Powered By Blogger

ಶುಕ್ರವಾರ, ಏಪ್ರಿಲ್ 17, 2015

ಸಹೃದಯಕಾಲ-೧೭ ಮತ್ತೆ ವಸಂತ

ಕುಮಾರವ್ಯಾಸನ ಕರ್ಣಾಟಭಾರತಕಥಾಮಂಜರಿಯಲ್ಲಿ ಬರುವ ವಸಂತರ್ತುವಿನ ವರ್ಣನೆಯನ್ನು ಹಿಂದೆ
ಸಹೃದಯಕಾಲ-೪ರಲ್ಲಿ ನೋಡಿದ್ದೇವೆ. ಇಲ್ಲಿ ಕೂಡ ಮತ್ತೆ ವಸಂತದ ವರ್ಣನೆಯನ್ನೇ ಆಯ್ಕೆ ಮಾಡುವುದರಲ್ಲಿ ಎರಡು ಉದ್ದೇಶಗಳಿವೆ. ಒಂದು ಪ್ರಸ್ತುತ ಪ್ರಕೃತಿಯಲ್ಲಿ ಅದಾಗಲೇ ವಸಂತಪ್ರವೇಶವಾಗಿರುವುದು, ಎರಡನೇಯದೆಂದರೆ ಪಂಪ ಹಾಗೂ ಕುಮಾರವ್ಯಾಸರಿಬ್ಬರೂ ಒಂದು ಸಂದರ್ಭವನ್ನು ಹೇಗೆ ವರ್ಣಿಸಿದ್ದಾರೆ ಎಂಬುದರ ಪರಿಚಯವಾಗುತ್ತದೆ ಎಂಬುದು. ಸಹೃದಯರಲ್ಲಿ  ತೌಲನಿಕವಾಗಿ ನೋಡಬಯಸುವವರಿಗೂ ಕೊರತೆಯಿಲ್ಲವಷ್ಟೆ!

ಸಂದರ್ಭ: ಪಂಪನ ವಿಕ್ರಮಾರ್ಜುನ ವಿಜಯ ಕಾವ್ಯದ ದ್ವಿತೀಯಾಶ್ವಾಸದ ೧೨ನೆಯ ಪದ್ಯ ಮತ್ತು ನಂತರದ ಆಯ್ದ ಭಾಗಗಳು- ಪಾಂಡುವಿಗೆ ಕುಂತಿಮಾದ್ರಿಯರ ಮೂಲಕ ದೂರ್ವಾಸ ಮಹರ್ಷಿಯ ಮಂತ್ರಫಲವಾಗಿ ಸಂತಾನಭಾಗ್ಯವಾಗಿರುತ್ತದೆ. ಆ ಸಂದರ್ಭದಲ್ಲಿ ಶತಶೃಂಗ ಪರ್ವತಗಳಲ್ಲಿ ವಸಂತರ್ತು ಬರುತ್ತದೆ.

ಚಂ|| ಅಲರ್ದದಿರ್ಮುತ್ತೆ ಪೂತ ಪೊಸ ಮಲ್ಲಿಗೆ ಕಂಪನವುಂಕುತಿರ್ಪ ತೆಂ
ಬೆಲರುಮಿದಂ ಗೆಲಲ್ಬಗೆವ ತುಂಬಿಗಳ ಧ್ವನಿಯಿಂ ಕುಕಿಲ್ವ ಕೋ|
ಗಿಲೆ ನನೆದೋಱ ನುಣ್ಪೆಸೆವ ಮಾಮರನೊರ್ಮೊದಲಲ್ಲದುಣ್ಮುವು
ಯ್ಯಲ ಪೊಸಗಾವರಂ ಪುಗಿಲೊಳೇನೆಸೆದತ್ತೊ ಬಸಂತಮಾಸದೊಳ್|| ೧೨||
(ಹೂ-ತಳೆದ ಅದಿರ್ಮುತ್ತೆ-ಮಾಧವೀಲತೆ, ಹೊಸದಾದ ಮಲ್ಲಿಗೆ, ಕಂಪನ್ನು ಹರಡುತ್ತಿರುವ ತಂಗಾಳಿ, ಇದನ್ನು ಗೆಲ್ಲಲು ಯೋಚಿಸುತ್ತಿರುವ ದುಂಬಿಗಳು, ತಮ್ಮ ಇಂಪಾದ ಕಂಠದ ಧ್ವನಿಯಿಂದ ಕುಕಿಲಿಡುತ್ತಿರುವ ಕೋಗಿಲೆ ಮೊಗ್ಗನ್ನು ತೋರಿ ಚೆನ್ನಾಗಿ ಕಾಣಿಸುತ್ತಿದ್ದ ಮಾವಿನಮರ,ಒಂದು ಮೊದಲು ಅಲ್ಲದೇ ತೂಗುತ್ತಿದ್ದ ಉಯ್ಯಾಲೆಯ ಹೊಸ ಗದ್ದಲ(ಗಾವರ) ಇವೆಲ್ಲವೂ ವಸಂತಮಾಸದ ಪ್ರವೇಶದಲ್ಲಿ ಏನು ರಾಜಿಸುತ್ತದ್ದವೋ! )
(ವಚನಭಾಗದಲ್ಲಿಯೂ ಸ್ವಾರಸ್ಯವಿದ್ದರೂ ಅದನ್ನು  ಸೇರಿಸಿದಾಗ ವಿಸ್ತಾರ ಹೆಚ್ಚುವುದೆಂದು ಹಾಗೆಯೇ ಬಿಡುತ್ತಿದ್ದೇನೆ)

ಚಂ|| ಬಿರಯಿಯ ಮಿೞ್ತುವೆಂ ಮಿದಿದೊಡಲ್ಲದಣಂ ಮುಳಿಸಾಱದೆಂದು ಪ
ಲ್ಮೊರೆದಪನಿಲ್ಲಿ ಮನ್ಮಥನಿದಂ ಪುಗಲಿಂಗಡಿಮೆಂದು ಬೇಟಕಾ|
ಱರನಿರದೂಱ ಸಾಱ ಜಡಿವಂತೆಸೆಗುಂ ಸಹಕಾರ ಕೋಮಳಾಂ
ಕುರ ಪರಿತುಷ್ಟ ಪುಷ್ಟ ಪರಪುಷ್ಟ ಗಳಧ್ವನಿ ನಂದನಂಗಳೊಳ್|| ೧೩||
(ನಂದನವನಗಳಲ್ಲಿ ಮಾವಿನ ಮರದ ಕೋಮಲವಾದ ಅಂಕುರ(ಚಿಗುರು)ಗಳಿಂದ ಪರಿತುಷ್ಟವಾದ ಪರಪುಷ್ಟ(ಕೋಗಿಲೆ)ಗಳ ಧ್ವನಿ-  "ವಿರಹಿಯ ಮೃತ್ಯು ನಾನು, ಅವರನ್ನು ಮಿದಿದು(ಮೆಟ್ಟಿ)ದಲ್ಲದೆ ಕೋಪ ಆರದು ಎಂದು ಹಲ್ಲುಕಡಿಯುತ್ತ ಮನ್ಮಥ ಬೇಟಕಾರ(ಪ್ರಣಯಿ)ಗಳಿಗೆ ಇಲ್ಲಿ ಬರಬೇಡಿ" ಎಂದು ಹೇಳುವಂತೆ ತೋರುತ್ತಿತ್ತು.)
Image result for ಕೋಗಿಲೆ
ಉ|| ಪೋಗದೆ ಪಾಡುತಿರ್ಪಳಿಯೆ ಬೃಂಹಿತಮಾಗಿರೆ ಚಂದ್ರಕಾಂತಿ ಕಾ
ಯ್ಪಾಗಿರೆ ಬೀಸುವೊಂದೆಲರೆ ಬೀಸುವುದಾಗಿರೆ ಕಾಯ್ಗಳಿಂದಮಿಂ|
ಬಾಗಿರೆ ಸೋರ್ವ ಸೋನೆ ಮದಮಾಗಿರೆ ಮಾವಿನ ಬಂದ ಕೋಡೆ ಕೋ
ಡಾಗಿರೆ ಕೋಡುಗೊಂಡು ಪರಿದತ್ತು ವಸಂತಗಜಂ ವಿಯೋಗಿಯಂ|| ೧೫||
Image result for ದುಂಬಿ
(ಈ ಪದ್ಯದಲ್ಲಿ ವಸಂತ ಒಂದು ಆನೆ ಎಂದು ಸಾವಯವ ರೂಪಕದಲ್ಲಿ ಹೇಳಿದ್ದಾನೆ; ಎಲ್ಲೆಡೆ ಹಾಡುತ್ತಿರುವ ದುಂಬಿಗಳೇ ಆನೆಯ ಬ್ರೂಂಕಾರ, ಚಂದ್ರಕಾಂತಿಯೇ ಉಗ್ರತೆ/ಕೋಪ(?), ಬೀಸುತ್ತಿರುವ ತಂಗಾಳಿಯೇ ಆನೆ ಕಿವಿಗಳನ್ನು ಬೀಸಿದಾಗ ಉಂಟಾಗುವ ಗಾಳಿ ಆಗಿದೆ, ಕಾಯಿಗಳಿಂದ ಅಲ್ಲಲ್ಲಿ ಸೋರುತ್ತಿರುವ ಸೋನೆ(ರಸ) ಆನೆಯ ಮದಧಾರೆಯಾಗಿರಲು, ಮಾವಿನ ಕೋಡು (ಮಾವಿನ ಹೂವು ಕೋಡಿನಂತಿರುತ್ತದೆಯೆಂಬ ಕಾರಣದಿಂದ) ಆನೆಯ ದಂತಗಳು. ಹೀಗೆ ವಸಂತ ಎನ್ನುವ ಆನೆ ವಿಯೋಗಿಗಳನ್ನು ಹರಿದು ಪೀಡಿಸುತ್ತಿತ್ತು)
Image result for indian vasanta seasonಹೀಗೆ ವಸಂತ ಬಂದದ್ದು ಕಂಡು ಮಾದ್ರಿ ವನದಲ್ಲಿ ಆಟವಾಡುವ ಬಯಕೆಯಿಂದ ಹೋಗುತ್ತಾಳೆ ಅವಳು ವಸಂತನ ಕಾಂತೆಯಂತೆ ಕಾಣುತ್ತಾಳೆ ಅವಳು ಹೂವಿನ ತೊಡುಗೆಯನ್ನೇ ತೊಟ್ಟಿದ್ದು ಮನ್ಮಥನ ಹೂಬಾಣಗಳಂತೆ ಕಾಣುತ್ತಿತ್ತು ಹೀಗಿರಲು  

ಚಂ|| ಸೊಗಯಿಸೆ ತೊಟ್ಟ ಪೂದುಡುಗೆ ಮೆಲ್ಲೆರ್ದೆಯೊಳ್ ತಡಮಾಡೆ ಗಾಡಿ ದಿ
ಟ್ಟಿಗಳೊಳನಂಗರಾಗರಸಮುಣ್ಮುವಿನಂ ನಡೆ ನೋಡಿ ನೋಡಿ ತೊ|
ಟ್ಟಗೆ ಕೊಳೆ ಮೇಲೆ ಪಾಯ್ದವಳನಪ್ಪಿದನಾ ವಿಭು ತನ್ನ ಶಾಪಮಂ
ಬಗೆಯದೆ ಮಿೞ್ತುದೇವತೆಯನೞ್ಕಱಳುರ್ಕೆಯಿನಪ್ಪುವಂತೆವೋಲ್|| ೧೮।।
(ಸೊಗಸಾಗಿ ತೊಟ್ಟ ಹೂವಿನ ತೊಡುಗೆ ಮೆಲ್ಲನೆ ಎದೆಯಲ್ಲಿ ಸೇರಿದರೆ  ಕಣ್ಣುಗಳಲ್ಲಿ ಅನಂಗರಾಗರಸ ಹೊಮ್ಮುವಂತೆ ನೋಡಿ ನೋಡಿ ತಟ್ಟನೆ ಮೇಲೆ ಹಾಯ್ದು ಪಾಂಡು ತನ್ನ ಶಾಪವನ್ನು ನೆನಪಿಸಿಕೊಳ್ಳದೆ ಮೃತ್ಯುದೇವತೆಯನ್ನು ಅಕ್ಕರೆ ಹೆಚ್ಚಾಗಿ ಅಪ್ಪಿಕೊಳ್ಳುವಂತೆ  ಅವಳನ್ನು ಅಪ್ಪಿಕೊಂಡನು.)

ಹಾಗೆ ವಿಷಮ ವಿಷದ ಬಳ್ಳಿಯನ್ನು ಅಪ್ಪಿದಂತೆ ಇದ್ದ ನಲ್ಲಳ ಮೃದು ಮೃಣಾಲ ಸಮನಾದ ಕೋಮಲ ಬಾಹುಪಾಶಗಳೇ ಅವನ ಪಾಲಿಗೆ ಯಮಪಾಶಗಳಂತೆ ಆಯಿತು ಎಂದು ಆ ಪ್ರಸಂಗವನ್ನು ಮುಂದುವರೆಸುತ್ತಾನೆ. 

ಇಲ್ಲಿ ವಸಂತದ ವರ್ಣನೆಯಲ್ಲಿ ಕೂಡ ವಸಂತ ಆನೆಯಂತೆ ವಿಯೋಗಿಗಳನ್ನು ಪೀಡಿಸುವುದು ಹಾಗೇ ಪ್ರಣಯಿಗಳು ಬರಬೇಡಿ ಎಂದು ಸಾರಿ ಹೇಳುವುದು ಇವೆಲ್ಲ ಒಳ್ಳೆಯ ವಿಭಾವಗಳಾಗಿ ಶೃಂಗಾರ ರಸದಿಂದ ಕರುಣಾರಸಕ್ಕೆ ಸಾಗುವಲ್ಲಿ ಸೊಗಸಾಗಿ ಹೊಂದಿಕೊಳ್ಳುತ್ತವೆ.. ಕುಮಾರವ್ಯಾಸನೂ ಇದನ್ನು ಯೋಗಿಗೆತ್ತಿದ ಖದ್ಗಧಾರೆ ಎಂದೆಲ್ಲ ಬಣ್ಣಿಸಿರುವುದನ್ನು ಅವಲೋಕಿಸಬಹುದು. ಹಾಗೆಯೇ ಇಲ್ಲಿ ಸುಂದರಿಯಾದ ಮಾದ್ರಿಯನ್ನು ಮೊದಲು ಮನ್ಮಥನ ಬಾಣಕ್ಕೆ ಆಬಳಿಕ ವಿಷದ ಬಳ್ಳಿಗೆ ಮೃತ್ಯು ದೇವತೆಗೆ ಹೋಲಿಸಿ ಹೇಳಿರುವುದು ಔಚಿತ್ಯಪೂರ್ಣವಾಗಿದೆ.