಿದಾಗ )

ಚಂಪಕಮಾಲೆ|| 
ಅಮೃತಪಯೋಧಿಮಂಥನದೆ ಪುಟ್ಟಿದೆನಬ್ಜವನಾಂತರಾಳದೊಳ್
ರಮಿಯಿಸಿ ಪದ್ಮನಾಭನುರದೊಳ್ ನೆಲಸಿರ್ಪ ಮಹಾನುಭಾವೆಯಾಂ
ಕಮಲೆಯನಿನ್ನೆಗಂ ಕುರುಮಹೀಪತಿಯೊಳ್ ನೆಲೆಸಿರ್ದೆನೀಗಳು
ತ್ತಮಪುರುಷೋತ್ತಮಂ ಬೆಸಸೆ ಪಾಂಡವರೊಳ್ ನೆಲೆಸಲ್ಕೆ ಪೋದಪೆಂ||೪||

(ಅಮೃತಸಾಗರವನ್ನು ಮಂಥನಮಾಡಿದಾಗ ಹುಟ್ಟಿದೆ, ಕಮಲವನದಲ್ಲಿ ರಮಿಯಿಸಿದೆ, ಪದ್ಮನಾಭನ ಎದೆಯಲ್ಲಿ ನೆಲೆಸಿದ್ದ ಮಹಾನುಭಾವೆಯಾದ ಕಮಲೆ(ಲಕ್ಷ್ಮಿ) ಇಲ್ಲಿಯವರೆಗೆ ಕುರುಮಹೀಪತಿ ದುರ್ಯೋಧನನಲ್ಲಿ ನೆಲೆಸಿದ್ದೆ. ಈಗ ಪುರುಷೋತ್ತಮನಾದ ವಿಷ್ಣುವಿನ ಆಜ್ಞೆಯಂತೆ ಪಾಂಡವರಲ್ಲಿ ನೆಲೆಸಲೆಂದು ಹೋಗುತ್ತಿದ್ದೇನೆ.)

ವ|| ಎಂಬುದುಂ ದ್ರೋಣನಂದನಂ ನಾರಾಯಣಂ ಬೆಸಸೆ ಪೋದಪೆನೆಂಬ ಮಾತನವಧಾರಿಸಿ ಮುಗುಳ್ನಗೆನಕ್ಕು-

(ಎಂದು ಹೇಳಿದಳು, ಆಗ ದ್ರೋಣನಂದನನು 'ನಾರಾಯಣ ಹೇಳಿದ್ದಕ್ಕೆ ಹೋಗುತ್ತಿದ್ದೇನೆ' ಎಂಬ ಮಾತನ್ನು ಅವಧಾರಿಸಿ ಮುಗುಳ್ನಗೆ ನಕ್ಕು)

ಚಂಪಕಮಾಲೆ||
ಚಳಮತಿಯಾದೆ ನೀಂ ಜಡಧಿಸಂಭವೆಯಪ್ಪುದಱಿಂ ಸರೋಜ ಸಂ
ಕುಳರಜದಿಂದೆ  ನೀಂ ಪೊರೆದು ರಾಜಸದೊಳ್ ನೆಲೆಸಿರ್ಪೆ ಗೋವುಗಾ
ದಳವೞಿದಿರ್ದ  ಕೃಷ್ಣನೊಡನಿರ್ದುದಱಿಂದಮೆ ಗೋವಿಯಾದೆಯ
ಗ್ಗಳದ ವಿವೇಕಮಿಲ್ಲ ನಿನಗೆತ್ತಱಿವಾ ಪುರುಷಾಂತರಂಗಳಾ ||೫||

(ಸಮುದ್ರದಲ್ಲಿ ಹುಟ್ಟಿದ ಕಾರಣ ನೀನು ಚಂಚಲೆಯಾದೆ, ಕಮಲದ ಹೂವಿನ ರಜ(ಪರಾಗ)ದಿಂದ ನೀನು ರಾಜಸದಲ್ಲಿ ನೆಲೆಸಿರುವೆ. ದನಗಾಹಿಯಾದ ಕೃಷ್ಣನ ಜೊತೆಯಲ್ಲಿದ್ದು ನೀನು ಗೊಲ್ಲೆಯಾದೆ. ನಿನಗೆ ಅಗ್ಗಳದ ವಿವೇಕವೂ ಇಲ್ಲ. ನಿನಗೆ ಹೇಗೆ ಪುರುಷರ ಅಂತರಗಳು ಗೊತ್ತಾಗಬೇಕು?)

PC: Internet
ವ|| ಅದಲ್ಲದೆಯುಮಮೃತಸಮುದ್ರ ಮಂಥನದೊಳ್ ಪುಟ್ಟುವಂದು ಐರಾವತದೊಡನೆ ಪುಟ್ಟಿದುದಱಿಂ ವಿಪರೀತವೃತ್ತಿಯುಂ ಚಂದ್ರನೊಡನೆ ಪುಟ್ಟಿದುದಱಿಂ ಕಳಂಕಸ್ವಭಾವಮುಂ ಕೌಸ್ತುಭದೊಡನೆ ಪುಟ್ಟಿದುದಱಿಂ ಕಠಿನತ್ವಮುಂ ವಾಗ್ದೇವಿಯೊಡನೆ ಪುಟ್ಟಿದುದಱಿಂ ವಾಚಾಳತೆಯುಂ ಅಮರವೈರಿಯೊಡನೆ ಪುಟ್ಟಿದುದಱಿಂ ಗ್ರಹಣಸಲ್ಲೇಖನಾಬುದ್ಧಿಯುಂ ವೈದ್ಯನೊಡನೆ ಪುಟ್ಟಿದುದಱಿಂ ವ್ರಣಶೂಲವೇದಿಯುಂ ನಾರದನೊಡನೆ ಪುಟ್ಟಿದುದಱಿಂ ಕಲಹಸ್ವಭಾವಮುಂ ಕಾಳಕೂಟದೊಡನೆ ಪುಟ್ಟಿದುದಱಿಂ ಕೊಲೆಯುಂ ಕಳ್ಳೊಡನೆ ಪುಟ್ಟಿದುದಱಿಂ ಸೊರ್ಕುಂ ಅಚ್ಚರಸಿಯರೊಡನೆ ಪುಟ್ಟಿದುದಱಿಂ ಪಾಱುಗೆಯ್ತಮುಂ ನಿನಗೆ ಸಹಜಮಾಗಿರ್ದುವು

(ಅದಲ್ಲದೆ ಅಮೃತಸಮುದ್ರವನ್ನು ಕಡೆಯುವಲ್ಲಿ ನೀನು ಹುಟ್ಟುವಾಗ ಐರಾವತದೊಡನೆ ಹುಟ್ಟಿದೆ ಹಾಗಾಗಿ ಅದಕ್ಕಿರುವ ವಿಪರೀತವೃತ್ತಿಯು ನಿನಗೂ ಬಂತು, ಚಂದ್ರನೊಡನೆ ಹುಟ್ಟಿದೆ ಹಾಗಾಗಿ ಅವನಿಗಿರುವ ಕಳಂಕ ಸ್ವಭಾವ ನಿನಗೂ ಬಂತು.ಕೌಸ್ತುಭವೆಂಬ ರತ್ನದೊಡನೆ ಹುಟ್ಟಿದೆ ಹಾಗಾಗಿ ಅದಕ್ಕಿರುವ ಕಠಿನತ್ವ ನಿನಗೂ ಬಂತು, ವಾಗ್ದೇವಿಯ ಜೊತೆ ಹುಟ್ಟಿದೆ, ಹಾಗಾಗಿ ಅವಳಿಗಿರುವ ವಾಚಾಳತೆ ನಿನಗೂ ಬಂತು, ಅಮರವೈರಿಯಾದ ರಾಕ್ಷಸರೊಡನೆ ಹುಟ್ಟಿದ ಕಾರಣ (ರಾಹು) ಗ್ರಹಣಸಲ್ಲೇಖನ ಬುದ್ಧಿ(ಹಿಡಿದಿಕೊಳ್ಳುವುದು ಹಾಗೂ ಬಿಟ್ಟಿಹೋಗುವುದು) ನಿನಗೂ ಬಂತು ವೈದ್ಯನೊಡನೆ(ಧನ್ವಂತರಿ) ಹುಟ್ಟಿದೆ ಹಾಗಾಗಿ ಅವನಿಗಿರುವ ವ್ರಣಶೂಲವೇದಿ(ಗಾಯಗಳ ನೋವನ್ನು ತಿಳಿಯದಿರುವುದು(?)ಗುಣ ನಿನಗೂ ಬಂತು. ನಾರದನೊಡನೆ ಹುಟ್ಟಿದೆ ಹಾಗಾಗಿ ನಿನಗೆ ಅವನಂತೆ ಕಲಹಸ್ವಭಾವವೂ ಬಂತು,ಕಾಳಕೂಟ ವಿಷದೊಡನೆ ಹುಟ್ಟಿದೆ ಹಾಗಾಗಿ ಅದರಂತೆ ನಿನಗೂ ಕೊಲೆ(ಕೊಲ್ಲುವ ಸ್ವಭಾವ)ಬಂತು, ವಾರುಣಿಯೆಂಬ ಮದ್ಯದೊಡನೆ ಹುಟ್ಟಿದೆ,ಹಾಗಾಗಿ ಕಳ್ಳಿನ ಸ್ವಭಾವದಂತೆ ಸೊಕ್ಕೂ ಬಂತು, ಅಪ್ಸರೆಯರೊಡನೆ ಹುಟ್ಟಿದ ಕಾರಣ ಅವರಂತೆ ವ್ಯಭಿಚಾರಿಯಾದೆ.)

ಎಂದೆಲ್ಲ ಬಯ್ದು ಅಶ್ವತ್ಥಾಮ ಆ ಲಕ್ಷ್ಮಿಯನ್ನು ಕುರುಕುಲದ ಘಟಚೇಟಿಯನ್ನು ಎಳೆದೊಯ್ಯುವ ಹಾಗೆ ಕೂದಲು ಹಿಡಿದು ಎಳೆದುಕೊಂಡು ಹೋಗಿ ದುರ್ಯೋಧನನ ಸೇವೆಗೆಂದು ನಿಯೋಜಿಸುತ್ತಾನೆ. ಆ ಬಳಿಕ ರಾತ್ರಿ ಹೊತ್ತಲ್ಲಿ ಪಾಂಡವರ ಶಿಬಿರಕ್ಕೆ ನುಗ್ಗಿ ಕಗ್ಗೊಲೆಗಯ್ಯುವುದು ಅವನ ಕ್ರೂರಮನೋಭಾವವನ್ನು ಬಿಂಬಿಸುತ್ತದೆ.
ಈ ಸಂದರ್ಭದಲ್ಲಿ ರನ್ನನು ಸಮುದ್ರದಲ್ಲಿ ಹುಟ್ಟಿದ ಎಲ್ಲಾ ವಸ್ತುಗಳ ಗುಣಗಳೊಡನೆ ಲಕ್ಷ್ಮಿಯ ಗುಣಗಳೊಡನೆ ಸಮೀಕರಿಸಿ ಬರೆಯುವುದು ಸೊಗಸಾಗಿದೆ. ಅಲ್ಲದೇ ಅವಳ ಆಗಮನವೂ ಅಶ್ವತ್ಥಾಮ ಅವಳನ್ನು ನೋಡಿ ಯಾರು ನೀನು ಎಂದೆಲ್ಲ ಕೇಳುವುದೂ ಚೆನ್ನಾಗಿ ಕೂಡಿಕೊಂಡು ಒಳ್ಳೆಯ ರಸವತ್ತಾದ ಕಾವ್ಯಭಾಗವಾಗಿದೆ.

ಬುಧವಾರ, ಏಪ್ರಿಲ್ 16, 2014

ಸಹೃದಯ ಕಾಲ-೭ :ಕರ್ಣ ಜನ್ಮ ಪ್ರಸಂಗ

ಪಂಪನ ವಿಕ್ರಮಾರ್ಜುನವಿಜಯವು ಕನ್ನಡದಲ್ಲಿ ಬಹಳಷ್ಟು ಕಾರಣಗಳಿಂದ ಒಂದು ವಿಶಿಷ್ಟಕೃತಿಯಾಗಿದೆ. ಅದರಲ್ಲಿ ಬರುವಂತಹ ಹಳಗನ್ನಡ ನುಡಿಗಟ್ಟುಗಳು ಅಚ್ಚಗನ್ನಡ ಶಬ್ದಗಳು ಇವೆಲ್ಲವೂ ಭಾಷಾಭ್ಯಾಸಿಗಳಿಗೆ ತುಂಬಾ ಉಪಯುಕ್ತವಾಗಿವೆ. 

PC: Internet 
ಪಂಪನ ಭಾರತಕಥೆಯಲ್ಲಿ ಹಲವು ಕಡೆಗಳಲ್ಲಿ ರಸಾಭಾಸಕ್ಕೆ ಕಾರಣವಾಗುವಂತಹ ಘಟ್ಟಗಳಿದ್ದರೂ, ಮೂಲ ಕಥೆಯಲ್ಲಿ ಬದಲಾವಣೆಗಳನ್ನು ಅದೇಷ್ಟೋ ಮಾಡಿಕೊಂಡು ತನ್ನ ಕೊರಳಿಗೆ ತಾನೇ ಉರುಳು ಹಾಕಿಕೊಂಡಂತೆ ಮಾಡಿಕೊಂಡಿದ್ದರೂ ಕೆಲವೊಂದು ವರ್ಣನೆಗಳನ್ನು ಅವಶ್ಯವಾಗಿ ನೋಡಲೇ ಬೇಕು. (ಬಲ್ಲವರು ಅದಕ್ಕೂ ಬೇರೆ ಮೂಲವನ್ನು ತೋರಿಸಿದರೆ ಪಂಪ ತುಂಬಾ ಬಡವನಾಗಿಬಿಡಬಹುದು :-) )

ರಸಮಯವಾದ ಒಂದು ಪದ್ಯ ಕರ್ಣನ ಜನನದ ನಂತರದ ಸಂದರ್ಭದಲ್ಲಿ ಬರುವಂತಹದು:  ದೂರ್ವಾಸ ಮಹರ್ಷಿಯ ಮಂತ್ರದ ಫಲವಾಗಿ ಸೂರ್ಯನಿಂದ ಒಂದು ಮಗುವನ್ನು ಪಡೆದ ಕುಂತಿ ಲೋಕಾಪವಾದಕ್ಕೆ ಅಳುಕಿ ಗಂಗೆಯಲ್ಲಿ ತನ್ನ ಮಗುವನ್ನು ಹಾಕಿ ಜಲದೇವತೆಗಳೇ ಕಾಪಾಡಬೇಕೆಂದು ಹೊರಡುತ್ತಾಳೆ. ಅಂತಹ ಸುಂದರ ಸುಕುಮಾರಶರೀರದ ಹಸುಗೂಸನ್ನು  ಗಂಗೆ ತನ್ನ ತೆರೆಗಳೆಂಬ ಕೈಗಳಿಂದ ಮುಳುಗಲೀಯದೆ ತರುತ್ತಿರುವಾಗ ಆ ಮಗುವನ್ನು ಸೂತನೊಬ್ಬನು ಕಾಣುತ್ತಾನೆ.

ಉತ್ಪಲಮಾಲೆ||
ಬಾಳದಿನೇಶ ಬಿಂಬದ ನೆೞಲ್ ಜಲದೊಳ್ ನೆಲೆಸಿತ್ತೊ ಮೇಣ್ ಫಣೀಂ
ದ್ರಾಳಯದಿಂದಮುರ್ಚಿದ ಫಣಾಮಣಿ ಮಂಗಳರಶ್ಮಿಯೋ ಕರಂ |
ಮೇಳಿಸಿದಪ್ಪುದೆನ್ನೆರ್ದೆಯನೆಂದು ಬೊದಿಲ್ಲನೆ ಪಾಯ್ದು ನೀರೊಳಾ
ಬಾಳನನಾದಮಾದರದೆ ಕಂಡೊಸೆದಂ ನಿಧಿಗಂಡನಂತೆವೊಲ್|| (೧-೯೬)

("ಎಳೆಯ ಸೂರ್ಯನ ಬಿಂಬದ ನೆರಳು ನೀರಿನಲ್ಲಿ ನೆಲೆಸಿರುವುದೋ ಅಥವಾ ನಾಗಗಳ ಪಾತಾಲ ಲೋಕದಿಂದ ಹೊರಬಂದ ಸರ್ಪದ ಹೆಡೆಯ ಮಣಿಯ ಮಂಗಳ ಕಿರಣಗಳೋ, ನನ್ನ ಎದೆಯನ್ನು ಸೆಳೆಯುತ್ತಿದೆ" ಎಂದು ಸೂತನು ಆದರದಿಂದ 'ಬೊದಿಲ್ಲನೆ' ನೀರಿಗೆ ಹಾರಿ ನಿಧಿಯನ್ನು ಕಂಡವರಂತೆ ಹಿಗ್ಗಿದನು)

ಇಲ್ಲಿ ಬಳಸಿರುವ ರೂಪಕೋಪಮೆಗಳಲ್ಲಿ ಪದ್ಯದ ಸ್ವಾರಸ್ಯವಿರುವುದು. 'ಬಾಲಸೂರ್ಯನ ಬಿಂಬದ ನೆರಳು' ಎಂಬುದು ಆ ಶಿಶುವಿನ ರೂಪವನ್ನು ಕಲ್ಪಿಸಿಕೊಡುತ್ತದೆ. ಸೂರ್ಯನ ಮಗನ ಕಾಂತಿ ಸೂರ್ಯನ ನೆರಳಂತಿತ್ತು. ಫಣೀಂದ್ರನ ಫಣಾಮಣಿಯ ಮಂಗಳ ರಶ್ಮಿ ಎಂಬುದೂ ಸಹ ಕರ್ಣನ ಸೊಬಗನ್ನು ವರ್ಣಿಸುವುದು. ಆ ಮಗುವನ್ನು ಕಂಡು ದೊಡ್ದ 'ನಿಧಿ ಸಿಕ್ಕವರಂತೆ' ಸೂತ ಹಿಗ್ಗಿ ನದಿಗೆ ಹಾರುವುದನ್ನೂ 'ಬೊದಿಲ್ಲನೆ' ಎಂದು ಶಬ್ದಸಹಿತವಾಗಿ ತಂದಿರುವುದೂ ಮತ್ತೊಂದು  ಸ್ವಾರಸ್ಯ..

ಶುಕ್ರವಾರ, ಏಪ್ರಿಲ್ 11, 2014

ಸಹೃದಯಕಾಲ-೬ ಮಾರಿಯ ಮನೆಯೊಳಗೆ

ಹಿಂದಿನ  (ಸಹೃದಯಕಾಲ-೩ ರನ್ನನ ಗದಾಯುದ್ಧದ ಕೆಲವು ಪದ್ಯಗಳು) ಲೇಖನದಲ್ಲಾಗಲೇ ಕವಿ ಜನ್ನನ ಹೆಸರೂ ಅವನು ಕವಿಚಕ್ರವರ್ತಿ ಹೆಸರು ಪಡೆದಿರುವುದೂ ಪ್ರಸ್ತಾಪಿಸಲ್ಪಟ್ಟಿದೆ. ಅವನ ಪದ್ಯಗಳಲ್ಲಿ ಕೆಲವನ್ನು ಈ ಸಂಚಿಕೆಯಲ್ಲಿ ನೋಡೋಣ.

 ಜನ್ನನ 'ಯಶೋಧರ ಚರಿತೆ' ಇದು ಸಂಸ್ಕೃತಮೂಲದ ಸೋಮದೇವ ಕವಿಯ 'ಯಶಸ್ತಿಲಕ ಚಂಪೂ'ಗ್ರಂಥದ ಕನ್ನಡರೂಪವೆಂದಾದರೂ ಜನ್ನನ ಕವಿತಾ ಶಕ್ತಿಯನ್ನೂ, ಲೋಕಾನುಭವವನ್ನೂ, ಅಲ್ಲದೇ ಕನ್ನಡ ನುಡಿಗಟ್ಟುಗಳನ್ನು ಅವನು ಬಳಸಿರುವ ರೀತಿಯನ್ನು ನೋಡಬೇಕು. ಒಂದು ಶಬ್ದಕ್ಕೆ ಹತ್ತುಹಲವು ಪರ್ಯಾಯಶಬ್ದಗಳನ್ನು ಬಳಸುವ ರೀತಿಯೂ ಅಲ್ಲದೇ ಅಲ್ಲಲ್ಲಿ ಲೋಕನೀತಿಯನ್ನು ಹೇಳುವುದೂ ಈ ಕಾವ್ಯದಲ್ಲಿ ಕಾಣುವ ಒಂದು ಸೊಗಸಾಗಿದೆ.

ಇದನ್ನು ನಾಲ್ಕು 'ಅವತಾರ'ಗಳೆಂಬ ಭಾಗಗಳನ್ನಾಗಿ ಮಾಡಿದ್ದಲ್ಲದೇ ಬಹುತೇಕ ಕಂದಪದ್ಯಗಳನ್ನೇ ಬಳಸಿದ್ದಾನೆ. ಸಂಸ್ಕೃತ ಮಹಾಕಾವ್ಯಗಳಲ್ಲಿ ಬರುವಂತೆಯೇ ಸರ್ಗಾರಂಭದಿಂದ ಕೊನೆಯವರೆಗೆ ಒಂದೇ ಛಂದಸ್ಸು ಬಳಸಿ ಸರ್ಗಾಂತ್ಯದಲ್ಲಿ ಬೇರೆ ಛಂದಸ್ಸನ್ನು ಬಳಸಿರುವುದೂ ವಿಶೇಷವಾಗಿದೆ. ಕನ್ನಡಕ್ಕೆ ವಿರಳವೆನ್ನಬಹುದಾದ 'ಮಂದಾಕ್ರಾಂತಾ' 'ಹರಿಣೀ' ಮೊದಲಾದ ವೃತ್ತವೈವಿಧ್ಯಗಳನ್ನೂ ಬಳಸಿದ್ದಾನೆ. ಅಷ್ಟೇ ಅಲ್ಲದೇ 'ಸರ್ಗಾಂತೇ ಮಾಲಿನೀ ಪ್ರೋಕ್ತಾ' ಎಂಬಂತೆ ಮಾಲಿನೀ ಛಂದಸ್ಸಿನಲ್ಲಿಯೂ 'ಅವತಾರ'ದ ಕೊನೆಯಲ್ಲಿ ಕಥೆಯ ಫಲಶ್ರುತಿಯನ್ನೂ ಹೇಳುತ್ತಾನೆ.

ಈ ಕೃತಿಯ ಕಥೆ ಯಶೋಧರ ಎಂಬ ರಾಜ ತನ್ನ ಪಾಪಕಾರ್ಯದಿಂದ ಜನ್ಮಜನ್ಮಾಂತರಗಳಲ್ಲಿ ಕಷ್ಟಕೋಟಲೆಗಳಿಗೆ ಒಳಗಾಗುವುದೂ ಕೊನೆಯಲ್ಲಿ ಜ್ಞಾನವನ್ನು ಹೊಂದಿ ಸದ್ಗತಿ ಹೊಂದುವುದೂ ಆಗಿದೆ.


ಸಂದರ್ಭ : (ಮೊದಲನೆಯ ಅವತಾರ)
ಆಗತಾನೇ ಬಂದ ವಸಂತ ಋತುವಿನಲ್ಲಿ ಅಯೋಧ್ಯೆಯ ಮಾರಿದತ್ತನೆಂಬ ರಾಜನೂ ನಗರದ ಜನರೂ ಚಂಡಮಾರಿ ದೇವತೆಯನ್ನು ತುಷ್ಟಿಪಡಿಸಲು ಜಾತ್ರೆಯನ್ನು ನೆರವೇರಿಸಲು ಮಾರಿಯ ದೇವಾಲಯದಲ್ಲಿ ಸೇರುತ್ತಾರೆ. ಹರಕೆಯನ್ನು ಒಪ್ಪಿಸುವುದು ಹಾಗೇ ಬಲಿಯನ್ನು ಕೊಡುವುದೂ ಜಾತ್ರೆಯ ಒಂದು ಅಂಗವಾಗಿತ್ತಷ್ಟೆ. ಮಾರಿದತ್ತನು ತನ್ನ ತಳವಾರ ಚಂಡಕರ್ಮನನ್ನು ಕರೆದು  'ನೀನು ಈಗಲೇ ಬಲಿಗೆಂದು ಮನುಷ್ಯಯುಗ್ಮವನ್ನು ಕರೆ ತಾ' ಎಂದು ಅಣತಿ ಕೊಡುತ್ತಾನೆ. ಆಗ ಅವನು 'ಅಭಯಮತಿ ಮತ್ತು ಅಭಯರುಚಿಯರನ್ನು ಹಿಡಿದುಕೊಂಡು ಬರುತ್ತಾನೆ. ಅವರು ಒಬ್ಬರನ್ನೊಬ್ಬರು ಸಂತೈಸುತ್ತಾ ಬಂದಾಗ ಕಾಣುವ ಈ ಮಾರಿಯ ದೇವಾಲಯದ ವರ್ಣನೆಯೇ ಪ್ರಸ್ತುತ ಸಂಚಿಕೆಗೆ ಆಯ್ದುಕೊಂಡ ಪದ್ಯಗಳು.

ಇಂತಿಂತೊರ್ವರನೊರ್ವರ್ 
ಸಂತೈಸುತ್ತಂ ನೃಪೇಂದ್ರತನುಜಾತರ್ ನಿ
ಶ್ಚಿಂತಂ ಪೊಕ್ಕರ್ ಪಸಿದ ಕೃ
ತಾಂತನ ಬಾಣಸುವೊಲಿರ್ದ ಮಾರಿಯ ಮನೆಯಂ||೫೩||

(ಹೀಗೆ ಒಬ್ಬರನ್ನೊಬ್ಬರು ಸಂತೈಸುತ್ತ ನೃಪೇಂದ್ರನ ಮಕ್ಕಳು(ಅಭಯಮತಿ ಮತ್ತು ಅಭಯರುಚಿ) ನಿಶ್ಚಿಂತರಾಗಿ ಹಸಿದುಕೊಂಡಿದ್ದ ಯಮನ ಅಡುಗೆಯಮನೆಯಂತಿದ್ದ ಮಾರಿಯ ಮನೆಯನ್ನು ಹೊಕ್ಕರು 
ಇಲ್ಲಿ ಯಮನ ಅಡುಗೆಯ ಮನೆ ಎಂಬ ಉಪಮಾನವನ್ನು ಕೊಟ್ಟಿರುವುದು ಮಾರಿಯ ಮನೆಯ ಭಯಂಕರ ರೂಪವನ್ನು ಪ್ರತಿನಿಧಿಸುತ್ತದೆ  )

ತಳಮನುಡಿದಿರುವ ಕಣ್ಣಂ
ಕಳೆದೇರಿಪ ಕರುಳ ತೋರಣಂಗಟ್ಟುವ ಕಾ
ಲ್ಗಳನುರಿಪಿ ನೆತ್ತರಾ ಕೂ
ೞ್ಗಳನಡುತಿಹ ವೀರರೆತ್ತ ನೋೞ್ಪೊಡಮದಱೊಳ್||೫೪||

(ಅಲ್ಲಿ ನೋಡಿದರೆ ವೀರರು ಹಲವರು (ಬಲಿಪಶುಗಳ) ಕೈಕಾಲುಗಳನ್ನು ಮುರಿದು  ಕಣ್ಣನ್ನು ಕಿತ್ತು  ದೇವಿಗೆ ಅರ್ಚನೆ ಮಾಡುತ್ತಿದ್ದರು. ಕೆಲವರು ಕರುಳ ತೋರಣವನ್ನು ಕಟ್ಟುತ್ತಿದ್ದರು. ಕೆಲವರು ರಕ್ತದಲ್ಲಿ ಅನ್ನವನ್ನು ಬೇಯಿಸುತ್ತಿದ್ದರು!!.)

ತಾಳುಗೆಯನುರ್ಚಿ ನೆತ್ತಿಯ 
ಗಾಳಂ ಗಗನದೊಳೆೞಲ್ವ ವಾರಿಯ ಬೀರರ್
ಪಾಳಿಯೊಳೆಸೆದರ್ ಪಾಪದ 
ಜೋಳದ ಬೆಳಸಿಂಗೆ ಬೆರ್ಚುಗಟ್ಟಿದ ತೆಱದಿಂ||೫೫||

(ಬಾಯಿಯನ್ನು ಬಗೆದು ನೆತ್ತಿಗೆ ಗಾಳವನ್ನು ಚುಚ್ಚಿ ಎತ್ತರದಲ್ಲಿ ತೂಗಾಡಿಸುತ್ತಿರುವ ವೀರರು ಮಾರಿಯ ದೇವಾಲಯದ ಪಾಳಿ/ಗೋಡೆಗಳ ಮೇಲೆ ಎತ್ತಿ ಕಟ್ಟಿದುದು 'ಪಾಪದ ಜೋಳದ ಬೆಳೆಯನ್ನು ಕಾಪಾಡಲು ಕಟ್ಟಿದ್ದ ಬೆರ್ಚಿನ ಹಾಗೆ ಕಾಣುತ್ತಿತ್ತು!!'
-ಇಲ್ಲಿ ಪಾಪವೆಂಬುದನ್ನೇ ಬೆಳೆಯೆಂದಿದ್ದಲ್ಲದೇ ಆ ತಲೆಗಳನ್ನು ಗಾಳ ಹಾಕಿ ಚುಚ್ಚಿ ನಿಲ್ಲಿಸುತ್ತಿದ್ದುದು ಆ ಪಾಪದ ಬೆಳೆಯ ಹೊಲದಲ್ಲಿ ನಿಲ್ಲಿಸಿದ್ದ 'ಬೆಚ್ಚು'/ಬೆರ್ಚು ಕಂಡಂತೆ ಕಾಣುತ್ತದೆಯೆಂದಿರುವುದೂ ವಿಶೇಷ. ಗದ್ದೆಗಳಲ್ಲಿ ಪಕ್ಷಿಗಳ ಹಾಗೂ ಹಲಕೆಲವು ಪ್ರಾಣಿಗಳ ಹಾವಳಿ ತಡೆಯಲು ಬೆರ್ಚನ್ನು ನಿಲ್ಲಿಸಿಡುವಂತೆ ಬಲಿಪಶುಗಳ ತಲೆಯನ್ನು ನೆಟ್ಟಿದ್ದರೆಂಬ ಚಿತ್ರಣ ಕೊಡುತ್ತಾನೆ )

ಆಡು ಕುಱಿ ಕೋೞಿ ಕೋಣನ
ಕೂಡಿದ ಪಿಂಡೊಳಱಿ ಪೆಳಱಿ ಮಾರ್ದನಿಯಿಂದಂ
ಕೂಡೆ ಬನಮೞ್ತುದುರ್ವರೆ
ಬೀಡೆಯಿನೆರ್ದೆಯೊಡೆದುದವಱ ಕೋಟಲೆಗಾಗಳ್ ||೫೬||

(ಆಡು ಕುರಿ ಕೋಳಿ ಕೋಣಗಳೆಲ್ಲ ಹೆದರಿ ಅರಚುತ್ತಿದ್ದವು. ಅವು ಕೂಗುತ್ತಿದ್ದುದು ಇಡೀ ವನವೇ ಆಳುತ್ತಿರುವಂತೆಯೂ ಅವರ ಕೋಟಲೆಯಿಂದ ಭೂಮಿಯೇ ಎದೆ ಒಡೆದುಕೊಂಡಂತಯೂ ಕಾಣುತ್ತಿತ್ತು!! )

ದೆಸೆದೆಸೆಗೆ ನರಶಿರಂ ತೆ
ತ್ತಿಸಿ ಮೆಱೆದುವು ಮದಿಲೊಳಬ್ಬೆ ಪೇರಡಗಿನ ಪೆ
ರ್ಬೆಸನದೆ ಪೊಱಗಣ ಜೀವ
ಪ್ರಸರಮುಮಂ ಪಲವು ಮುಖದಿನವಳೋಕಿಪವೊಲ್||೫೭||

(ಎಲ್ಲ ದಿಕ್ಕುಗಳಲ್ಲಿಯೂ ಬಲಿಯಾದ ಮನುಷ್ಯರ ತಲೆಗಳನ್ನು ಸಾಲಾಗಿ ಇಟ್ಟಿದ್ದರು. ಅದು ದೊಡ್ಡದಾದ ಮಾಂಸದ ಊಟ ಬೇಕೆಂಬ ಬಯಕೆಯಿಂದ ಮಾರಿಯೇ ಹಲವು ಮುಖಗಳಿಂದ ಹೊರಗಿನ ಜೀವಸಮುದಾಯವನ್ನೆಲ್ಲ ನೋಡುತ್ತಿದ್ದಾಳೇನೋ ಎಂಬಂತೆ ಭಾಸವಾಗುತ್ತಿತ್ತು ) 
ಯಶೋಧರಚರಿತೆಯಲ್ಲಿ ಕಥೆಯ ಸ್ವಾರಸ್ಯ ಅಷ್ಟೇನೂ ಇಲ್ಲದಿದ್ದರೂ ಕಾವ್ಯವ್ಯಾಸಂಗದ ದೃಷ್ಟಿಯಿಂದ, ಕವಿಯ  ಕಲ್ಪನೆಗಳನ್ನು ತಿಳಿದುಕೊಳ್ಳುವ ದೃಷ್ಟಿಯಿಂದ ಓದಬಹುದಾದ ಒಳ್ಳೆಯ ಕಾವ್ಯವಾಗಿದೆ. 

ಭಾನುವಾರ, ಏಪ್ರಿಲ್ 6, 2014

ಸಹೃದಯಕಾಲ-೫-ನಿಷಧಂ ಜನಜೀವನೌಷಧಂ

ತಮ್ಮ ೧೮ನೇ ವಯಸ್ಸಿನಲ್ಲೇ ಕವಿತ್ವಶಕ್ತಿಯನ್ನು ಪ್ರದರ್ಶಿಸಿ ಮೈಸೂರು ಮುಮ್ಮಡಿಕೃಷ್ಣರಾಜ ಒಡೆಯರ್ ಅವರ ಆಸ್ಥಾನದಲ್ಲಿ ಕವಿಯಾಗಿದ್ದರು ಬಸವಪ್ಪಶಾಸ್ತ್ರಿಗಳು. ತಮ್ಮ ಅತ್ಯಲ್ಪಜೀವಿತಕಾಲದಲ್ಲಿಯೇ(೧೮೪೩-೧೮೯೧) ಅನೇಕ ಸಂಸ್ಕೃತಕೃತಿಗಳನ್ನೂ ಆಂಗ್ಲನಾಟಕಗಳನ್ನೂ ಕನ್ನಡಕ್ಕೆ ಭಾಷಾಂತರಿಸಿದ್ದಷ್ಟೇ ಅಲ್ಲದೇ ಸ್ವತಂತ್ರವಾಗಿ  ಕನ್ನಡದಲ್ಲಿಯೂ ಸಂಸ್ಕೃತದಲ್ಲಿಯೂ ಅನೇಕ ಕೃತಿಗಳನ್ನು ರಚಿಸಿದರು. ಅಂತಹ ಒಂದು ಸ್ವತಂತ್ರ ಕೃತಿ 'ದಮಯಂತೀಸ್ವಯಂವರ'. ಇದೊಂದು ಚಂಪೂಶೈಲಿಯ ಕೃತಿಯಾಗಿದ್ದಾದರೂ ಪದ್ಯಬಾಹುಳ್ಯವೇ ಕಾಣುತ್ತದೆ. ಅಲ್ಲದೇ ಬಗೆಬಗೆಯ ಛಂದಸ್ಸುಗಳ ಪ್ರಯೋಗವೂ ಅತ್ಯಂತ ಹೃದ್ಯವಾಗುವ ವರ್ಣನೆಗಳೂ ಸೊಗಸಾಗಿ ಮೇಳೈಸಿವೆ.

PC:Internet
ನಿಷಧರಾಜ ನಲನನ್ನು ದಮಯಂತಿ ಸ್ವಯಂವರದಲ್ಲಿ ವರಿಸುವಲ್ಲಿಯವರೆಗಿನ ಕಥಾನಕವಷ್ಟೇ ಇದರ ಕಥಾನಕವಾದರೂ ಅಲ್ಲಲ್ಲಿ ಬಳಸುವ ಶ್ಲೇಷಾದಿ ಚಮತ್ಕಾರಗಳೂ ಉಪಮಾರೂಪಕಾದಿ ಅಲಂಕಾರಗಳೂ ಸೊಗಸಾಗಿ ಕಥೆಯನ್ನು ಕಟ್ಟಿಟ್ಟಿವೆ.
ಅಭಿನವಕಾಳಿದಾಸ ಎಂಬ ಬಿರುದಿಗೆ ಪಾತ್ರರಾದ ಇವರ ದಮಯಂತೀಸ್ವಯಂವರದಲ್ಲಿ ನಿಷಧದೇಶವರ್ಣನೆಯ ಸಂದರ್ಭದಲ್ಲಿ ಬರುವ ಮೊದಲ ಆಶ್ವಾಸದ ಎರಡನೇ ಪದ್ಯವನ್ನು ಈ ಸಂಚಿಕೆಗೆ ಆರಿಸಿಕೊಂಡಿದ್ದೇನೆ.

ಚಂಪಕಮಾಲೆ||
ನವಫಲಶಾಲಿ ಶಾಲಿವನದಿಂ ಜನನಂದನ ನಂದನಂಗಳಿಂ 
ಕುವಲಯಸಾರ ಸಾರಸ ವಿರಾಜಿ ವಿರಾಜಿ ನದೀನದಂಗಳಿಂ
ಸುವಿಮಲ ರೂಪಶೀಲರಮಣೀ ರಮಣೀಯ ನರರ್ಕಳಿಂ ಸವೈ
ಭವಭವನಂಗಳಿಂ ಮೆರೆಗುಮಾ ನಿಷಧಂ ಜನಜೀವನೌಷಧಂ||
(ಪ್ರಥಮಾಶ್ವಾಸ-೨)
(ಹೊಸ ಫಲವನ್ನು ಹೊತ್ತುನಿಂತ ಶಾಲಿ(ಭತ್ತ)ಯ ವನದಿಂದಲೂ, ಜನರಿಗೆ ಆನಂದವನ್ನು ಕೊಡುವಂತಹ ಉದ್ಯಾನವನಗಳಿಂದಲೂ, ಕುವಲಯ(ಕೆನ್ನಯ್ದಿಲೆ)ಹೂವಿನ ಸಾರದಿಂದಲೂ ಸಾರಸ ಪಕ್ಷಿಗಳ ಸಮೂಹದಿಂದಲೂ ವಿರಾಜಿಸುತ್ತಿರುವ ನದೀನದಗಳಿಂದಲೂ, ಸುವಿಮಲವಾದ ರೂಪಶೀಲಗಳಿಂದ ಕೂಡಿದ ರಮಣಿಯರಿರುವ ರಮಣೀಯವಾದ ಜನರಿಂದಲೂ, ವೈಭವಸಹಿತವಾದ ದೊಡ್ಡದೊಡ್ಡ ಭವನಗಳಿಂದಲೂ ಜನಜೀವನಕ್ಕೆ ಔಷಧವಾದ ನಿಷಧದೇಶ ಮೆರೆಯುತ್ತಿತ್ತು.)

ಇಲ್ಲಿರುವ ನಿಷಧದ ವರ್ಣನೆ ಸಾಧಾರಣವಾದ ಉಲ್ಲೇಖಗಳಿಂದ ಕೂಡಿದ್ದರೂ ಮೊದಲೆರಡು ಪಾದಗಳಲ್ಲಿ ಪಾದಾಂತಯತಿಸಹಿತವಾಗಿ  ಪದ್ಯದಲ್ಲಿ ಯಥೇಷ್ಟವಾಗಿ ಜೊತೆಜೊತೆಯಾಗಿ ಬರುವ  ಛೇಕಾನುಪ್ರಾಸಗಳ ಸ್ವಾರಸ್ಯ ಮೆಚ್ಚುವಂತಿದೆ. '..ಫಲಶಾಲಿ ಶಾಲಿ..', '..ಜನನಂದನ ನಂದನಂಗಳಿಂ..' '..ಸಾರ ಸಾರಸ..'..ವಿರಾಜಿ ವಿರಾಜಿ..' '..ನದೀನದಂ..' '..ರಮಣೀ ರಮಣೀಯ..' '..ಸವೈಭವಭವನಂ..' ಎಂಬೆಲ್ಲ ಕಡೆಗಳಲ್ಲಿ ಬರುವ ಈ ಪದಯುಗ್ಮಗಳ ಸೊಗಸೇ ಸೊಗಸು. ಕೊನೆಯಲ್ಲಿ 'ನಿಷಧಂ ಜನಜೀವನೌಷಧಂ' ಎಂದು ಅವುಗಳಿಗೆಲ್ಲ ಪೂರ್ಣವಿರಾಮ ಹಾಕಿದಂತೆ 'ನಿಷಧಂ' ಎಂಬ ಪದಕ್ಕೆ ಪ್ರಾಸವಾಗಿ 'ಜನಜೀವನೌಷಧಂ' ಎಂದು ತಂದು ನಿಲ್ಲಿಸುವುದೂ ಅಷ್ಟೇ ಹೃದ್ಯವಾಗಿದೆ.


ಬುಧವಾರ, ಏಪ್ರಿಲ್ 2, 2014

ಸಹೃದಯಕಾಲ-೪ :ವಸಂತನೃಪಾಲ ನಡೆದನು ಪಾಂಡುವಿನ ಮೇಲೆ

ಕುಮಾರವ್ಯಾಸ PC : Internet

ಪಂಚಾಂಗದ ಪ್ರಕಾರ ಇದೀಗ ತಾನೆ ಹೊಸ ಸಂವತ್ಸರ ಕಾಲಿಡುತ್ತಿದೆ. ಪ್ರಕೃತಿಯಲ್ಲಿ ಅದಾಗಲೇ ವಸಂತ ಋತು ಅಡರಿದೆ. 
ಕಾವ್ಯಲೋಕದಲ್ಲಿ ಕಾಳಿದಾಸ 'ಋತುಸಂಹಾರ'ಎಂಬ ಕಾವ್ಯವನ್ನೇ ರಚಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಅಷ್ಟೇ ಅಲ್ಲದೇ ಬಹಳಷ್ಟು ಕಾವ್ಯಗಳಲ್ಲಿ ಕಾವ್ಯದ ಔಚಿತ್ಯಕ್ಕೆ ತಕ್ಕಂತೆ ಅಲ್ಲಲ್ಲಿ ಋತುವರ್ಣನೆ ಯಥೇಷ್ಟವಾಗಿ ಕಂಡುಬರುತ್ತವೆ. ಇನ್ನು ಕನ್ನಡದ ಕಾವ್ಯಲೋಕದಲ್ಲಿ ವಸಂತಶೋಭೆಯನ್ನು ಮೆರೆದಂತಹ ಕವಿ ಕುಮಾರವ್ಯಾಸ. ಅವನ ಕೀರ್ತಿಯೂ ಕಾವ್ಯವೂ ನಾಡಿನ ಉದ್ದಗಲಗಳಲ್ಲೂ ಆಚಂದ್ರಾರ್ಕವಾಗಿ ನೆಲೆಯಾಗಿದೆಯಷ್ಟೆ. ಅವನ ರೂಪಕಗಳೂ ವರ್ಣನೆಗಳೂ ಭಾಮಿನಿಯ ಷಟ್ಪದಿಯಲ್ಲಿ ಮನಸ್ಸಿಗೆ ನಾಟುವಂತಹ ಜಾಣ್ನುಡಿಗಳೂ ಲೀಲಾಜಾಲವಾಗಿ ನಿರ್ವಹಿಸುವ ಕಥೆಯ ಬಿಗಿಯೂ ಅವನ ಕರ್ಣಾಟಭಾರತಕಥಾಮಂಜರಿಯನ್ನು ಆಸ್ವಾದಿಸಿದ ಸಹೃದಯರಿಗೇ ಗೊತ್ತು. ಸುಲಭವಾಗಿ ಅರ್ಥವಾಗುವಂತಹ ಕಾವ್ಯವೊಂದನ್ನು ರಚಿಸಿ ಮನೆಮನೆಯಲ್ಲೂ ನಿರಂತರವಾಗಿ ಆರಾಧಿಸಲ್ಪಟ್ಟ ಈ ಕವಿ ವರ್ಣಿಸಿದ ವಸಂತಋತುವನ್ನು  ಕುರಿತ ಪದ್ಯಗಳನ್ನು ಈ ಸಂಚಿಕೆಗೆ ಆಯ್ದುಕೊಡಿದ್ದೇನೆ (ಅರ್ಥ ಸ್ಪಷ್ಟವಾಗಿ ತಿಳಿಯದಿದ್ದ ಕಡೆಗಳಲ್ಲಿಯೂ ಸಾಂಧರ್ಭಿಕವಾಗಿ ಮಾಡಿದ ನನ್ನ ನೀರಸ ಅನುವಾದಕ್ಕೆ ಕ್ಷಮೆಯಿರಲಿ :-( )

ಸಂದರ್ಭ: 'ನಿನ್ನಯಲಲನೆಯನು ನೀ ಕೂಡಿದಾಗಲೆ ಮರಣ ನಿನಗಹುದು' ಎಂದು ಮುನಿಯಿತ್ತ ಶಾಪಗ್ರಸ್ತನಾದ ಪಾಂಡು ಮಹಾರಾಜ ಶತಶೃಂಗ ಪರ್ವತ ಪ್ರದೇಶದಲ್ಲಿ ತನ್ನ ಪತ್ನಿಯರಾದ ಕುಂತಿ ಹಾಗೂ ಮಾದ್ರಿಯರೊಡನೆ ಹಲವು ಕಾಲ ಕಳೆದು, ಕುಂತಿ ದೂರ್ವಾಸರಿಂದ ಪಡೆದ ಮಂತ್ರೋಪದೇಶದಿಂದ ದೈವಕೃಪೆಯನ್ನು ಹೊಂದಿ ಯುಧಿಷ್ಠಿರಾದಿ ಐವರು ಮಕ್ಕಳನ್ನು ಪಡೆದಿರುತ್ತಾನೆ. ಅಂತಹ ಸಂದರ್ಭದಲ್ಲಿ ವಸಂತ ಋತುವಿನ ಆಗಮನವಾಗುತ್ತದೆ. ( ಆದಿಪರ್ವ ಸಂಧಿ-೫)

ಯೋಗಿಗೆತ್ತಿದ ಖಡುಗಧಾರೆ ವಿ
ಯೋಗಿಗೆತ್ತಿದ ಸಬಳವಖಿಳ ವಿ
ರಾಗಿಗಳ ಹೆಡತಲೆಯ ದಡಿ ನೈಷ್ಠಿಕರಿಗಲಗಣಸು
ಆಗಮಿಕರದೆ ಶೂಲ ಗರ್ವಿತ
ಗೂಗೆಗಳ ನಖಸಾಳವಗ್ಗದ
ಭೋಗಿಗಳ ಕುಲದೈವವೆಸೆದುದು ಕುಸುಮಮಯ ಸಮಯ

(ಯೋಗಿಗಳಿಗೆ ಎತ್ತಿದ ಖಡ್ಗಧಾರೆ, ವಿಯೋಗಿಗಳಿಗೆ ಎತ್ತಿದ ಸಬಳ(ಒಂದು ಆಯುಧ/ಈಟಿ), ವಿರಾಗಿಗಳ ಹೆಡತಲೆಯ ದಡಿ, ನೈಷ್ಠಿಕರಿಗೆ ಅಲಗಿನ ಲೋಹದ ತುದಿ, ಆಗಮಿಕರ ಎದೆಗೆ ಶೂಲ, ಗರ್ವ ಹೊಂದಿದ ಗೂಬೆಗಳ ಉಗುರಿನ ತುದಿ, ಭೋಗಿಗಳಿಗೆ ಕುಲದೈವವಾದ ಕುಸುಮಮಯಸಮಯ (ಹೂವುಗಳಿಂದ ಕೂಡಿರುವ ಸಮಯ)ವಸಂತವು ವಿರಾಜಿಸಿತು.

ವಸಂತವು ಭೋಗಿಗಳಿಗೆ ಕುಲದೈವದಂತಿದೆ. ಅಲ್ಲದೇ ಚಿತ್ತಚಾಂಚಲ್ಯವನ್ನುಂಟುಮಾಡುವ ಕಾರಣ ಯೋಗಿಗಳಿಗೆ ಖಡ್ಗಧಾರೆ ಇತ್ಯಾದಿರೂಪಕಗಳು ಸುವೇದ್ಯ.)

ಮೊರೆವ ತುಂಬಿಯ ಗಾಯಕರ ನಯ
ಸರದ ಕೋಕಿಲ ಪಾಠಕರ ಬಂ
ಧುರದ ಗಿಳಿಗಳ ಪಂಡಿತರ ಮಾಮರದ ಕರಿಘಟೆಯ
ಅರಳಿದಂಬುಜ ಸತ್ತಿಗೆಯ ಮಂ
ಜರಿಯ ಕುಸುಮದ ಚಾಮರದ ಚಾ
ತುರ ವಸಂತನೃಪಾಲ ನಡೆದನು ಪಾಂಡುವಿನ ಮೇಲೆ

(ಇಂತಹ ವಸಂತನೆಂಬ ರಾಜ ಮೊರೆಯುವ ದುಂಬಿಗಳನ್ನೇ ಗಾಯಕರನ್ನಾಗಿ ಮಾಡಿಕೊಂಡು ಒಳ್ಳೆಯ ಧ್ವನಿಯಿರುವ ಕೋಗಿಲೆಗಳನ್ನೇ ಪಾಠಕರನ್ನಾಗಿಸಿಕೊಂಡು ಸುಂದರವಾದ ಗಿಳಿಗಳನ್ನೇ ಪಂಡಿತರನ್ನಾಗಿಸಿಕೊಂಡು ಮಾವಿನ ಮರವನ್ನೇ ಆನೆಗಳ ಹಿಂಡಾಗಿಸಿಕೊಂಡು ಅರಳಿರುವ ಕಮಲಗಳನ್ನೇ ಕೊಡೆಯಾಗಿಸಿಕೊಂಡು ಗೊಂಚಲುಗೊಂಚಲಾಗಿರುವ ಹೂವುಗಳನ್ನೇ ಚಾಮರವನ್ನಾಗಿಸಿಕೊಂಡು ಪಾಂಡುವಿನ ಮೇಲೆ ನಡೆದ

ಇಲ್ಲಿ ಸಾವಯವರೂಪಕಾಲಂಕಾರದಲ್ಲಿ ವಸಂತ ಪ್ರಕೃತಿಯಲ್ಲಿ ಬರುತ್ತಿದ್ದುದು ಒಬ್ಬ ರಾಜ ಬಂದಂತೆ ಕಾಣುತ್ತಿತ್ತೆಂಬ ಕಲ್ಪನೆ ಮಾಡಿದ್ದಲ್ಲದೇ ಅವನು ಬಂದ ಉದ್ದೇಶ ಪಾಂಡುವಿನ ಮೇಲೆ ನಡೆಯುವುದು/ಯುದ್ಧಮಾಡುವುದು ಎಂಬ ಧ್ವನಿ ಸ್ಫುರಿಸುತ್ತದೆ. ಆ ಕಾರಣದಿಂದಲೇ ಚಿತ್ತಚಾಂಚಲ್ಯವಾಗಿ ಮಾದ್ರಿಯೊಡನೆ ಸೇರಲು ಹೋಗಿ ತನ್ನ ಜೀವನದ ಅಂತ್ಯವನ್ನು ಕಂಡದ್ದೂ ವೇದ್ಯವೇ ಆಗಿದೆ. )

ಫಲಿತಚೂತದ ಬಿಣ್ಪುಗಳ ನೆರೆ
ತಳಿತಶೋಕೆಯ ಕೆಂಪುಗಳ ಪರಿ
ದಳಿತ ಕಮಲದ ಕಂಪುಗಳ ಬನಬನದ ಗುಂಪುಗಳ
ಎಳಲತೆಯ ನುಣ್ಪುಗಳ ನವ ಪರಿ
ಮಳದ ಪವನನ ಸೊಂಪುಗಳ ವೆ
ಗ್ಗಳಿಕೆ ಝಳಪಿಸಿ ಹೊಯ್ದು ಸೆಳೆದುದು ಜನದ ಕಣ್ಮನವ

(ಫಲವನ್ನು ತಳೆಯಲು ಸಿದ್ಧವಾಗುತ್ತಿರುವ ಮಾವಿನ ಬಿಣ್ಪು, ತಳಿರನ್ನು  ತಳೆದ ಅಶೋಕವೃಕ್ಷದ ಕೆಂಪು, ಅರಳಿದ ಕಮಲದ ಕಂಪು, ಎಳೆಯ ಬಳ್ಳಿಯ ನುಣ್ಪು ಹೊಸ ಪರಿಮಳವನ್ನು ಹೊತ್ತು ತರುವ ಗಾಳಿಯ ಸೊಂಪು ಇವೆಲ್ಲವೂ ಜನರ ಕಣ್ಮನವನ್ನು ಸೆಳೆಯುತ್ತಿದ್ದವು.

ಇಲ್ಲಿ ಅನುಪ್ರಾಸಕ್ಕೆ ತಂದ  'oಪು' ಎಂಬುದೂ ಹಾಗೆಯೇ ತಳಿರು ತಳೆಯುವ ವೃಕ್ಷವೈವಿಧ್ಯವನ್ನು ಉಲ್ಲೇಖಿಸುವುದೂ ಸೊಗಸಾಗಿ ವಸಂತವನ್ನು ಚಿತ್ರಿಸುತ್ತವೆ)

ಪಸರಿಸಿತು ಮಧುಮಾಸ ತಾವರೆ
ಯೆಸಳ ದೋಣಿಯಮೇಲೆ ಹಾಯ್ದವು
ಕುಸುಮರಸದುಬ್ಬರದ ತೊರೆಯನು ಕೂಡೆ ತುಂಬಿಗಳು
ಒಸರ್ವ ಮಕರಂದದ ತುಷಾರದ
ಕೆಸರೊಳದ್ದವು ಕೊಂಚೆಗಳು ಹಗ
ಲೆಸೆವ ದಂಪತಿವಕ್ಕಿ ಸಾರಸ ರಾಜ ಹಂಸಗಳು

(ಈ ಮಧುಮಾಸ ಪಸರಿಸುತ್ತಿರುವಾಗ ತಾವರೆಯ ಎಸಳುಗಳೆಂಬ ದೋಣಿಯಮೇಲೆ ದುಂಬಿಗಳು ಪುಷ್ಪಗಳ ಮಕರಂದ ರಸದ ಉಬ್ಬರದ ತೊರೆಯನ್ನು ದಾಟಿದವು. ಕ್ರೌಂಚಪಕ್ಷಿಗಳು, ಚಕ್ರವಾಕಗಳು, ಸಾರಸಗಳು,ರಾಜಹಂಸಗಳೆಲ್ಲವೂ ಒಸರುತ್ತಿರುವ ಮಕರಂದದ ತುಷಾರದ ಕೆಸರಿನಲ್ಲಿ ಅದ್ದಲ್ಪಟ್ಟವು.

 ಇಲ್ಲಿ ಹಲವು ಪಕ್ಷಿಗಳು ಮಕರಂದಭರಿತ ಕೊಳದಲ್ಲಿ ಮುಳುಗೇಳುವುದನ್ನು ಉಲ್ಲೇಖಿಸುವುದರ ಜೊತೆಗೆ ದುಂಬಿಗಳು ಮಕರಂದದ ತೊರೆಯನ್ನು ತಾವರೆಯ ಎಸಳುಗಳೆಂಬ ದೋಣಿಯ ಮೇಲೆ ಕುಳಿತು ದಾಟಿದವೆನ್ನುವ ಸುಂದರವಾದ ಕಲ್ಪನೆಯನ್ನು ಕೊಡುತ್ತಾನೆ)

ಸೊಗಸಾದ ಅಲಂಕಾರಭೂಯಿಷ್ಠ ಪದ್ಯಗಳ ಮೂಲಕ ಸಹೃದಯಸಾಮ್ರಾಜ್ಯವನ್ನು  ಕುಮಾರವ್ಯಾಸನಂತಹ ರೂಪಕಸಾಮ್ರಾಜ್ಯಚಕ್ರವರ್ತಿಗಳೇ ಗೆಲ್ಲುತ್ತಾರಷ್ಟೇ!!!

ಶನಿವಾರ, ಮಾರ್ಚ್ 29, 2014

ಸಹೃದಯಕಾಲ-೩ ರನ್ನನ ಗದಾಯುದ್ಧದ ಕೆಲವು ಪದ್ಯಗಳು

ಜನ್ನನು ತನ್ನ 'ಯಶೋಧರಚರಿತೆ'ಯಲ್ಲಿ 

ಕನ್ನರನಾದರದಿಂ ಕುಡೆ
ಹೊನ್ನಂ ಮನಮೊಸೆದು ತೈಲಪಂ ಕುಡೆ ರನ್ನಂ
ಮನ್ನಿಸಿ ಬಲ್ಲಾಳಂ ಕುಡೆ
ಜನ್ನಂ ಕವಿಚಕ್ರವರ್ತಿವೆಸರಂ ಪಡೆದರ್ || (೧-೨೧)

"ಕನ್ನರನು  ಆದರದಿಂದ ಕೊಡಲು 'ಪೊನ್ನ'(ಹೊನ್ನ) ತೈಲಪನು ಮೆಚ್ಚಿ ಕೊಡಲು 'ರನ್ನ' ಹಾಗೂ ಬಲ್ಲಾಳನು ಕೊಡಲು 'ಜನ್ನ' ಈ ಮೂವರು 'ಕವಿಚಕ್ರವರ್ತಿ' ಎಂಬ ಬಿರುದನ್ನು ಪಡೆದರು" ಎಂದು ಹೇಳುತ್ತಾನೆ. 

ಅಂತಹ ಕನ್ನಡದ ರತ್ನತ್ರಯದಲ್ಲಿ ಒಬ್ಬನಾದ 'ರನ್ನ'ನ 'ಸಾಹಸಭೀಮವಿಜಯಂ' ಕಾವ್ಯವನ್ನು ಅವಲೋಕಿಸಿದರೆ ಅವನೇಕೆ ಕವಿಚಕ್ರವರ್ತಿಯೆಂಬ ಬಿರುದನ್ನು ಪಡೆದ ಎಂದು ಗೊತ್ತಾಗುತ್ತದೆ. ಅಂತಹ ವೈಶಿಷ್ಟ್ಯಪೂರ್ಣವಾದ ಶೈಲಿ, ಕಥೆಯ ನಿರೂಪಣೆಯನ್ನು ಮಾಡುವ ರೀತಿ, ವರ್ಣನೆ ಇವುಗಳೆಲ್ಲವನ್ನೂ ನೋಡಿದರೆ ಸಾರಸ್ವತಾಸಕ್ತರ ಮನಸ್ಸಿಗೆ ಆಗುವ ಆನಂದ ಅವರ್ಣನೀಯವೇ ಸರಿ.

ರತ್ನಪರೀಕ್ಷಕನಾಂ ಕೃತಿ
ರತ್ನಪರೀಕ್ಷಕನೆನೆಂದು ಫಣಿಪತಿಯ ಫಣಾ
ರತ್ನಮುಮಂ ರನ್ನನ ಕೃತಿ
ರತ್ನಮುಮಂ ಪೇೞ್ ಪರೀಕ್ಷಿಪರ್ಗೆಂಟೆರ್ದೆಯೇ ।। (೧-೪೪)

"ನಾನು ರತ್ನಪರೀಕ್ಷಕ ಅಥವಾ ಕೃತಿರತ್ನವನ್ನು ಪರೀಕ್ಷಿಸುವವನು(ವಿಮರ್ಶಕ) ಎಂದು ಫಣಿಪತಿಯ(ವಾಸುಕಿಯ) ಹೆಡೆಯ ಮೇಲಿರುವ ರತ್ನವನ್ನೂ ರನ್ನನ ಕೃತಿರತ್ನ(ಸಾಹಸಭೀಮವಿಜಯ)ವನ್ನೂ ಪರೀಕ್ಷಿಸುವುದಕ್ಕೆ ಹೊರಟವನಿಗೆ ಎಂಟೆದೆಯೇ!" ಎಂದು ಕೇಳುತ್ತಾ ತನ್ನ ಕವಿತ್ವವನ್ನು ಪರೀಕ್ಷಿಸಬೇಕೆಂದರೆ ಅಂತಹ ಧೈರ್ಯವಿರಬೇಕೆಂದು ಹೇಳುತ್ತಾ ಆರಂಭಿಸುವ ಕಾವ್ಯದಲ್ಲಿ 
 ತನ್ನ ಕಾವ್ಯಶಕ್ತಿಯ ಬಗ್ಗೆ ಹೀಗೆ ಹೇಳಿಕೊಳ್ಳುತ್ತಾನೆ :-

ಆರಾತೀಯ ಕವೀಶ್ವರ
ರಾರುಂ ಮುನ್ನಾರ್ತರಿಲ್ಲ ವಾಗ್ದೇವಿಯ ಭಂ
ಡಾರದ ಮುದ್ರೆಯನೊಡೆದಂ
ಸಾರಸ್ವತಮೆನಿಪ ಕವಿತೆಯೊಳ್ ಕವಿರತ್ನಂ।। (೧-೧೩)
ರನ್ನನ ಹಸ್ತಾಕ್ಷರ (Photo courtesy : Internet)

"ಹಿಂದಣ ಕವಿಗಳು ಯಾರೂ ಸಮರ್ಥರಾಗಲಿಲ್ಲ. ಆದರೆ ಈ ರತ್ನನು ಮಾತ್ರ ಸಾರಸ್ವತವೆನ್ನುವ ಕವಿತೆಯಲ್ಲಿ ವಾಗ್ದೇವಿಯ ಭಂಡಾರದ ಮುದ್ರೆ(ಬೀಗ)ವನ್ನು ಒಡೆದ" ಎಂದು. ವಾಗ್ದೇವಿಯಾದ ಸರಸ್ವತಿಯ ಭಂಡಾರದ ಬೀಗವನ್ನು ಒಡೆಯುವುದೆಂದರೆ ಅದು ಸುಲಭದ ಮಾತಲ್ಲ. ಹಿಂದಣ ಕವಿಗಳಿಗೆ ಯಾರಿಗೂ ಆಗಲಿಲ್ಲ ಎಂಬಂತಹ ಧ್ವನಿ ಈ ಪದ್ಯದಲ್ಲಿ ಕೇಳುತ್ತದೆ.. 


ರನ್ನನ ಕಾವ್ಯಪ್ರತಿಭೆಯನ್ನು ಪ್ರತಿನಿಧಿಸುವಂತೆ ಅವನ ಪದ್ಯಗಳಲ್ಲಿ ಯಾವುದಾದರೂ ಒಂದೆರಡನ್ನು ಆಯ್ಕೆಮಾಡಿಕೊಳ್ಳಲು ಹೋದರೆ ಬಹುಸಂಖ್ಯೆಯ ಪದ್ಯಗಳು 'ತಾಮುಂದೆ ತಾಮುಂದೆ' ಎನ್ನುತ್ತಾ ಬರುತ್ತವೆ. 
ಅಂತಹ ಒಂದು ಪದ್ಯ ಹೀಗಿದೆ:-

ಕುರುಭೂಭೃದ್ಬಲತೂಲಕಾಲಪವನಂ ಕೌರವ್ಯಗಂಧೇಭಕೇ
ಸರಿ  ದುಶ್ಶಾಸನರಕ್ತರಕ್ತವದನಂ ದುರ್ಯೋಧನೋರುಕ್ಷಮಾ
ಧರವಜ್ರಂ ಕುರುರಾಜರತ್ನಮಕುಟೋತ್ಕೂಟಾಂಘ್ರಿಸಂಘಟ್ಟಸಂ
ಗರನೆಂದೆಂದಭಿವರ್ಣಿಪೆಂ ರಣಯಶಶ್ರೀರಾಮನಂ ಭೀಮನಂ ।। (೧-೫೨)

"ಕುರುಕುಲದ ರಾಜರ ಬಲವೆಂಬುದನ್ನು ಹತ್ತಿಯಂತೆ ಹಾರಿಸಿಕೊಂಡು ಹೋಗುವ ಬಿರುಗಾಳಿಯಾದ, ಕೌರವನೆಂಬ ಮದವೇರಿದ ಆನೆಗೆ ಸಿಂಹವಾದ, ದುಶ್ಶಾಸನನ ರಕ್ತಕ್ಕೆ ಜಿಗಳೆಯಾದ, ದುರ್ಯೋಧನನ ತೊಡೆಯೆಂಬ ಪರ್ವತಕ್ಕೆ ವಜ್ರಾಯುಧವಾದ*, ಕುರುರಾಜನ ರತ್ನಕಿರೀಟವನ್ನು ಮೆಟ್ಟಿದ ರಣರಂಗದ ಯಶಸ್ಸೆಂಬ ಸಿರಿಗೆ ರಾಮನಾದ ಭೀಮನನ್ನು ವರ್ಣಿಸುವೆನು" ಎಂದು ಕಥೆಯನ್ನು ಆರಂಭಿಸುತ್ತಾನೆ. 
(*ಪರ್ವತಗಳಿಗೆ ರೆಕ್ಕೆಯಿತ್ತೆಂದೂ ಅದನ್ನು ಇಂದ್ರ ತನ್ನ ವಜ್ರಾಯುಧದಿಂದ ಕತ್ತರಿಸಿದನೆಂದೂ ಕಥೆ)

ಮತ್ತೇಭವಿಕ್ರೀಡಿತ ಛಂದಸ್ಸಿನಲ್ಲಿ ಭೀಮನ ಸಾಹಸದವರ್ಣನೆ ಒಂದು ಮತ್ತೇಭವಿಕ್ರೀಡಿತವೇ (ಮದವೇರಿದ ಆನೆಯ ಆಟ) ಎಂಬಂತೆ ಭಾಸವಾಗುತ್ತದೆ. ಮೊದಲ ಸಾಲಿನಲ್ಲಿ '...ಬಲತೂಲಕಾಲಪವನಂ..' ಎಂಬಲ್ಲಿ (ಲಕಾರ-ಅನುಪ್ರಾಸ) ಎರಡನೇ ಸಾಲಿನ '..ರಕ್ತರಕ್ತವದನಂ..'ಎಂಬಲ್ಲಿ (ಯಮಕ) ಮೂರನೇ ಸಾಲಿನ '..ಕುರುರಾಜರತ್ನಮಕುಟೋತ್ಕೂಟಾಂಘ್ರಿಸಂಘಟ್ಟ..' ('ರ'ಮತ್ತು'ಟ'ಕಾರಗಳ ಅನುಪ್ರಾಸ) ಕೊನೆಯ ಸಾಲಿನ 'ಶ್ರೀರಾಮನಂ ಭೀಮನಂ'(ಛೇಕಾನುಪ್ರಾಸ) ಎಂಬಲ್ಲೆಲ್ಲ ಶಬ್ದಾಲಂಕಾರಗಳು ಹಿತವಾಗಿ ಕಿವಿಗೆ ಬಡಿಯುತ್ತವೆ. 
ಅಲ್ಲದೇ ಅರ್ಥಾಲಂಕಾರಕ್ಕೆ ರೂಪಕಗಳ ರತ್ನಮಾಲೆಯನ್ನೇ ತೆಗೆತೆಗೆದಿಡುತ್ತಾನೆ;  ಕುರುಕುಲದ ರಾಜರ ಬಲವೆಂಬುದೊಂದು ಹತ್ತಿ. ಅದನ್ನು ಹಾರಿಸಿಕೊಂಡು ಹೋಗುವಂತಹ ಪ್ರಳಯಕಾಲದ ಗಾಳಿ ಭೀಮ. ಕೌರವರೆಂಬ ಮದವೇರಿದ ಆನೆಯ ನೆತ್ತಿಯನ್ನು ಸೀಳುವಂತಹ ಕೇಸರಿ (ಸಿಂಹ) ಭೀಮ. ದುಶ್ಶಾಸನನ ರಕ್ತವನ್ನು ಒಂದಿನಿತೂ ಬಿಡದೆ ಹೀರಿದ ಜಿಗಳೆ/ಉಂಬಳ ಭೀಮ. ದುರ್ಯೋಧನನ ತೊಡೆಯೆಂಬ ಬೆಟ್ಟವನ್ನು ಕಡಿದುಹಾಕಿದ ವಜ್ರಾಯುಧ ಭೀಮ. ಸುಯೋಧನನ ರತ್ನ ಕಿರೀಟವನ್ನು ಮೆಟ್ಟಿ ಧೂಳಿನಲ್ಲಿ ಹೊರಳಾಡಿಸುವಂತಹ ಯೋಧ ಭೀಮ, ರಣರಂಗದ ಯಶಸ್ಸೆಂಬ ಶ್ರೀಗೆ ರಾಮನಾದ ಭೀಮನನ್ನು ವರ್ಣಿಸುತ್ತೇನೆ ಎಂದು ಹೇಳುವಾಗಲೇ ಸಾಹಸಭೀಮನ ಸಾಹಸಗಳು ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತವೆ. 
ಎಂತಹ ಸೊಗಸಾದ ಪದ್ಯ.
ರನ್ನ ನಿಜಕ್ಕೂ ಸರಸ್ವತಿಯ ಭಂಡಾರದ ಒಡೆದಾಗ ಹೊರಬಂದ ರನ್ನವೇ ಸರಿ!

ಮಂಗಳವಾರ, ಮಾರ್ಚ್ 25, 2014

ಸಹೃದಯಕಾಲ-೨ ಲಕ್ಷ್ಮೀಶನ ಜೈಮಿನಿ ಭಾರತದಿಂದ ಒಂದು ಪದ್ಯ

ಚಿತ್ರ:ಅಂತರ್ಜಾಲಕೃಪೆ

      ಕನ್ನಡಕಾವ್ಯಪರಂಪರೆಯಲ್ಲಿ ಷಟ್ಪದಿಗಳದ್ದೇ ವಿಶೇಷ ಘಟ್ಟವಾಗಿ ರೂಪುಗೊಂಡಿತು. ಬಹಳಷ್ಟು ಕವಿಗಳ ಮೆಚ್ಚುಗೆಗೆ ಪಾತ್ರವಾದ ಷಟ್ಪದಿಗಳಲ್ಲೇ ಅನೇಕ ಮಹಾಕಾವ್ಯಗಳೂ ರಚನೆಯಾದವು. ಇಂತಹ ಹಲವು ಕವಿಗಳಲ್ಲಿ ಲಕ್ಷ್ಮೀಶ ತನ್ನದೇ ಆದ ಯಮಕ ಶ್ಲೇಷಾದಿ ಚಮತ್ಕಾರಗಳ ಮೂಲಕ ಪ್ರೌಢ ಶೈಲಿಯಮೂಲಕ ವಿಶಿಷ್ಟನಾಗಿದ್ದಾನೆ. ಇವನ ಕೃತಿ 'ಜೈಮಿನಿ ಭಾರತ' ಇದು ಪಾಂಡವರು ಅಶ್ವಮೇಧ ಯಾಗ ಮಾಡುವ ಕಥೆಯನ್ನೊಳಗೊಂಡಿದ್ದು ಮೂಲ ಸಂಸ್ಕೃತದ ಜೈಮಿನಿ ಮಹರ್ಷಿ ರಚಿಸಿದ್ದೆನ್ನಲಾದ 'ಅಶ್ವಮೇಧಿಕ ಪರ್ವ'ದ ಕಥೆಯಾಗಿದೆ. 
     ಪ್ರತಿಪದ್ಯದಲ್ಲೂ ಯಮಕವನ್ನೋ  ಅನುಪ್ರಾಸವನ್ನೋ ಅಥವಾ ಶ್ಲೇಷದಂತಹ ಚಮತ್ಕಾರವನ್ನೋ ಅಥವಾ ಒಂದು ದೃಷ್ಟಾಂತವನ್ನೋ ಕಟ್ಟಿಕೊಡುವ ಮೂಲಕ ಕಲ್ಪನೆಯ ಮಹಾಸಾಗರದ ಮಧ್ಯಕ್ಕೆಲ್ಲೋ ನಮ್ಮನ್ನು ಕರೆದೊಯ್ಯುವ ಲಕ್ಷ್ಮೀಶನ ಪದ್ಯಗಳು ವಾರ್ಧಕ ಷಟ್ಪದಿಯಾದರೂ ನಮ್ಮ ಮನಸ್ಸಿಗೆ ಹೊಸ ಉತ್ಸಾಹ ಮೂಡಿಸುತ್ತವೆಯೆಂಬುದರಲ್ಲಿ ಸಂದೇಹವಿಲ್ಲ!!

ಜೈಮಿನಿ ಭಾರತದಲ್ಲಿ ಬರುವ ಒಂದು ಸೊಗಸಾದ ವರ್ಣನೆ ಹೀಗಿದೆ-
ಸಂದರ್ಭ-ಭದ್ರಾವತಿಯೆಂಬ ನಗರದಲ್ಲಿ ಯೌವನಾಶ್ವನೆಂಬ ರಾಜ ಆಡಳಿತ ನಡೆಸುತ್ತಿರಲು ಅಶ್ವಮೇಧ ಯಾಗಕ್ಕೆ ಸೂಕ್ತವಾದ ಕುದುರೆ ಅಲ್ಲಿರುವುದನ್ನು ತಿಳಿದು ಕೃಷ್ಣನ ಅಣತಿಯ ಮೇರೆಗೆ ಭೀಮ, ಘಟೋತ್ಕಚನ ಮಗ ಹಾಗೂ ಕರ್ಣನ ಮಗ ವೃಷಸೇನ ಈ ಮೂವರೂ ಕುದುರೆಯನ್ನು ಅಪಹರಿಸಿಕೊಂಡು ತರಲು ಅಲ್ಲಿಗೆ ಹೋಗುತ್ತಾರೆ. ಆಗ ಕಾಣುವ ಭದ್ರಾವತೀ ನಗರದ ವರ್ಣನೆಯನ್ನು ಮಾಡುತ್ತಾ ಕವಿ ಹೇಳುವ ಈ ಪದ್ಯ  ಸಹೃದಯರು ಆಸ್ವಾದಿಸಲೇ ಬೇಕಾದಂತಹ ಒಂದು ಪದ್ಯ (ಮೂರನೆಯ ಸಂಧಿಯ ೧೯ನೆಯ ಪದ್ಯ)
ಕುಸಿದು ಪಾತಾಳದೊಳಗಿರ್ದು ಪಲಕಾಲಮಂ
ದ್ವಿಸಹಸ್ರ ನಯನಂಗಳಿಂದ ನೋಡಿದೊಡೆ ಕಾ
ಣಿಸಿಕೊಳ್ಳದೀ ಪುರದಗಳ ಘಾತಮಿದನಜಂ ಬಲ್ಲನೋ ಕೇಳ್ವೆನೆಂದು 
ಬಿಸಜ ಸಂಭವನ ಪೊರೆಗೆಂದಿಳೆಯನುಗಿದುಚ್ಚ
ಳಿಸಿ ಬಳೆದ ಫಣಿಪತಿಯ ಮಣಿವಡೆಯ ಸಾಲಿವೆನ
ಲೆಸೆವುವಾಗಸದೊಳೀ ಪೊಳಲ ಕೋಟೆಯ ರನ್ನದೆನೆಗಳೆಲ್ಲಾದೆಸೆಯೊಳು||

"ಕುಸಿದು ಪಾತಾಳಲೋಕದಲ್ಲಿ ಹಲವು ಕಾಲಗಳಿಂದ ವಾಸವಾಗಿದ್ದ ವಾಸುಕಿ "ತನ್ನ ಎರಡು ಸಾವಿರ ಕಣ್ಣುಗಳಿಂದ ನೋಡಿದರೆ ಈ ನಗರದ ವಿಸ್ತೀರ್ಣ ಕಾಣಿಸುತ್ತಿಲ್ಲ, ಬ್ರಹ್ಮನಿಗೇನಾದರೂ ಗೊತ್ತಿದೆಯೋ ಕೇಳಿನೋಡೋಣ" ಎಂದುಕೊಳ್ಳುತ್ತಾ ಬಿಸಜಸಂಭವನಾದ ಬ್ರಹ್ಮನ ಬಳಿಗೆ ಹೋಗಲು ಭೂಮಿಯನ್ನು ಉಗಿದು ದೊಡ್ಡದಾಗಿ ಬೆಳೆದ ಫಣಿಪತಿಯ ಹೆಡೆಯ ಮಣಿಗಳ ಸಾಲುಗಳೋ ಎಂಬಂತೆ  ಆಕಾಶದೆತ್ತರಕ್ಕಿದ್ದ ಭದ್ರಾವತಿಯೆಂಬ ಪಟ್ಟಣದ ಕೋಟೆಯ ರತ್ನಮಯವಾದ ಶಿಖರಗಳು ಎಲ್ಲಾ ದಿಕ್ಕಿನಲ್ಲೂ ಕಂಡವು." 

ನಗರದ ಕೋಟೆಯ ರನ್ನದೆನೆಗಳು ಸಾವಿರಾರು ರತ್ನಗಳಿಂದ ಕೂಡಿರುವುದು ಕವಿಯ ಕಣ್ಣಿಗೆ ನಾಗರಾಜನ ಸಾವಿರ ಹೆಡೆಗಳ ಮೇಲಿರುವ ಮಣಿಗಳಂತೆ ಕಂಡಿತು. ಅದನ್ನು ಅಷ್ಟೇ ಹೇಳದೇ ವಿವರಿಸುತ್ತಾ "ತನ್ನ ಎರಡು ಸಾವಿರ ಕಣ್ಣುಗಳಿಗೆ ಕಾಣದ ಈ ನಗರದ ಅಗಲ ಬ್ರಹ್ಮನಿಗೇನಾದರೂ ಗೊತ್ತಿರಬಹುದೇ ಕೇಳಿ ನೋಡೋಣ' ಎಂದುಕೊಂಡು ಬಂದ ಫಣಿಪತಿಯ ಮಣಿವೆಡೆಯ ರತ್ನಗಳ ಸಾಲಿನಂತೆ ಕಂಡಿತು" ಎಂದು ಹೇಳುವ ರೀತಿ ಅಲ್ಲಿರುವ ವಕ್ರತೆ ಇವುಗಳ ಸ್ವಾದವನ್ನು ವರ್ಣಿಸಲು ಸಾಧ್ಯವೇ?